ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಸೋಮವಾರ ಮತ್ತೆ ಇಂಧನ ದರವನ್ನು ಏರಿಕೆ ಮಾಡಿದ್ದು, ಪ್ರತಿ ದಿನದ ಈ ಲೂಟಿಯಿಂದ ಯಾರಿಗೆ ಲಾಭವಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
ಸೋಮವಾರ ಮತ್ತೆ ಪ್ರತಿ ಲೀಟರ್ ಪೆಟ್ರೋಲ್ ಗೆ 2.61 ರೂ. ಹಾಗೂ ಪ್ರತಿ ಲೀಟರ್ ಡೀಸೆಲ್ ಗೆ 2.71 ರೂ. ದರ ಏರಿಕೆ ಮಾಡಲಾಗಿದೆ. ಪಶ್ಚಿಮ ಏಶ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕ ಕಚ್ಚಾ ತೈಲದ ಬೆಲೆಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ, ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಎರಡು ವಾರಗಳಿಗೂ ಕಡಿಮೆ ಅವಧಿಯಲ್ಲಿ ಇದು ನಾಲ್ಕನೆಯ ಬಾರಿ ತೈಲ ಬೆಲೆ ಏರಿಕೆ ಮಾಡಿವೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, “ಪ್ರತಿ ದಿನದ ಇಂಧನ ಲೂಟಿಯ ದಾಳಿ ಇನ್ನೂ ಮುಗಿದಿಲ್ಲ! ಕಳೆದ 10 ದಿನಗಳಲ್ಲಿ ಇದು ನಾಲ್ಕನೆಯ ಬಾರಿ ಏರಿಕೆ!! ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 7.35 ರೂ. ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 7.53 ರೂ. ಏರಿಕೆಯಾಗಿದೆ” ಎಂದು ಹರಿಹಾಯ್ದಿದ್ದಾರೆ.
“ಸಾಮಾನ್ಯ ಜನರ ಉಳಿತಾಯದ ಹಣವನ್ನು ಸುಟ್ಟು ಬೂದಿ ಮಾಡಲು ಮೋದಿ ಸರಕಾರ ಪೆಟ್ರೋಲ್ ಅನ್ನು ಚಿಮುಕಿಸುತ್ತಿದೆ” ಎಂದೂ ಅವರು ವ್ಯಂಗ್ಯವಾಡಿದ್ದಾರೆ.
“ಯುಪಿಎ ಸರಕಾರದ ಅವಧಿಯಲ್ಲಿ ಪ್ರತಿ ಸೆಂಟ್ ಕಚ್ಚಾ ತೈಲದ ಬೆಲೆ ಶೇ. 175.34ರಷ್ಟು ಏರಿಕೆ ಕಂಡಿತ್ತು. ಆದರೆ, ಮೋದಿ ಸರಕಾರದ ಅವಧಿಯಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಒಂದು ಸೆಂಟ್ ಬೆಲೆ ಕೂಡಾ ಏರಿಕೆಯಾಗಿಲ್ಲ. ಅದರ ಹೊರತಾಗಿಯೂ ಮೋದಿ ಸರಕಾರ 2014ರಲ್ಲಿ 71.41 ರೂ.ನಷ್ಟಿದ್ದ ಪೆಟ್ರೋಲ್ ಬೆಲೆಯನ್ನು 2026ರಲ್ಲಿ 102.12 ರೂ.ಗೆ ಏರಿಕೆ ಮಾಡಿತ್ತು. ಇದು ಪ್ರತಿ ಲೀಟರ್ ಗೆ ಶೇ. 43.01ರಷ್ಟು ಏರಿಕೆಯಾಗಿದೆ. ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ ಗೆ 56.71 ರೂ.ನಿಂದ 95.20 ರೂ.ಗೆ ಏರಿಕೆ ಮಾಡಿತ್ತು. ಇದು ಪ್ರತಿ ಲೀಟರ್ ಗೆ ಶೇ. 67.87 ಏರಿಕೆಯಾಗಿದೆ” ಎಂದು ಅವರು ಬೊಟ್ಟು ಮಾಡಿದ್ದಾರೆ.


























