ಹೆಬ್ರಿ ತಾಲ್ಲೂಕಿನ ಚಾರ ಗ್ರಾಮದ ಕ್ಯಾಕಂಜೆ ಎಂಬಲ್ಲಿ ಸರ್ಕಾರಿ ಸಾರ್ವಜನಿಕ ರಸ್ತೆಯನ್ನು ರಸ್ತೆಯ ಮಧ್ಯೆಯೆ ಕಲ್ಲು ಕಂಬ ತಂತಿ ಬೇಲಿ ಹಾಕಿ ರಸ್ತೆಯನ್ನು ಬಂದ್ ಮಾಡಿ ಸಂಚಾರಕ್ಕೆ ತೊಂದರೆ ಮಾಡಲಾಗಿದ್ದು ರಸ್ತೆಯ ಬೇಲಿಯನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿ ಕೊಡುವಂತೆ ಹೆಬ್ರಿ ಪೊಲೀಸರಿಗೆ ದೂರು ನೀಡಲಾಗಿದೆ.
ಕಳೆದ 40 ವರ್ಷಗಳಿಂದ ರಸ್ತೆಯಿದ್ದು ಇದೀಗ ಸ್ಥಳೀಯರಾದ ವಿಶ್ವನಾಥ ಪೂಜಾರಿ, ಚೀಂಕ್ರ ಪೂಜಾರಿ ಮತ್ತು ಜಯಂತಿ ಪೂಜಾರಿ ಎಂಬವರು ರಸ್ತೆಯನ್ನು ಪರವಾನಗೆ ಭೂ ಮಾಪಕರಿಂದ ಸರ್ವೆ ಮಾಡಿಸಿ ಬುಧವಾರ ರಸ್ತೆಯನ್ನು ಬಂದ್ ಮಾಡಿಸಿದ್ದಾರೆ ಎಂದು ಸ್ಥಳೀಯರಾದ ಕೃಷ್ಣ ನಾಯ್ಕ್, ಸುಗಂಧಿ ಬಾಯಿ, ಚಂದ್ರ ನಾಯ್ಕ್ ಮತ್ತು ಗಿರಿಜಾ ಸೇರ್ವೆಗಾರ್ ಹೆಬ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇದೇ ಜೂನ್ ನಲ್ಲಿ ರಸ್ತೆಯನ್ನು ಅತಿಕ್ರಮಣ ಮಾಡಿದ ಬಗ್ಗೆ ಹೆಬ್ರಿ ತಹಶೀಲ್ಧಾರ್ ಅವರಿಗೆ ದೂರು ನೀಡಲಾಗಿದ್ದು ತಹಶೀಲ್ಧಾರ್ ಪರಿಶೀಲಿಸಿ ಅತಿಕ್ರಮಣ ಮಾಡಿದ ರಸ್ತೆಯನ್ನು ತೆರವು ಮಾಡಲು ಆದೇಶ ನೀಡಿದ್ದರು. ಆದರೆ ಬುಧವಾರ ರಸ್ತೆಯನ್ನೇ ಬಂದ್ ಮಾಡಲಾಗಿದೆ. ಪೊಲೀಸರು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಬುಧವಾರ ಸ್ಥಳಕ್ಕೆ ತೆರಳಿ ಬಂದ್ ಮಾಡಿರುವ ರಸ್ತೆಯನ್ನು ತೆರವು ಮಾಡಲು ಸೂಚನೆಯನ್ನು ನೀಡಿದ್ದರೂ ಲೆಕ್ಕಿಸದೇ ರಸ್ತೆ ಯನ್ನೇ ಬಂದ್ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ರಸ್ತೆಯನ್ನು ಬಂದ್ ಮಾಡಿದ ವಿಶ್ವನಾಥ ಪೂಜಾರಿ, ಚೀಂಕ್ರ ಪೂಜಾರಿ, ಜಯಂತಿ ಪೂಜಾರಿ, ಆರ್ಡಿಯ ಸುದರ್ಶನ ಶೆಟ್ಟಿ ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಲಾಗಿದೆ.

















