Saturday, January 31, 2026
Google search engine
Homeಜಿಲ್ಲಾ ಸುದ್ದಿಪೆಹಲ್ಗಾಮ್ ಹಿಂದು ನರಮೇಧ- ಮಲ್ಪೆ ಕಡಲ ತೀರದಲ್ಲಿ ಅಭಿನವ ಭಾರತ ಸೊಸೈಟಿಯ 25 ಯುವಕರಿಂದ ಸದ್ಗತಿಗಾಗಿ...

ಪೆಹಲ್ಗಾಮ್ ಹಿಂದು ನರಮೇಧ- ಮಲ್ಪೆ ಕಡಲ ತೀರದಲ್ಲಿ ಅಭಿನವ ಭಾರತ ಸೊಸೈಟಿಯ 25 ಯುವಕರಿಂದ ಸದ್ಗತಿಗಾಗಿ ತರ್ಪಣ, ಗೀತಾ ತ್ರಿಷ್ಟುಪ್ ಹೋಮ

ಪೆಹಲ್ಗಾಮ್ ಹಿಂದು ನರಮೇಧ- ಮಲ್ಪೆ ಕಡಲ ತೀರದಲ್ಲಿ ಅಭಿನವ ಭಾರತ ಸೊಸೈಟಿಯ 25 ಯುವಕರಿಂದ ಸದ್ಗತಿಗಾಗಿ ತರ್ಪಣ, ಗೀತಾ ತ್ರಿಷ್ಟುಪ್ ಹೋಮ

ಪೆಹಲ್ಗಾಂ ಘಟನೆ ಇಡೀ ದೇಶವನ್ನು ತಲ್ಲಣ ಗೊಳಿಸಿದೆ. ಹಿಂದೂಗಳ ನರಮೇಧಕ್ಕೆ ದೇಶ ಮರುಗುತ್ತಿದೆ. ದುಷ್ಟರ ಸಂಹಾರಕ್ಕೆ ಜನ ಕಾಯುತ್ತಿದ್ದಾರೆ. ಈ ನಡುವೆ ಉಡುಪಿಯ ಅಭಿನವ ಭಾರತ ಎಂಬ ರಾಷ್ಟ್ರವಾದಿ ಸಂಘಟನೆ ಉಡುಪಿಯ ಕಡಲ ತೀರದಲ್ಲಿ ತರ್ಪಣ ನೀಡಿ ಹೋಮ ನಡೆಸಿ, ನಾವೆಲ್ಲರೂ ನೊಂದ ಕುಟುಂಬದ ಮಕ್ಕಳು ಎಂಬ ಭಾವವನ್ನು ತೋರಿದ್ದಾರೆ.

ಪೆಹೆಲ್ಗಾಮ್ ನಲ್ಲಿ ನಡೆದ ಹಿಂದೂ ನರಮೇಧದಲ್ಲಿ ಮೃತಪಟ್ಟವರ ಆತ್ಮಕ್ಕೆ ಸದ್ಗತಿಗಾಗಿ ಪ್ರಾರ್ಥಿಸಲಾಯ್ತು. ಹೋಮ ಮತ್ತು ತರ್ಪಣ ನೀಡುವ ಮೂಲಕ ಅಪರ ಧಾರ್ಮಿಕ ವಿಧಿ ಉಡುಪಿಯ ಕಡಲ ತೀರದಲ್ಲಿ ನಡೆದಿದೆ. ಮಲ್ಪೆಯ ಹನೂಮಾನ್ ವಿಠೋಭ ರುಕುಮಾಯಿ ಭಜನಾ ಮಂದಿರದ ಮುಂಭಾಗದ ಕಡಲತೀರದಲ್ಲಿ ಎಲ್ಲಾ ವಿಧಿಗಳು ನೆರವೇರಿದವು.

ಘಟನೆಯಲ್ಲಿ ಮೃತಪಟ್ಟ 25 ಜನ ಹಿಂದೂಗಳ ಭಾವಚಿತ್ರವನ್ನು ಇಟ್ಟು ಪುಷ್ಪಾರ್ಚನೆಗೈದು ಹೋಮವನ್ನು ನೆರವೇರಿಸಲಾಯ್ತು. ಬ್ರಹ್ಮಶ್ರೀ ವೇದಮೂರ್ತಿ ವಿದ್ವಾನ್ ಸೂರಾಲು ತಂತ್ರಿಗಳ ನೇತೃತ್ವದಲ್ಲಿ, ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ಶಾಸ್ತ್ರೋಕ್ತವಾಗಿ ನಡೆಸಲಾಯಿತು. ಗೀತಾ ತ್ರಿಷ್ಟುಪ್ ಹೋಮ ನೆರವೇರಿಸಿ ಪೂರ್ಣಾಹುತಿ ಮಾಡಲಾಯ್ತು. ಯಾತನಾಮಯ ಮರಣದಿಂದ ಮಡಿದ ಆತ್ಮಕ್ಕೆ ಸದ್ಗತಿ ಸಿಗಲಿ, ಕುಟುಂಬಕ್ಕೆ ನೋವು ಕಡಿಮೆಯಾಗಿ ಶ್ರೇಯಸ್ಸಾಗಲಿ ಎಂದು ಪ್ರಾರ್ಥಿಸಲಾಯ್ತು.

