ಗ್ಯಾರಂಟಿ ಸರಕಾರಕ್ಕೆ ‌ಎರಡು ವರ್ಷದ‌ ಸಂಭ್ರಮ ನಮ್ಮದು ಮನ್ ಕೀ ಬಾತ್ ಅಲ್ಲ ಕಾಮ್ ಕೀ ಬಾತ್ ಸರಕಾರ-ಶುಭದ್‌ರಾವ್

0

ಗ್ಯಾರಂಟಿ ಸರಕಾರಕ್ಕೆ ‌ಎರಡು ವರ್ಷದ‌ ಸಂಭ್ರಮ

ನಮ್ಮದು ಮನ್ ಕೀ ಬಾತ್ ಅಲ್ಲ ಕಾಮ್ ಕೀ ಬಾತ್ ಸರಕಾರ

ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳ ಪೂರ್ಣ ಬಹುಮತದೊಂದಿಗೆ ಆಶೀರ್ವದಿಸಿ ಐತಿಹಾಸಿಕ ಗೆಲುವಿನೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಗ್ಯಾರಂಟಿ ಸರ್ಕಾರಕ್ಕೆ ಇದೀಗ ಎರಡನೇ ವರ್ಷದ ಸಂಭ್ರಮ, ಇದು ಕೇವಲ ಕಾಂಗ್ರೆಸ್ ಪಕ್ಷದ ಸಂಭ್ರಮವಲ್ಲ ಬದಲಿಗೆ ಇದು ಕರ್ನಾಟಕ ಜನತೆಯ ಸಂಭ್ರಮ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್‌ರಾವ್ ಅಭಿಪ್ರಾಯಪಟ್ಟಿದ್ದಾರೆ.

ಪಂಚ ಗ್ಯಾರಂಟಿ ಯೋಜನೆಗಳ ಆಶ್ವಾಸನೆಯೊಂದಿಗೆ ಚುನಾವಣೆ ಎದುರಿಸಿದ ರಾಜ್ಯ ಕಾಂಗ್ರೆಸ್ ಪಕ್ಷವು ಜನತೆಯ ಆಶಯಕ್ಕೆ ಚ್ಯುತಿ ಬಾರದೆ ತನ್ನ ಪಂಚ ಗ್ಯಾರಂಟಿಗಳ ಆಶ್ವಾಸನೆಯನ್ನು ಯಶಸ್ವಿಯಾಗಿ ಈಡೇರಿಸಿದ್ದು ಸರ್ಕಾರದ ಇಚ್ಚಾಶಕ್ತಿಯಿಂದಾಗಿ ಜನಪರ ಯೋಜನೆಗಳ ಯಶಸ್ವಿ ಅನುಷ್ಠಾನವಾಗಿ ರಾಜ್ಯದ ಜನತೆಯು ಪಂಚ ಗ್ಯಾರಂಟಿಗಳ ಲಾಭ ಪಡೆದು ಕೋಟ್ಯಾಂತರ ಕುಟುಂಬಗಳಿಂದು ನೆಮ್ಮದಿಯ ಬದುಕು ಕಟ್ಟಿಕೊಂಡಿದೆ.

ಶಕ್ತಿ ಯೋಜನೆಯು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯಗಳನ್ನು ಒದಗಿಸಿದ್ದು ಶಕ್ತಿ ಯೋಜನೆಯಡಿ ಒಟ್ಟು ಪ್ರಯಾಣಿಸಿದವರ ಪ್ರಯಾಣಗಳ ಸಂಖ್ಯೆ: 458 ಕೋಟಿ, ಹಾಗೂ ಇದಕ್ಕೆ ತಗುಲಿದ ವೆಚ್ಚ: ₹8,815 ಕೋಟಿ ರೂಪಾಯಿಗಳು.

ಗೃಹಿಣಿಯರಿಗೆ ತಿಂಗಳಿಗೆ ಕೊಡಲಾಗುವ 2000 ರೂಪಾಯಿಯ ಗೃಹಲಕ್ಷ್ಮಿ ಯೋಜನೆಯಲ್ಲಿ ಒಟ್ಟು ಫಲಾನುಭವಿಗಳು: 1.25 ಕೋಟಿ ಹಾಗೂ ಇದಕ್ಕೆ ಸರ್ಕಾರಿ ಭರಿಸಿದ ಮೊತ್ತ 47,773 ಕೋಟಿ ರೂಪಾಯಿಗಳು.

ಗೃಹಜ್ಯೋತಿ ಯೋಜನೆಯಡಿ
ಮನೆ ಮನೆಗೆ ಪ್ರತಿ ತಿಂಗಳು 200 ಯೂನಿಟ್ ಉಚಿತ್ ವಿದ್ಯುತ್ ಯೋಜನೆಯ ಫಲಾನುಭವಿಗಳು 1.63 ಕೋಟಿ ಕುಟುಂಬಗಳು ಹಾಗೂ ಗೃಹಜ್ಯೋತಿ ಯೋಜನೆಗೆ ತಗುಲಿದ ವೆಚ್ಚ 18,900 ಕೋಟಿ ರೂಪಾಯಿಗಳು.

ಜನರ ಹಸಿವು ನೀಗಿಸುವ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳು: 4.42 ಕೋಟಿ ಜನರು ಹಾಗೂ ಇದರ ವೆಚ್ಚ 13,564 ಕೋಟಿ ರೂಪಾಯಿಗಳು.

ಔದ್ಯೋಗಿಕ ಜೀವನಕ್ಕೆ ಪ್ರವೇಶಿಸುವ ಹಂತದಲ್ಲಿರುವ ಯುವ ಸಮುದಾಯಕ್ಕೆ ಶಕ್ತಿ ನೀಡಲು ಯುವನಿಧಿ ಯೋಜನೆಯಡಿ ಪದವಿ ಅಥವಾ ಡಿಪ್ಲೊಮಾ ಮುಗಿಸಿದ ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 1500–3000 ರೂಪಾಯಿಗಳ ವೇತನ ರೂಪದ ಸಹಾಯ ಧನ ನೀಡಲಾಗುತ್ತಿದ್ದು ಇದರ ಫಲಾನುಭವಿಗಳು 3.70 ಲಕ್ಷ ಯುವಕರು ಮತ್ತು ಈ ಯೋಜನೆಗೆ ತಗುಲಿದ ವೆಚ್ಚ 376 ಕೋಟಿ ರೂಪಾಯಿಗಳಾಗಿದೆ.

ಈ ಐದೂ ಗ್ಯಾರಂಟಿಗಳ ಒಟ್ಟು ವೆಚ್ಚ 89,428 ಕೋಟಿ ರೂಪಾಯಿಗಳಾಗಿದೆ. ರಾಜ್ಯದ ಕಟ್ಟ ಕಡೆಯ ಜನರ ಶ್ರೇಯೋಭಿವೃದ್ದಿಗಾಗಿ ಕೆಲಸ ಮಾಡುವ ಕಾಂಗ್ರೆಸ್ ಸರ್ಕಾರವು ಇದು “ಮನ್ ಕೀ ಬಾತ್” ಸರ್ಕಾರ ಅಲ್ಲ “ಕಾಮ್ ಕೀ ಬಾತ್” ಸರ್ಕಾರ” ಆಗಿದೆ. ರಾಜ್ಯದಲ್ಲಿ ಒಬ್ಬನೇ ಒಬ್ಬ ಫಲಾನುಭವಿಯೂ ಕೂಡ ಇಲ್ಲಿ ತನಕ ಗ್ಯಾರಂಟಿ ಯೋಜನೆಗಳನ್ನು ತಿರಸ್ಕರಿಸಿದ ಉದಾಹರಣೆಗಳಿಲ್ಲ, ಹಾಗಾಗಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನರೂ ಮುಕ್ತ ಮನಸ್ಸಿನಿಂದ ಸ್ವೀಕಾರ ಮಾಡಿರುವುದಕ್ಕೆ ಇದು ಉದಾಹರಣೆಯಾಗಿದೆ ಮತ್ತು ಗ್ಯಾರಂಟಿ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ರಾಜ್ಯ ಬಿಜೆಪಿಗೆ ಜನತೆ ನೀಡಿದ ತಪರಾಕಿಯಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

   

LEAVE A REPLY

Please enter your comment!
Please enter your name here