ಜ್ಞಾನಸುಧಾ : ಸಂಸ್ಥಾಪಕರ ಜನ್ಮ ದಿನಾಚರಣೆ, ಸಾಮಾಜಿಕ ಕಾರ್ಯಕ್ರಮ, ರಕ್ತದಾನ ಶಿಬಿರ

0

ಜ್ಞಾನಸುಧಾ : ಸಂಸ್ಥಾಪಕರ ಜನ್ಮ ದಿನಾಚರಣೆ, ಸಾಮಾಜಿಕ ಕಾರ್ಯಕ್ರಮ, ರಕ್ತದಾನ ಶಿಬಿರ

ಆಡಂಬರರಹಿತ ಆರ್ಥಪೂರ್ಣ ಕಾರ್ಯಕ್ರಮ : ಡಾ.ಸಂಜಯ್

ಸಾಮಾಜಿಕ ಪ್ರಜ್ಞೆಯ ಜವಾಬ್ದಾರಿಯನ್ನು ಹೊಂದಿದ ಅರ್ಥಪೂರ್ಣ ಆಡಂಬರರಹಿತ ಜ್ಞಾನಸುಧಾದ ಕಾರ್ಯಗಳು ಪ್ರಶಂಸನೀಯ. ಸಭ್ಯತೆ, ನಡೆನುಡಿಯ ಸಾಕಾರಮೂರ್ತಿ ಡಾ.ಸುಧಾಕರ್ ಶೆಟ್ಟಿಯವರು ಎಂದು ಕಾರ್ಕಳ ಟಿ.ಎಂ.ಎಪೈ ರೋಟರಿ ಆಸ್ಪತ್ರೆಯ ಪ್ರಸೂತಿ, ಸ್ತ್ರಿರೋಗ ತಜ್ಞ ಡಾ. ಸಂಜಯ್ ಹೇಳಿದರು.

ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ದಿ.ಗೋಪ ಶೆಟ್ಟಿಯವರ 104ನೇ ಜನ್ಮದಿನದ ಅಂಗವಾಗಿ ಆಗಸ್ಟ್ 21ರಂದು ನಡೆದ ಸಾಮಾಜಿಕ ನೆರವಿನ ಸೇವಾ ಕಾಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ ಸಮಾಜ ಸೇವಕ ಅಂಬಲಪಾಡಿ ವಿಶು ಶೆಟ್ಟಿ ಹಾಗೂ ಸ್ವಚ್ಛ ಕಾರ್ಕಳದ ರಾಯಭಾರಿ ಫೆಲಿಕ್ಸ್ ಜೋಸೆಫ್ ವಾಜ್‌ರವರಿಗೆ ತಲಾ 10 ಸಾವಿರ, ಕುಕ್ಕುಂದೂರು, ಹಿರ್ಗಾನ, ಅಜೆಕಾರ್ ಹಾಗೂ ಬೈಲೂರು ಗ್ರಾಮದ 18 ಸ್ವಚ್ಛತಾ ಸಿಬ್ಬಂದಿಗಳಿಗೆ ತಲಾ 5 ಸಾವಿರ ನೀಡಿ ಗೌರವಿಸಲಾಯಿತು. ಕ್ಷಯಪೀಡಿತ 8 ಜನರಿಗೆ ತಲಾ 3 ಸಾವಿರದಂತೆ ರೂ. 24 ಸಾವಿರ, ಅಪಘಾತಕ್ಕೀಡಾದ ಹಳೆವಿದ್ಯಾರ್ಥಿ ಕಿರಣ್ ನಾಯಕ್‌ರವರಿಗೆ ರೂ. 20 ಸಾವಿರ, ತೊರೆಹಡ್ಲು ಶಾಲೆಗೆ ರೂ. 10 ಸಾವಿರ ಸೇರಿದಂತೆ ಈ ಮೂಲಕ ಶೈಕ್ಷಣಿಕ, ಸಾಮಾಜಿಕ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ 1.6 ಲಕ್ಷ ರೂ. ಧನಸಹಾಯ ಮಾಡಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಸಮಾಜ ಸೇವಕ ವಿಶು ಶೆಟ್ಟಿಯವರು ಯುವಜನತೆ ದುಶ್ಚಟಗಳಿಗೆ ಒಳಗಾಗದೆ ಸದೃಢ ಸಮಾಜದ ಆಸ್ತಿಯಾಗಿ ಸಮಾಜದಲ್ಲಿ ಮಾದರಿಯಾಗಿ ಹೊರ ಹೊಮ್ಮಬೇಕು ಎಂದರು.

ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ವಿದ್ಯಾರ್ಥಿಗಳು ಮೌಲಿಕ ವಿಚಾರಧಾರೆಯನ್ನು ಮೈಗೂಡಿಸಿಕೊಂಡಾಗ ನಮ್ಮ ಸಾಮಾಜಿಕ ಸೇವೆಯು ಸಾರ್ಥಕ ಎಂದರು.

ಕಾರ್ಯಕ್ರಮದಲ್ಲಿ ಕುಕ್ಕುಂದೂರು ಗ್ರಾಮ ಪಂಚಾಯತ್ ಸದಸ್ಯ ರಹಮತ್ತುಲ್ಲಾ, ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಅನಿಲ್ ಕುಮಾರ್ ಜೈನ್, ಮಣಿಪಾಲ್ ಹೈಸ್ಕೂಲ್ ಟ್ರಸ್ಟಿನ ಅಧ್ಯಕ್ಷ ಹಾಗೂ ಸಂಚಾಲಕ ಪ್ರಕಾಶ್ ಶೆಟ್ಟಿ, ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲ ದಿನೇಶ್ ಎಂ ಕೊಡವೂರ್, ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂತೋಷ್, ಮಣಿಪಾಲ್ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಗಣೇಶ್, ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ ಉಪಸ್ಥಿತರಿದ್ದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ ಕುಲಾಲ್ ನಿರೂಪಿಸಿ ವಂದಿಸಿದರು.

ರಕ್ತದಾನ ಶಿಬಿರ : ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ದಿ.ಗೋಪ ಶೆಟ್ಟಿಯವರ 104 ನೇ ಜನ್ಮದಿನದ ಅಂಗವಾಗಿ ಆಗಸ್ಟ್ 21 ರಂದು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು, ಹಳೆವಿದ್ಯಾರ್ಥಿ ಸಂಘ ಜ್ಞಾನಸುಧಾ ಹಾಗೂ ಕೆ.ಎಂ.ಸಿ. ಬ್ಲಡ್‌ಸೆಂಟರ್‌ನ ನೆರವಿನೊಂದಿಗೆ ರಕ್ತದಾನ ಶಿಬಿರ ಜರುಗಿತು. ರಕ್ತದಾನ ಶಿಬಿರವನ್ನು ಕಸ್ತೂರ್ಬಾ ಹಾಸ್ಪಿಟಲ್ ರಕ್ತನಿಧಿ ಹಾಗೂ ಎಚ್.ಬಿ.ಟಿ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಡಾ.ಗಣೇಶ್ ಮೋಹನ್ ಉದ್ಘಾಟಿಸಿ ರಕ್ತದಾನ ಮಹಾದಾನವಾಗಿದೆ. ಜ್ಞಾನಸುಧಾ ಸಂಸ್ಥೆಯು ಸಂಸ್ಥಾಪಕರ ದಿನಾಚರಣೆಯನ್ನು ಸಾಮಾಜಿಕ ಕಾರ್ಯಕ್ರಮದ ಮೂಲಕ ಕೈಗೊಳ್ಳುತ್ತಿರುವ ಸೇವೆ ಶ್ಲಾಘನೀಯ ಎಂದರು. ರಕ್ತದಾನ ಶಿಬಿರದಿಂದ 83 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ ಕೊಡವೂರ್, ಉಪಪ್ರಾಂಶುಪಾಲರಾದ ಸಾಹಿತ್ಯ, ಉಷಾ ರಾವ್ ಯು, ಡೀನ್ ಅಕಾಡೆಮಿಕ್ಸ್ ಡಾ. ಮಿಥುನ್ ಯು ಮತ್ತು ಹಿತೈಶಿ ದೇವೇಂದ್ರ ನಾಯ್ಕ್ ಉಪಸ್ಥಿತರಿದ್ದರು. ಸಂಸ್ಥೆಯ ಪಿ.ಆರ್.ಒ ಶ ಜ್ಯೋತಿಪದ್ಮನಾಭ ಭಂಡಿ ಸ್ವಾಗತಿಸಿ, ಕನ್ನಡ ವಿಭಾಗದ ಉಪನ್ಯಾಸಕ ವಿನಯಚಂದ್ರ ನಿರೂಪಿಸಿ ವಂದಿಸಿದರು.

 

LEAVE A REPLY

Please enter your comment!
Please enter your name here