



ರಾಜ್ಯದಲ್ಲಿ ಭಜರಂಗ ದಳ ಬ್ಯಾನ್ ಮಾಡುವ ಯಾವುದೇ ಪ್ರಸ್ತಾವನೆ ಕಾಂಗ್ರೆಸ್ ಪಕ್ಷದ ಮುಂದಿಲ್ಲ-ಡಾ. ಎಂ. ವೀರಪ್ಪ ಮೊಯಿಲಿ
ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಗಾಂಧಿ ಹತ್ಯೆ ಪ್ರಕರಣದಲ್ಲಿ ಆರೆಸ್ಸೆಸ್ ಅನ್ನು ಮೊದಲ ಬಾರಿ ಬ್ಯಾನ್ ಮಾಡಿದ್ದರು. ಆದರೆ ಪ್ರಧಾನಿ ನೆಹರೂ ಅವರು ಪ್ರಜಾಪ್ರಭುತ್ವದಲ್ಲಿ ಎಲ್ಲರ ಅಭಿಪ್ರಾಯಕ್ಕೆ ಬೆಲೆ ನೀಡುವ ನಿಟ್ಟಿನಲ್ಲಿ ಬ್ಯಾನ್ ಹಿಂಪಡೆದಿದ್ದರು. ಹೀಗಾಗಿ ರಾಜ್ಯದಲ್ಲಿ ಭಜರಂಗ ದಳ ಬ್ಯಾನ್ ಮಾಡುವ ಯಾವುದೇ ಪ್ರಸ್ತಾವನೆ ಪಕ್ಷದ ಮುಂದಿಲ್ಲ. ಕಾಂಗ್ರೆಸ್ಗೆ ಗಲಾಟೆ, ದೊಂಬಿಯಲ್ಲಿ ವಿಶ್ವಾಸವಿಲ್ಲ ಎಂದು ಎಐಸಿಸಿ ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯ, ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯಿಲಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 40 ಪರ್ಸೆಂಟ್ ಕಮಿಷನ್ ಸರ್ಕಾರದ ಕಾರಣಕ್ಕಾಗಿ ಐಟಿ ಉದ್ಯಮಗಳು ಗುಜರಾತ್ ಮತ್ತು ದೆಹಲಿಗೆ ಸ್ಥಳಾಂತರವಾಗುತ್ತಿವೆ. ಅನೇಕ ಶಾಸಕರು ಸೋಲುವ ಭಯದಿಂದಾಗಿ ಅಭ್ಯರ್ಥಿಗಳನ್ನು ಬದಲಾವಣೆ ಮಾಡಿದ್ದಾರೆ. ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್, ವಿಜಯಾ ಬ್ಯಾಂಕ್ಗಳನ್ನು ಉತ್ತರದ ಬ್ಯಾಂಕ್ಗಳೊಂದಿಗೆ ವಿಲೀನ ಮಾಡಿದಂತೆ ನಂದಿನಿ ಸಂಸ್ಥೆಯನ್ನು ಅಮೂಲ್ನೊಂದಿಗೆ ವಿಲೀನಗೊಳಿಸಲು ಅಮಿತ್ ಶಾ ಹುನ್ನಾರ ನಡೆಸುತ್ತಿದ್ದಾರೆ ಎಂದರು.
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತೀ ಹೆಚ್ಚಿನ ರ್ಯಾಲಿಗಳನ್ನು ಈ ಬಾರಿಯ ಚುನಾವಣೆಯಲ್ಲಿ ಹಮ್ಮಿಕೊಳ್ಳಲಾಗಿದೆ. ವಾರ್ಡ್ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಯೋಜಿಸಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶಿಸುತ್ತಿದ್ದು, ಉತ್ತಮ ಫಲಿತಾಂಶ ನಿರೀಕ್ಷಿಸಲಾಗಿದೆ. ಮೋದಿ ಮತ್ತು ಅಮಿತ್ ಶಾ ಅವರಿಗೆ ಕರ್ನಾಟಕ ಬಿಟ್ಟು ಹೋಗಲು ಮನಸ್ಸಿಲ್ಲ. ಗೃಹ ಮಂತ್ರಿಯಾಗಿ ಶಾ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದು, ಹತಾಶ ಭಾವನೆ ಅವರಲ್ಲಿ ಕಾಣುತ್ತಿದೆ.
ರಾಜ್ಯಮಟ್ಟದಲ್ಲಿ ಬಿಜೆಪಿಗೆ ಆತ್ಮವಿಶ್ವಾಸ ಕೊರತೆ ಇದೆ ಎಂದರು. ಭಾರತದಲ್ಲಿ 9 ವರ್ಷದ ಬಿಜೆಪಿ ಆಡಳಿತದಲ್ಲಿ ಬಡವರು ಬೆಲೆ ಏರಿಕೆ ಸಂಕಷ್ಟದಿಂದ ತತ್ತರಿಸಿದ್ದಾರೆ. ಪ್ರಗತಿಯ ಫಲ ಕೇವಲ ಶೇ.1ರಷ್ಟು ಇರುವ ಶ್ರೀಮಂತ ವರ್ಗಕ್ಕೆ ಹೋಗುತ್ತಿದೆ. ಮಧ್ಯಮ ವರ್ಗದವರು ಬಡವರಾಗುತ್ತಿದ್ದಾರೆ. ಬಡವರು ಕಡು ಬಡವರಾಗುತ್ತಿದ್ದಾರೆ. ಈ ಬಗ್ಗೆ ನಿಖರ ಅಂಕಿಅಂಗಳು ಲಭ್ಯವಾಗಬಾರದು ಎಂಬ ನಿಟ್ಟಿನಲ್ಲಿ ಯುಪಿಎ ಸರ್ಕಾರ ಆರಂಬಿಸಿದ್ದ ಎನ್ಎಸ್ಎ ಸರ್ವೆ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ.
ಸಮಾಜದಲ್ಲಿ ಕ್ಷೋಭೆಯ ಕಾರಣಕ್ಕೆ ಕಳೆದ ವರ್ಷ 2.25 ಲಕ್ಷ ಮಂದಿ ಭಾರತದ ಪೌರತ್ವ ತೊರೆದು ವಿದೇಶದಲ್ಲಿ ನೆಲೆಸಿದ್ದಾರೆ. ಸಂಪತ್ತಿನ ಅಸಮಾನತೆ ಬಗ್ಗೆ ಪ್ರಧಾನಿ ಮಾತನಾಡುತ್ತಿಲ್ಲ. ಪ್ರಜಾಪ್ರಭುತ್ವದ ಆಡಳಿತದಲ್ಲಿ ಜನ ವಿಶ್ವಾಸ ಕಳೆದುಕೊಂಡಿದ್ದು, ದೇಶದಲ್ಲಿ ಮಿಲಿಟರಿ ರೂಲ್ ಬರುತ್ತಿದೆ ಎಂದು ಆತಂಕವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಸಂಸದ ಪ್ರತಾಪನ್, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಎಂ.ಎ.ಗಪೂರ್, ದಿನೇಶ್ ಪುತ್ರನ್, ಹರೀಶ್ ಕಿಣಿ, ಭಾಸ್ಕರ ರಾವ್ ಕಿದಿಯೂರು, ರಮೇಶ್ ಕಾಂಚನ್, ಸೌರಭ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.