ಕಾರ್ಕಳ: ನಿಟ್ಟೆ ಮತ್ತು ಜಪಾನ್ ನಡುವಿನ ಶೈಕ್ಷಣಿಕ ಮತ್ತು ಕೈಗಾರಿಕಾ ಸಂಬಂಧಗಳನ್ನು ಬಲಪಡಿಸುವಲ್ಲಿ ಬೆಂಗಳೂರಿನ ಜಪಾನ್ ಕಾನ್ಸುಲ್ ಜನರಲ್ ಕಛೇರಿಯು ಸದಾ ಸಹಕಾರಿಯಾಗಿದ್ದು, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಸಹಯೋಗ ವಿಭಾಗದ ನಿರ್ದೇಶಕ ಪ್ರೊ.ಹರಿಕೃಷ್ಣ ಭಟ್ ಅವರನ್ನು ಅಭಿನಂದಿಸಲು ಜಪಾನ್ ಕಾನ್ಸುಲ್ ಜನರಲ್ ನವತ ಹಿರೊಶಿ ಅವರು ಔತಣಕೂಟವನ್ನು ಆಯೋಜಿಸಿದ್ದರು. ಪ್ರೊ. ಭಟ್ ಅವರನ್ನು ಸುರತ್ಕಲ್ ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ಐಟಿಕೆ) ಅವರು ಸನ್ಮಾನಿಸಿದ್ದು ಮತ್ತು ಜಪಾನ್ / ಟೋಕಿಯೊ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಂತರರಾಷ್ಟ್ರೀಯ ವ್ಯಾಪಾರ ಪರಿಸರ ಸಮಿತಿಯ ವಿಶೇಷ ಸದಸ್ಯರಾಗಿ ನೇಮಕಗೊಂಡದ್ದಕ್ಕಾಗಿ ಅಭಿನಂದಿಸಲು ಈ ಔತಣಕೂಟವನ್ನು ಏರ್ಪಡಿಸಲಾಗಿತ್ತು.
ಜಪಾನ್ / ಟೋಕಿಯೊ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯಲ್ಲಿ ಸುಮಾರು ಒಂದು ಲಕ್ಷ ಜಪಾನಿನ ಕಂಪನಿಗಳು ನೋಂದಾಯಿಸಲ್ಪಟ್ಟಿರುವುದರಿಂದ ಈ ನೇಮಕಾತಿಯನ್ನು ಮಹತ್ವದ ಗೌರವವೆಂದು ಪರಿಗಣಿಸಬಹುದಾಗಿದೆ. ಸಮಿತಿಯೊಂದಿಗಿನ ಪ್ರೊ. ಭಟ್ ಅವರ ಒಡನಾಟವು ನಿಟ್ಟೆ ಸಂಸ್ಥೆಯ ಅಂತರರಾಷ್ಟ್ರೀಯ ಸಹಯೋಗ ಮತ್ತು ಜಪಾನಿನ ಉದ್ಯಮ ಮತ್ತು ಸಂಸ್ಥೆಗಳೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.
ಬೆಂಗಳೂರು ಕಛೇರಿಯ ಜಪಾನ್ ಕಾನ್ಸುಲ್ ಜನರಲ್ ನವತ ಹಿರೊಶಿ ಶೀಘ್ರದಲ್ಲೇ ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿರುವ ಸಮಾರಂಭಕ್ಕಾಗಿ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
























