
ಮೈಸೂರು: ಸಂಸ್ಕೃತಿ ನಮ್ಮ ಬೇರು. ಸೌಹಾರ್ದ ನಮ್ಮ ಶಕ್ತಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಭಾರತದ ನೆಲೆಯಲ್ಲಿ ನಮ್ಮ ಯುವಶಕ್ತಿಯೊಂದಿಗೆ ಸೇರಿ ಮಾನವೀಯ ಮೌಲ್ಯಗಳ , ಪ್ರೀತಿಯ ಹೊಸ ಸುಧಾರಿತ ಸಮಾಜವನ್ನು ಕಟ್ಟೋಣ ಎಂದು ಬಾನು ಮುಷ್ತಾಕ್ ಆಶಿಸಿದ್ದಾರೆ.
ಸಾಹಿತಿ ಹಾಗೂ 2025ರ ಅಂತಾರಾಷ್ಟ್ರೀಯ ಬೂಕರ್ ಬಹುಮಾನ ವಿಜೇತೆ ಬಾನು ಮುಷ್ತಾಕ್ ಅವರು ಇಂದು ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರಪೂಜೆಯೊಂದಿಗೆ ಪ್ರಾರಂಭವಾದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಮೈಸೂರು ಅರಸರ ಸಂಸ್ಕೃತಿಯ ಪರಂಪರೆಯಿಂದ ಹಿಡಿದು, ಕನ್ನಡ ಭಾಷೆಯ ಅಂತರಾಳದ ಹೃದಯಸ್ಪಂದನದವರೆಗೆ ಈ ಹಬ್ಬವು ನಮಗೆ ಸ್ಮರಿಸುತ್ತದೆ. ಸಂಸ್ಕೃತಿ ಎಂದರೆ ಬೇರೆ ಬೇರೆ ಧ್ವನಿಗಳ ಸಂಗಮ. ವಿಭಿನ್ನತೆಯಲ್ಲೇ ಏಕತೆಯ ಸುಗಂಧ. ಮಹಾರಾಜರು ಜಯಚಾಮರಾಜೇಂದ್ರ ಒಡೆಯರು ಮುಸ್ಲಿಂರ ನಂಬಿ, ಅವರನ್ನು ಅನುಮಾನಿಸದೇ, ಅಂಗರಕ್ಷಕರ ಪಡೆಯ ಸದಸ್ಯರಾಗಿದ್ದರು, ಇದು ನಮಗೆ ಬಹಳ ಹೆಮ್ಮೆಯ ಮತ್ತು ಅಪ್ಯಾಯಮಾನವಾದ ವಿಷಯ. ಸಂಸ್ಕೃತಿ ಎಂದರೆ ಹೃದಯದಗಲವನ್ನು ಹುಟ್ಟಿಸುವ ನನ್ನ ಧಾರ್ಮಿಕ ನಂಬಿಕೆ, ಯಾವಗಾಗಲೂ ಜೀವ ಪರ ಮಾನವೀಯಪರ. ಈ ನೆಲದ ಸಂಸ್ಕೃತಿಯ ಮೂಲ- ಎಲ್ಲರನ್ನೊಳಗೊಳ್ಳುವ ಎಲ್ಲರ ಬದುಕನ್ನು ಗೌರವಿಸುವ , ನಮ್ಮೆಲ್ಲರ ಸರ್ವ ಜನಾಂಗದ ಶಾಂತಿಯ ತೋಟ ಎಂದರು.
ತಾನೊಬ್ಬ ಕವಿಯತ್ರಿಯಾಗಿದ್ದು, ಕವಿತೆಯ ಮೂಲಕ ನನ್ನ ಸಂದೇಶವನ್ನು ತಿಳಿಸಲು ಬಯಸಿದ್ದು, ಮುಸ್ಲಿಂ ಹೆಣ್ಣುಮಗಳು ಬಾಗಿನವನ್ನು ಪಡೆದಾಗಿನ ತನ್ನ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸುವ ಕವಿತೆಯನ್ನು ಓದಿದರು.












