ಜು. 17 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಡಾರು, ದಾನಿಗಳ ಉದಾರ ಕೊಡುಗೆಯೊಂದಿಗೆ ವಿದ್ಯಾರ್ಥಿಗಳಿಗೆ ವಿಶೇಷ ಸಮವಸ್ತ್ರ ವಿತರಣಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.
ಶಾಲಾ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದಾನಿಗಳು, ಎಸ್ ಡಿ ಎಂ ಸಿ ಯ ಪದಾಧಿಕಾರಿಗಳು, ಪೋಷಕರು ಹಾಗೂ ಶಾಲಾ ಹಿತೈಷಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ.ಎಂ.ಎಫ್. (KMF) ನಿರ್ದೇಶಕರು ಹಾಗೂ ಪ್ರಮುಖ ದಾನಿಗಳಲ್ಲಿ ಒಬ್ಬರಾದ ಶ್ರೀ ಸುಧಾಕರ್ ಶೆಟ್ಟಿ ಅವರು, “ದಾನಿಗಳು ಶಾಲೆಗೆ ಕೊಡುಗೆ ನೀಡುವುದು ತಾವು ಅತಿ ಶ್ರೀಮಂತರಾಗಿದ್ದಾರೆ ಎಂದಲ್ಲ. ಬದಲಾಗಿ, ತಾವು ಕಲಿತ ಶಾಲೆಗೆ ಮತ್ತು ಸಮಾಜಕ್ಕೆ ತಮ್ಮ ಪಾಲಿನ ಋಣವನ್ನು ತೀರಿಸುವ ಪವಿತ್ರ ಉದ್ದೇಶದಿಂದ ಈ ಕೊಡುಗೆಯನ್ನು ನೀಡಲಾಗುತ್ತದೆ,” ಎಂದು ಅಭಿಪ್ರಾಯಪಟ್ಟರು.
ಮತ್ತೋರ್ವ ದಾನಿ, ಬೆಳಕು ಟ್ರಸ್ಟಿನ ಕಾರ್ಯದರ್ಶಿ ಶ್ರೀ ಸಂತೋಷ್ ಶೆಟ್ಟಿ ಅವರು ಮಾತನಾಡಿಮತ್ತೋರ್ವ ದಾನಿ, ಬೆಳಕು ಟ್ರಸ್ಟಿನ ಕಾರ್ಯದರ್ಶಿ ಶ್ರೀ ಸಂತೋಷ್ ಶೆಟ್ಟಿ ಅವರು ಮಾತನಾಡಿ,”ಇಂದು ಮಕ್ಕಳು ದಾನಿಗಳಿಂದ ಸೌಲಭ್ಯ ಹಾಗೂ ಕೊಡುಗೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ನಾಳೆ ಅವರು ದೊಡ್ಡವರಾದ ಮೇಲೆ ತಾವು ಕಲಿತ ಶಾಲೆಗೆ ಹಾಗೂ ಸಮಾಜಕ್ಕೆ ಸಹಾಯ ಹಸ್ತ ಚಾಚುವಂತಹ ಉತ್ತಮ ಪ್ರಜೆಗಳಾಗಬೇಕು,” ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜನೌಷಧಿ ಮೆಡಿಕಲ್ಸ್ ಮಾಲೀಕರು ಹಾಗೂ ದಾನಿಯಾದ ಶ್ರೀ ಸುಶಾಂತ್ ಅವರು, ತಾವು ಓದುತ್ತಿದ್ದ ಕಾಲದ ಕಷ್ಟದ ಪರಿಸ್ಥಿತಿಯನ್ನು ನೆನಪಿಸಿಕೊಂಡು, ಇಂದಿನ ವಿದ್ಯಾರ್ಥಿಗಳಿಗೆ ತಮ್ಮ ಕೈಲಾದ ಸಹಾಯ ಮಾಡಲು ಇಚ್ಛಿಸಿರುವುದಾಗಿ ಹಾಗೂ ವಿದ್ಯಾರ್ಥಿಗಳು ಸಮಾಜಕ್ಕೆ ತಮ್ಮಿಂದಾದ ಸಹಾಯವನ್ನು ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ಡಿಎಂಸಿ (SDMC) ಅಧ್ಯಕ್ಷರಾದ ಶ್ರೀ ಗೋಪಾಲ್ ಪೂಜಾರಿ ಅವರು ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು,”ಇಂದಿನ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಲವಾರು ಉತ್ತಮ ಸೌಲಭ್ಯಗಳು ದೊರೆಯುತ್ತಿವೆ. ವಿದ್ಯಾರ್ಥಿಗಳು ಮತ್ತು ಪೋಷಕರು ಈ ಎಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು,” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಮುಖ ದಾನಿಗಳಾದ ಶ್ರೀ ಮುರಳಿದರ್ ಭಟ್ ಅಧ್ಯಕ್ಷರು, ಬೆಳಕು ಟ್ರಸ್ಟ್, ಶ್ರೀ ಹರಿಪ್ರಸಾದ್ ಮಲೆಬೆಟ್ಟು ದುರ್ಗ
ಆಯಿಷಾ ಆಸಿಫ್ ದಿಡಿಂಬಿರಿ ಶಾಲಾ ಪೋಷಕರು, ಲೀಲಾ ಕುಂದರ್ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶ್ರೀ ಅಮಿತಾನಂದ ಜೈನ್ (ಬಾಹುಬಲಿ ಸ್ವೀಟ್ಸ್) – ಇವರು ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರೂ ಶುಭ ಹಾರೈಕೆಗಳನ್ನು ತಲುಪಿಸಿದ್ದರು.
ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಸುರೇಂದ್ರ ಜೈನ್, ಕಾರ್ಯದರ್ಶಿ ಶ್ರೀ ಭಾಸ್ವರ್ ನಾಯಕ್, ಎಸ್ಡಿಎಂಸಿ ಉಪಾಧ್ಯಕ್ಷರಾದ ಶ್ರೀಮತಿ ವಾಣಿ ಆಚಾರ್ಯ, ಶಾಲಾ ಹಿತೈಷಿ ಶ್ರೀ ದಿವಾಕರ್ ಸೇರ್ವೆಗಾರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಜಯಕೃಷ್ಣ ಮೊಯಿಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಯಕೃಷ್ಣ ಮೊಯಿಲಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಶಾಲಾ ಸಹಶಿಕ್ಷಕಿ ಶ್ರೀಮತಿ ವೀಣಾ ಸರಸ್ವತಿ ಕೆ. ಎಲ್ಲರನ್ನು ವಂದಿಸಿದರು. ಸಹಶಿಕ್ಷಕಿ ಲತಾ ಕಾರ್ಯಕ್ರಮ ನಿರೂಪಿಸಿದರು.



















