ಜೀವನ ಸ್ಫೂರ್ತಿಗೆ ಕ್ರೀಡೆ ದಾರಿ : ನವೀನ್ ಚಂದ್ರ
ಕಾರ್ಕಳ : ಸೋತಾಗ ಸವಾಲು, ಗೆದ್ದಾಗ ಸಂತೋಷ ನೀಡುತ್ತಾ ಬೆಳೆಯಲು ಅವಕಾಶವಿದ್ದರೆ ಅದು ಕ್ರೀಡಾ ಕ್ಷೇತ್ರದಲ್ಲಿ ಮಾತ್ರ ಎಂದು ಭುವನೇಂದ್ರ ಪದವಿ ಪೂರ್ವ ಕಾಲೇಜಿನ ದೈ.ಶಿ.ಉಪನ್ಯಾಸಕ ಶ್ರೀ ನವೀನ್ ಚಂದ್ರ ಹೇಳಿದರು.
ಅವರು ಶಾಲಾ ಶಿಕ್ಷಣ ಇಲಾಖೆ(ಪ.ಪೂ.ಕಾಲೇಜು) ಹಾಗೂ ಗಣಿತನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಬಾಲಕ-ಬಾಲಕಿಯರ ಬಾಸ್ಕೆಟ್ ಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಪಠ್ಯೇತರ ಚಟುವಟಿಕೆಯು ವಿದ್ಯಾರ್ಥಿಯ ಜೀವನಕ್ಕೆ ರಹದಾರಿ. ಶಿಕ್ಷಣವೆಂದರೆ ಬರಿಯ ಓದಲ್ಲ. ಕ್ರೀಡಾಚಟುವಟಿಕೆಗಳಲ್ಲಿ ಪಾಲ್ಗೊಂಡವನು ಕುಗ್ಗಿದ ಉದಾಹರಣೆ ತೀರ ವಿರಳ. ಜೀವನ ಸ್ಫೂರ್ತಿಗೆ ಕ್ರೀಡೆ ದಾರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ದಿನೇಶ್ ಎಂ ಕೊಡವೂರ್ ವಹಿಸಿದ್ದರು. ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕ್ರೀಡಾ ಸಂಯೋಜನಾಧಿಕಾರಿ ಶ್ರೀ ದಿನೇಶ್ ಕುಮಾರ್, ಕಾರ್ಕಳ ತಾಲೂಕು ಕ್ರೀಡಾ ಸಂಯೋಜನಾಧಿಕಾರಿ ಶ್ರೀ ಶರತ್ ಭಟ್, ಜಿಲ್ಲಾ ದೈ.ಶಿ.ಉಪನ್ಯಾಸಕ ಸಂಘದ ಅಧ್ಯಕ್ಷ ಶ್ರೀ ಸುಕೇಶ್ ಶೆಟ್ಟಿ, ಸಂಸ್ಥೆಯ ಪಿ.ಆರ್.ಒ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ, ಕಾಲೇಜಿನ ದೈ.ಶಿ.ಉಪನ್ಯಾಸಕಿ ಶ್ರೀಮತಿ ಸೌಜನ್ಯ ಹೆಗ್ಡೆ ಉಪಸ್ಥಿತರಿದ್ದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.




