ಬ್ರಹ್ಮಶ್ರೀ ವೇದಮೂರ್ತಿ ವಿದ್ವಾನ್ ಸೂರಾಲು ತಂತ್ರಿಗಳು ಮಾತನಾಡಿ, ಸಮಾಜದಲ್ಲಿ ಒಬ್ಬರಿಗೊಬ್ಬರು ಆಗಬೇಕು ಜೊತೆಯಾಗಿ ಸಮಷ್ಠಿ ಭಾವ ಬರಬೇಕು. ವೈದಿಕ, ಉಪನಿಷತ್ತು ಕಾಲದ ವ್ಯವಸ್ಥೆ ಪುನರ್ಜೀವ ಆಗಬೇಕು. ಉಪನಿಷತ್ತು ಕಾಲದ ಸಮಷ್ಟಿ ಭಾವ ಬಂದರೆ ಚಂದ. ದೇಶದ ಬೇರೆ ಬೇರೆ ಕಡೆಯ ಜನ ಪೆಹೆಲ್ಗಾಮ್ ನಲ್ಲಿ ಮರಣ ಹೊಂದಿದ್ದಾರೆ. ಹಿಂದು ಎಂದು ಕೊಲ್ಲಲ್ಪಟ್ಟಿದ್ದಾರೆ. ಅವರಿಗೆಲ್ಲರಿಗೂ ಸದ್ಗತಿ ಸಿಗಲಿ. ಪಾರಮಾರ್ಥಿಕ ಭಾವದಿಂದ ಒಳ್ಳೆಯ ಮನಸ್ಸಿನಿಂದ ಯುವಕರು ಎರಡು ಕೈಯಲ್ಲಿ ಸಮುದ್ರದ ನೀರನ್ನು ತರ್ಪಣ ನೀಡಿದ್ದಾರೆ. ಸಮಷ್ಟಿ ಭಾವದಿಂದ ಗೀತಾ ತ್ರಿಷ್ಟುಪ್ ಹೋಮ ಮಾಡಲಾಗಿದೆ. ಭಗವಂತ ಉಲ್ಲೇಖಿಸಿದ ಮಹಾ ಮಂತ್ರ ಗಳಲ್ಲಿ ಒಂದು ಗೀತಾ ತ್ರಿಷ್ಟುಪ್, ಮೋಕ್ಷದಾಯಿಕವಾದ ಮಂತ್ರವಿದು. 25ಮಂದಿ ಮೃತರ ಜನ್ಮಸ್ಥಾನ, ಜಾತಿ ಗಮನಕ್ಕೆ ತೆಗೆದುಕೊಳ್ಳದೆ ಸಮಷ್ಟಿ ಭಾವದಿಂದ ಅವರಿಗೆಲ್ಲರಿಯೂ ಸದ್ಗತಿ ನೀಡುವ ಕ್ರಿಯೆ ಮಾಡಿದ್ದೇವೆ ಎಂದರು.

ಅಭಿನವ ಭಾರತ ಸೊಸೈಟಿ ಸಂಘಟನೆ ಈ ಕಾರ್ಯಕ್ರಮವು ಆಯೋಜನೆ ಮಾಡಿದ್ದು, 25 ಕುಟುಂಬಗಳ ಪರವಾಗಿ ಅಭಿನವ ಭಾರತ ಸೊಸೈಟಿ ಇದರ 25 ಯುವಕರು ಈ ಅಪರ ಕ್ರಿಯೆಯ ವಿಧಿಯನ್ನು ನೆರವೇರಿಸಿದರು. ಗೀತಾ ತ್ರಿಷ್ಟುಪ್ ಮಂತ್ರವನ್ನು ಸಾವಿರ ಸಂಖ್ಯೆಯ ಜಪ ಮಾಡಿ‌ ಹೋಮ ನಡೆಸಲಾಗಿದೆ. ಜಾತಿ ಮತ ಸಂಪ್ರದಾಯ ಭೂಪ್ರದೇಶ ಎಲ್ಲವನ್ನು ಮೀರಿ ಮೃತರ ಆತ್ಮಕ್ಕೆ ಹಿಂದೂ ಧರ್ಮದ ಮಾದರಿಯಲ್ಲಿ ಧಾರ್ಮಿಕ ವಿಧಿಯನ್ನು ನಡೆಸಲಾಯಿತು.

