ಡ್ರಗ್ಸ್ ಸೇವನೆಯಿಂದ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ : ಸುನೀಲ್ ಕುಮಾರ್
ಹೆಬ್ರಿ : ಸಮಾಜದ ಸ್ವಾಸ್ಥ್ಯ ಹಾಳಾಗಲು ಡ್ರಗ್ಸ್ ಕಾರಣವಾಗಿದ್ದು ದೇಶದಾದ್ಯಂತ ಅನೇಕ ಶಕ್ತಿಗಳಿಂದ ಯುವಕರನ್ನು ದುರ್ಬಲರನ್ನಾಗಿಸುವ ಯತ್ನ ನಡೆಯುತ್ತಿದೆ. ಮಾದಕ ವ್ಯಸನಗಳ ಕುರಿತು ಜಾಗೃತಿ, ಮಾದಕ ದ್ರವ್ಯ ಸೇವನೆ, ಮಾರಾಟದ ವಿರುದ್ಧ ಕಠಿಣ ಕಾನೂನು ಕ್ರಮ ಪೊಲೀಸ್ ಇಲಾಖೆ ಕೈಗೊಳ್ಳುತ್ತಿದೆ. ಡ್ರಗ್ಸ್ ಸೇವನೆಯಿಂದ ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಇದರ ತಡೆಗೆ ಯುವ ಜನತೆ ಮಾದಕ ವ್ಯಸನಿಯಾಗುವುದಿಲ್ಲ ಎಂಬ ದೃಢ ಸಂಕಲ್ಪ ಕೈಗೊಳ್ಳಬೇಕು ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು..
ಅವರು ಉಡುಪಿ ಜಿಲ್ಲಾ ಪೊಲೀಸ್, ಕಾರ್ಕಳ ಉಪವಿಭಾಗ ಮತ್ತು ಹೆಬ್ರಿ ಪೊಲೀಸ್ ಠಾಣೆಯ ವತಿಯಿಂದ ಹೆಬ್ರಿ ಅನಂತಪದ್ಮನಾಭ ಸನ್ನಿಧಿ ಸಭಾಂಗಣದಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ನಡೆದ ಹೆಬ್ರಿ ತಾಲ್ಲೂಕು ಮಟ್ಟದ ಮಾದಕ ವ್ಯಸನ ವಿರೋಧ ಮತ್ತು ಜಾಗೃತ ಸಮಿತಿಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಚ್ ನಾಯ್ಕ್ ಮಾತನಾಡಿ ಡ್ರಗ್ಸ್ ವಿಷವರ್ತುಲಕ್ಕೆ ಒಮ್ಮೆ ಬಲಿಯಾದರೆ ಹೊರಬರಲು ಸಾಧ್ಯವಿಲ್ಲ, ಮಾದಕ ವ್ಯಸನದಲ್ಲಿ ಡ್ರಗ್ಸ್ ಮಾತ್ರವಲ್ಲದೆ ಮದ್ಯ, ಬೀಡಿ, ಗುಟ್ಕಾ, ತಂಬಾಕು ಸೇರುತ್ತದೆ. ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್ ಸೇವನೆ ತಡೆಗಟ್ಟಲು ಕಮಿಟಿ ರಚನೆ ಮಾಡಲಾಗಿದ್ದು ಡ್ರಗ್ಸ್ ಮಾರಾಟ ಮತ್ತು ಸೇವನೆ ಮಾಡುವವರ ಕುರಿತು ಇಲಾಖೆಗೆ ಶೀಘ್ರ ಮಾಹಿತಿ ನೀಡುವಂತೆ ಕರೆ ನೀಡಿದರು. ದೇಶದಲ್ಲಿ ಡ್ರಗ್ಸ್ ವಿರುದ್ಧ ಎನ್ಡಿಪಿಎಸ್ನಂತಹ ಕಠಿಣ ಕಾನೂನು ಇದ್ದು ಡ್ರಗ್ಸ್ ಪ್ರಕರಣ ದಾಖಲಾದರೆ ಜಾಮೀನುರಹಿತ ಅಪರಾಧವೆಂದು ಪರಿಗಣಿಸಲಾಗುತ್ತಿದೆ. ತಪ್ಪಿತಸ್ಥರಿಗೆ 10 ವರ್ಷಗಳಿಗಿಂತಲೂ ಅಧಿಕ ಜೈಲು ಶಿಕ್ಷೆ ವಿಸಲಾಗುತ್ತದೆ ಎಂದರು
ಕಾರ್ಕಳ ಡಿವೈಎಸ್ಪಿ ವಿಜಯಪ್ರಸಾದ್ ಮಾತನಾಡಿದರು. ವೈದ್ಯ ಡಾ. ರವಿಪ್ರಸಾದ್ ಹೆಗ್ಡೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಶಾಸಕ ಸುನೀಲ್ ಕುಮಾರ್ ಜಾಗೃತಿ ಫಲಕವನ್ನು ಬಿಡುಗಡೆಗೊಳಿಸಿದರು.
ಹೆಬ್ರಿ ತಾಲ್ಲೂಕು ಪಂಚಾಯಿತಿ ಇಒ ಪ್ರಶಾಂತ್ ರಾವ್, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಕಾರಿ ಸಂತೋಷ್ ಕುಮಾರ್ ಬೈಲೂರು ಉಪಸ್ಥಿತರಿದ್ದರು.ಹೆಬ್ರಿ ಪಿಎಸ್ಐ ಚಂದ್ರ ಎ.ಕೆ. ಪ್ರತಿಜ್ಞಾ ವಿ ಭೋದಿಸಿದರು. ಶಿಕ್ಷಕ ಮಂಜುನಾಥ ಕುಲಾಲ್ ಶಿವಪುರ ನಿರೂಪಿಸಿದರು.





















