ರಾಮ ಮಂದಿರಕ್ಕೆ ಮುಕೇಶ್ ಅಂಬಾನಿ 900 ಕೋಟಿ ಹಣ ದೇಣಿಗೆ ನೀಡಿದ್ದರು. ಅದಕ್ಕೆ ಲೆಕ್ಕ ಇಲ್ಲ ಎಂದು ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ , ಇತಿಹಾಸದಲ್ಲಿ ಮಹಮ್ಮದ್ ಘಜ್ನಿ ಬಿಟ್ಟರೆ ಬಿಜೆಪಿಯವರೇ ದೇಶವನ್ನ ಲೂಟಿ ಮಾಡಿದ್ದು ಎಂದು ವಾಗ್ದಾಳಿ ನಡೆಸಿದರು.
ಇತಿಹಾಸ ಅಂದ್ರೆ ಮಹಮ್ಮದ್ ಘಜ್ನಿ ಅಂತಾರೆ, ಲೂಟಿ ಹೊಡೆದವನು ಅಂತ ಬಿಜೆಪಿಯವರು ಪದೇ ಪದೇ ಹೇಳ್ತಾರೆ. ಘಜ್ನಿ ಬಿಟ್ಟರೆ ಬಿಜೆಪಿಯವರೇ ಲೂಟಿ ಮಾಡಿದ್ದು. ಈ ಹಿಂದೆ ರಾಮಮಂದಿರ ಕಟ್ತೇವೆ ಅಂತ ಲೂಟಿ ಹೊಡೆದಿದ್ರು. ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ. ಈಗ ಪೇಜಾವರ ಶ್ರೀಗಳು ಲೆಕ್ಕ ಕೇಳಿದ್ದಾರೆ. ಪ್ರಹ್ಲಾದ್ ಜೋಶಿ ಶ್ರೀಗಳ ವಿರುದ್ಧ ಇದ್ದಾರಾ? ಶ್ರೀಗಳ ಮಾತಿಗೆ ಏನು ಹೇಳ್ತಾರೆ ಎಂದು ಪ್ರಶ್ನಿಸಿದರು.
ರಾಮಮಂದಿರ ದೇಣಿಗೆ ವಿವಾದ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಜೋಶಿ ಅವರು ಕೇಂದ್ರದ ಮಂತ್ರಿ, ಅಪಾರ ಜ್ಞಾನಭಂಡಾರದ ಮೂರ್ತಿ. ನನಗೆ ಹೇಳ್ತಾರಂತೆ ನಾನ್ಯಾಕೆ ಅವರ ಮಾತು ಕೇಳಬೇಕು? ಹಿಂದೆ ಯಡಿಯೂರಪ್ಪ ಪಕ್ಷ ತೊರೆದಿದ್ರು ಆಗ ಅವರ ಬಗ್ಗೆ ಜೋಶಿ ಏನೇನೆಲ್ಲ ಹೇಳಿದ್ರು? ಈಗ ಅವರ ಪಾದಪೂಜೆ ಮಾಡ್ತಾರೆ ರಾಮಮಂದಿರ ಟ್ರಸ್ಟ್ ನವರು ಲೆಕ್ಕ ಕೊಡಲ್ಲ ಅಂತಾರೆ. ಇವರು ರಾಮನನ್ನೂ ಬಿಟ್ಟಿಲ್ಲ. ರಾಮನ ಹೆಸರಲ್ಲಿ ಕಳ್ಳತನ, ಲೂಟಿ ಮಾಡಿದ್ರು ಎಂದು ಕಿಡಿ ಕಾರಿದರು.

















