ಕಡ್ತಲದ ಹಿರಿಯ ಸಮಾಜ ಸೇವಕ, ರಾಜಕೀಯ ಹಾಗೂ ಧಾರ್ಮಿಕ ಮುಂದಾಳು ವೆಂಕಪ್ಪ ನಾಯ್ಕ್ ರಿಗೆ ಗಣ್ಯರಿಂದ ನುಡಿ ನಮನ ಹಿರಿಯ ಧಾರ್ಮಿಕ ಮುಂದಾಳು, ಸಮಾಜ ಸೇವಕರು ಹಾಗೂ ರಾಜಕೀಯ ಧುರೀಣ ಕಡ್ತಲ ವೆಂಕಪ್ಪ ನಾಯ್ಕ್ ರವರ ಶ್ರದ್ಧಾಂಜಲಿ ಸಭೆ ಹಾಗೂ ನುಡಿ ನಮನ ಕಾರ್ಯಕ್ರಮವು ಕಡ್ತಲ ಸಿರಿಬೈಲು ದೇವಸ್ಥಾನದ ಸಭಾಂಗಣದಲ್ಲಿ ಜೂ. 30 ರಂದು ನಡೆಯಿತು.
ಈ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕ ಕರುಣಾಕರ ಹೆಗ್ಡೆ ವೆಂಕಪ್ಪ ನಾಯ್ಕ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತಾನಾಡಿ,ಧಾರ್ಮಿಕ ಮುಂದಾಳು, ಸಮಾಜ ಸೇವಕ ವೆಂಕಪ್ಪ ನಾಯ್ಕ್ ಅವರು ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿ ಉತ್ತಮ ಹೆಸರು ಗಳಿಸಿದ್ದರು.ಪಂಚಾಯತ್ ಬೋರ್ಡ್ ಹಾಗೂ ಮಂಡಲ ಪಂಚಾಯತ್ ಸದಸ್ಯರಾಗಿ ಅಂದಿನ ಶಾಸಕ ವೀರಪ್ಪ ಮೊಯ್ಲಿಯವರಿಂದ ರಸ್ತೆ, ಕುಡಿಯುವ ನೀರು, ಸೇತುವೆ ಸಹಿತ ಹಲವಾರು ಕಾಮಗಾರಿಗಳನ್ನು ಮಾಡಿಸಿ ಜನಮನ್ನಣೆ ಗಳಿಸಿದ್ದರು ಎಂದರು.
ಇದಲ್ಲದೇ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಕೂಡ ತನ್ನ ಛಾಪು ಮೂಡಿಸಿದ್ದರು, ಕಡ್ತಲ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ್ದರು. ಇದರ ಜೊತೆಗೆ ಧಾರ್ಮಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ವೆಂಕಪ್ಪ ನಾಯ್ಕ್ ರವರು ಎಳ್ಳಾರೆ ದೇವಸ್ಥಾನಬೆಟ್ಟು ಮಹಮ್ಮಾಯಿ ಹತ್ತು ಸಮಸ್ತರ ಕಟ್ಟೆಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ತನ್ನ ಛಾಪು ಮೂಡಿಸಿದ್ದರು ಎಂದರು.
ನಿವೃತ್ತ ಅಪರ ಜಿಲ್ಲಾಧಿಕಾರಿ IAS ಅಧಿಕಾರಿ ಸದಾಶಿವ ಪ್ರಭು ನುಡಿನಮನ ಸಲ್ಲಿಸಿ, ವೆಂಕಪ್ಪ ನಾಯ್ಕ್ ಸರಳ,ಸಜ್ಜನಿಕೆಯ ವ್ಯಕ್ತಿತ್ವದ ಗುಣ ಹೊಂದಿದ್ದರು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಹೃದಯಿ ವ್ಯಕ್ತಿತ್ವ ಮೈಗೂಡಿಸಿಕೊಂಡಿದ್ದರು ಎಂದರು.
ಈ ಸಂದರ್ಭದಲ್ಲಿ ಉಡುಪಿ ಪುರಸಭಾ ಸದಸ್ಯರು,ಮಾಜಿ ಪಂಚಾಯತ್ ಅಧ್ಯಕ್ಷರು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾಮಾಜಿಕ ಧುರೀಣರು, ಅಪಾರ ಅಭಿಮಾನಿಗಳು ಕುಟುಂಬ ಸದಸ್ಯರು,ಬಂಧು ಮಿತ್ರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾರ್ಕಳ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ ನಡೆಯಿತು. ಉಮೇಶ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

