ಹೋಮದ ಬಗ್ಗೆ ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಜಾತಿ ವ್ಯವಸ್ಥೆಯಲ್ಲಿ ಹಂಚಿಹೋದ ಹಿಂದೂ‌ ಸಮಾಜ ದುರ್ಬಲವಾಗಿದೆ. ಅಲ್ಪಸಂಖ್ಯಾತ ಸಮಯದಾಯಕ್ಕೆ ಹೆದರಿ ಬದುಕುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹಿಂದೂ ರಾಷ್ಟ್ರದಲ್ಲಿ‌‌ ಹಿಂದೂಗಳ ಹೆಸರು ಕೇಳಿ ಹತ್ಯೆ ಮಾಡುತ್ತಾರೆ. ಹಿಂದೂಗಳು ಭಯೋತ್ಪಾದಕರ ಕಾಟ‌ ಇದೆ ಎಂದು ಕಾಶ್ಮೀರಕ್ಕೆ ಹೋಗೋದಿಲ್ಲ ಎನ್ನುವಂತಾಗಿದೆ. ಇದು ಹಿಂದೂಗಳ ದುಸ್ಥಿತಿ. ಬಹುಸಂಖ್ಯಾತ ಸಮಾಜ ಅಲ್ಪಸಂಖ್ಯಾತ ಸಮುದಾಯಕ್ಕೆ ಹೆದರಿ ಬದುಕುವಂತಾಗಿದೆ. ಹಿಂದೂ ಸಮಾಜದಲ್ಲಿ ಒಗ್ಗಟ್ಟಿಲ್ಲ, ಏಕತೆ ಬರಬೇಕಾದರೆ ಒಂದೇ ಕುಟುಂಬ ಎಂಬ ಭಾವನೆ ಬರಬೇಕು. ಈ‌ ಏಕತಾ ಭಾವನೆಗಾಗಿ ಧಾರ್ಮಿಕ ವಿಧಿವಿಧಾನ ನಡೆಸಲಾಗಿದೆ. ನಮ್ಮ ಕುಟುಂಬದವರು ಮೃತಪಟ್ಟರೆ ಪ್ರತೀ ವರ್ಷ ಶ್ರಾದ್ಧ ಮಾಡುತ್ತೇವೆ. ಪ್ರತೀ ವರ್ಷ ಪಿತೃ ಹೆಸರಲ್ಲಿ ತರ್ಪಣ ಬಿಡುತ್ತೇವೆ. ಆದರೆ ಪಹಲ್ಗಾಮ್ ಘಟನೆ ನಡೆದು ಎರಡು ವಾರದಲ್ಲಿ ಸಮಾಜಕ್ಕೆ ಈ ಘಟನೆ ಮರೆತುಹೋಗಿದೆ. ಪೆಹೆಲ್ಗಾಮ್ ನಲ್ಲಿ ನಡೆದ ಘಟನೆ ಬಗ್ಗೆ ಯೋಚನೆ ಮಾಡುವಂತಾಗಿದೆ. ಬಹಳಷ್ಟು ಜನರಿಗೆ ಮೃತರ ಸಂಖ್ಯೆ ಕೂಡ ನೆನಪಿಲ್ಲ. ನಾವೆಲ್ಲ ಎಚ್ಚೆತ್ತುಕೊಂಡು ಇಂತಹ ಘಟನೆಗಳಿಗೆ ತಕ್ಕ ಉತ್ತರ ನೀಡಬೇಕಿದೆ ಎಂದರು.

ನೂರಾರು ಸಾರ್ವಜನಿಕರು ಈ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದರು.
ಮೃತರ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದರು. ಹನುಮಾನ್ ರುಕುಮಾಯಿ ವಿಠೋಭಾ ಮಂದಿರದಲ್ಲಿ ಹಿಂದೂ ಸಮಾಜದ ಪರವಾಗಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಉಗ್ರ ಚಟುವಟಕೆಗೈದವರಿಗೆ ವಿರೋಧಿಗಳಿಗೆ ತಕ್ಕ ಪಾಠವಾಗಲಿ ಎಂದು ಪ್ರಾರ್ಥಿಸಲಾಯಿತು.

ಶ್ರೀ ವಿಠೋಬಾ ರುಕುಮಾಯಿ ಹನುಮಾನ್ ಮಂದಿರ ಮಲ್ಪೆ, ಇವರ ಸಹಯೋಗದಲ್ಲಿ ನಡೆದ ಈ ಒಂದು ರಾಷ್ಟ್ರಾಭಿಮಾನದ ಕಾರ್ಯಕ್ರಮದಲ್ಲಿ ಉದ್ಯಮಿ ಅಜಯ್ ಪಿ. ಶೆಟ್ಟಿ, ಧಾರ್ಮಿಕ ಮುಂದಾಳು ರಾಘವೇಂದ್ರ ರಾವ್ ಅಭಿನವ ಭಾರತ ಸೊಸೈಟಿಯ ಪ್ರಮುಖರಾದ ಗುರುಪ್ರಸಾದ್ ನಾರಾವಿ, ಸಂತೋಷ್ ನಂದಳಿಕೆ, ರಮೇಶ್ ಶೆಟ್ಟಿ ತೆಳ್ಳಾರು, ಪ್ರಸಾದ್ ಮಿಯ್ಯಾರು ಇವರು ಉಪಸ್ಥಿತರಿದ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments