ಕಾರ್ಕಳದ ಮೆಸ್ಕಾಮ್ ಏ.ಓ. ಗಿರೀಶ್ ರಾವ್ ರವರ ಮೇಲೆ ಲೋಕಾಯುಕ್ತ ವಿಚಾರಣೆ ನಡೆಸಿದ ಬಗ್ಗೆ ಹಲವಾರು ಊಹಾಪೋಹ ಅಂತೆಕಂತೆಗಳು ಹಬ್ಬಿದ್ದು ಈ ಕುರಿತು ನೇರವಾಗಿ ಮಾಧ್ಯಮಗಳು ಗಿರೀಶ್ ರಾವ್ ರವರನ್ನು ಪ್ರಶ್ನಿಸಿದ್ದಾಗ ಸಾರ್ವಜನಿಕ ತಿಳಿವಿಗೆ ಅವರು ಪ್ರಕಟಪಡಿಸಿದ ಮಾಹಿತಿ.
*ನಾನು ಕಾರ್ಕಳ ಮೆಸ್ಕಾಂ ವಿಭಾಗದಲ್ಲಿ ಲೆಕ್ಕಾಧಿಕಾರಿಯಾಗಿ ಕರ್ತವ್ಯನಿಷ್ಠೆಯಿಂದ,ದಕ್ಷತೆಯಿಂದ ಪ್ರಾಮಾಣಿಕತೆಯಿಂದ ಗ್ರಾಹಕರಿಗೆ ನನ್ನ ಸೇವೆಯನ್ನು ನೀಡುತ್ತಾ ಬಂದಿದ್ದು,ನನ್ನ ವಿರುದ್ದ ಇಲಾಖೆಯಲ್ಲಿ ಯಾವುದೇ ದೂರುಗಳಾಗಲೀ ಆಪಾದನೆಗಳಾಗಲೀ ಇಲ್ಲ.ಅಕ್ರಮವಾಗಿ ಕಾನೂನು ಬಾಹಿರ ವಾಗಿ ನಾನು ಯಾವುದೇ ಆಸ್ತಿ ಸಂಪತ್ತು ಹಣ ಒಡವೆ ಹೊಂದಿರುವುದಿಲ್ಲ.ಹಾಗಾಗಿ ಲೋಕಾಯುಕ್ತ ದಾಳಿಯಿಂದ ನನಗೆ ಶಾಕ್ ಆಗಿದೆ ಎನ್ನುವ ವರದಿ ತೀರಾ ಹಾಸ್ಯಾಸ್ಪದ.ನಾನು ನ್ಯಾಯಪರತೆ ಹೊಂದಿರುವುದರಿಂದಲೇ ಯಾವುದೇ ಶಾಕ್ ಗೆ ಒಳಗಾಗಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ.
*2.98 ಕೋಟಿ ಅಕ್ರಮ ಸಂಪತ್ತು ಹೊಂದಿದ್ದೇನೆ ಎಂಬ ವರದಿಯು ಸತ್ಯಕ್ಕೆ ತೀರಾ ದೂರವಾದುದಾಗಿದೆ.ನನ್ನ ಹೆಂಡತಿಯ ಹೆಸರಿನಲ್ಲಿರುವ ಹೊಟೇಲ್ ಗೆ ಸಂಬಂದ ಪಟ್ಟ ಆಸ್ತಿಗೆ 2.25 ಕೋಟಿ ಬ್ಯಾಂಕ್ ಆಫ್ ಬರೋಡಾ ಹಾಗೂ ಐಸಿಐಸಿಐ ಬ್ಯಾಂಕ್ ಕಾರ್ಕಳ ಶಾಖೆಯಲ್ಲಿ ಸಾಲ ಇರುತ್ತದೆ.
*ತಪ್ಪು ತಿಳುವಳಿಕೆಯಿಂದಾಗಿ ಹಲವರು ಸಾರ್ವಜನಿಕವಾಗಿ ಪ್ರಚುರಪಡಿಸಿದಂತೆ ನನ್ನ ಒಡೆತನದಲ್ಲಿ ಯಾವುದೇ ಹೊಟೇಲ್,ವಾಣಿಜ್ಯ ಸಂಕೀರ್ಣ ಇರುವುದಿಲ್ಲ.
*ಮನೆಯಲ್ಲಿ ಇದ್ದದ್ದು ಕೇವಲ ನಾಲ್ಕು ಸಾವಿರ ರೂಪಾಯಿ ಹಾಗೂ 189 ಗ್ರಾಂ ಚಿನ್ನ ಮಾತ್ರ.ಮನೆಯಲ್ಲಿ ಇರುವ ಹಳೆಯ ಹಾಗೂ ಹೊಸ ಸಾಮಾಗ್ರಿಗಳ ಮೌಲ್ಯಗಳನ್ನು ಆದರಿಸಿ ಲೋಕಾಯುಕ್ತದವರು ವರದಿ ನೀಡಿದ್ದಾರೆ.
*ನನ್ನ ಎಲ್ಲಾ ಆಸ್ತಿ ನ್ಯಾಯಬದ್ದವಾಗಿದ್ದು, ಯಾವುದೇ ಅಕ್ರಮ ದಾರಿಯಲ್ಲಿ ಸಂಪಾದನೆ ಮಾಡಿರುವುದಿಲ್ಲ.
*ನನ್ನ ವರಮಾನ ಗಳಿಕೆ ಕಾನೂನು ಪ್ರಕಾರ ತೆರಿಗೆ ಪಾವತಿಸಿ ಸಂಪಾದಿಸಿದ್ದಾಗಿದ್ದು ಎಲ್ಲವೂ ಪಾರದರ್ಶಕವಾಗಿದೆ.ಈ ಹಿನ್ನಲೆಯಲ್ಲಿ ಯಾವುದೇ ಅಳುಕಿಲ್ಲದೇ ಲೋಕಾಯುಕ್ತ ತನಿಖೆಗೆ ಮುಕ್ತ ಸಹಕಾರ ನೀಡಿದ್ದೇನೆ.
ಸಾರ್ವಜನಿಕ ಸೇವೆಯಲ್ಲಿ ಇರುವ ಓರ್ವ ಸರಕಾರಿ ಅಧಿಕಾರಿಯಾಗಿ ಜನರಲ್ಲಿ ಮೂಡಿದ ತಪ್ಪು ತಿಳುವಳಿಕೆಯನ್ನು ನಿವಾರಿಸುವ ಸದುದ್ದೇಶದಿಂದ ಈ ಸ್ಪಷ್ಟನೆಯನ್ನು ಮಾಧ್ಯಮದ ಮುಂದಿರಿಸಿದ್ದೇನೆ.