ಆರೆಸ್ಸೆಸ್ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿಧಾನ ಪರಿಷತ್ತಿಗೆ ಉತ್ತರ ನೀಡಿದ್ದಾರೆ.
ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಪ್ರಿಯಾಂಕ್ ನೀಡಿದ ಉತ್ತರ ಈಗ ಸದ್ದು ಮಾಡುತ್ತಿದೆ. ಈ ವಿಚಾರವನ್ನು ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರಾದ ಎಸ್. ಸುರೇಶ್ ಕುಮಾರ್, ವಿ.ಸುನಿಲ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಆರೆಸ್ಸೆಸ್ ವಿರುದ್ಧ ಸದಾ ಹರಿಹಾಯುವ ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾಖಲೆಗಳೇ ಹೇಳುತ್ತಿವೆ ಸತ್ಯ ಗೃಹ ಸಚಿವರ ರಾಜಕೀಯ ದ್ವೇಷದ ಮುಖವಾಡ ಸಂಪೂರ್ಣ ಕಳಚಿದೆ. ವಿಧಾನ ಪರಿಷತ್ತಿನಲ್ಲಿ ನಾನು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 524ಕ್ಕೆ ಮಾನ್ಯ ಗೃಹ ಸಚಿವರೇ ನೀಡಿರುವ ಅಧಿಕೃತ ಉತ್ತರವು, ಆರ್ಎಸ್ಎಸ್ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಮತ್ತು ರಾಜಕೀಯ ಅಪಪ್ರಚಾರಕ್ಕೆ ಸ್ಪಷ್ಟ ಉತ್ತರ ನೀಡಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿಕೊಂಡಿದ್ದಾರೆ.
ಆರೆಸ್ಸೆಸ್ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ, ಪಥಸಂಚಲನಗಳು ಹಾಗೂ ಶಾಖೆಗಳು ನಡೆಯುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಅಥವಾ ಗಲಭೆಗಳು ನಡೆದಿರುವ ಉದಾಹರಣೆಗಳಿಲ್ಲ.
ಹೀಗಿರುವಾಗ, ಯಾವ ಕಾರಣಕ್ಕಾಗಿ ಆರೆಸ್ಸೆಸ್ ಅನ್ನು ದ್ವೇಷಿಸುತ್ತೀರಿ? ರಾಜ್ಯದ ಗೃಹ ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸಬೇಕಾದ ನೀವು, ಕಾನೂನು ಮತ್ತು ಸುವ್ಯವಸ್ಥೆಯಂತಹ ಗಂಭೀರ ವಿಚಾರಗಳತ್ತ ಗಮನ ಹರಿಸುವ ಬದಲು ಆರೆಸ್ಸೆಸ್ ಗುರಿಯಾಗಿಸಿಕೊಂಡು ರಾಜಕೀಯ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.


















