ಜ.25ರಿಂದ 29ರವರೆಗೆ ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬಸಿಲಿಕಾದ ವಾರ್ಷಿಕ ಮಹೋತ್ಸವ
ಕಾರ್ಕಳ:ಇತಿಹಾಸಪ್ರಸಿದ್ಧ ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ೨೦೨೬ರ ಜಾತ್ರಾ ಮಹೋತ್ಸವವು ಜ.25ರಿಂದ 29ರವರೆಗೆ ಅತ್ಯಂತ ಭಕ್ತಿಭಾವದಿಂದ ನಡೆಯಲಿದೆ ಎಂದು ಬಸಿಲಿಕಾದ ಧರ್ಮಗುರು ಅಲ್ಬನ್ ಡಿಸೋಜಾ ಹೇಳಿದರು.
ಅವರು ಜ.15 ರಂದು ಕಾರ್ಕಳದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ಜ. 16ರಿಂದ 24ರವರೆಗೆ 9 ದಿನಗಳ ಕಾಲ ನವದಿನಗಳ ಪ್ರಾರ್ಥನೆ (ನೊವೆನಾ) ಆಯೋಜಿಸಲಾಗಿದೆ. ಪ್ರಸಕ್ತ ವರ್ಷದ ಮಹೋತ್ಸವದ ಧ್ಯೇಯವಾಕ್ಯವಾಗಿ “ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ” ಎಂಬ ಸಂದೇಶವನ್ನು ಆಯ್ಕೆ ಮಾಡಲಾಗಿದೆ. ಈ ಧ್ಯೇಯವು ಮಾನವೀಯತೆ, ಪ್ರೀತಿ ಮತ್ತು ಸೇವಾಭಾವನೆಗೆ ಪ್ರೇರಣೆ ನೀಡುವ ಉದ್ದೇಶ ಹೊಂದಿದೆ ಎಂದರು.
ಮಹೋತ್ಸವದ ಪ್ರಮುಖ ದಿನಗಳಲ್ಲಿ ವಿವಿಧ ಧರ್ಮಾಧ್ಯಕ್ಷರು ಹಾಗೂ ಧರ್ಮಗುರುಗಳು ಭಾಗವಹಿಸಲಿದ್ದಾರೆ. ಜನವರಿ 25ರಂದು ಉಡುಪಿ ಧರ್ಮಪ್ರಾಂತ್ಯದ ಜೆರಾಲ್ಡ್ ಐಸಾಕ್ ಲೋಬೊ ಧರ್ಮಾಧ್ಯಕ್ಷರು ಹಾಗೂ ಮಂಗಳೂರು ನಿವೃತ್ತ ಧರ್ಮಾಧ್ಯಕ್ಷರಾದ ಪರಮಪೂಜ್ಯ ಲುವಿಸ್ ಪಾವ್ಲ್ ಡಿಸೋಜಾ ಅವರ ಉಪಸ್ಥಿತಿಯಲ್ಲಿ ಬಲಿಪೂಜೆ ನಡೆಯಲಿದೆ.
ಜನವರಿ 26ರಂದು ಕಾರವಾರದ ಪರಮಪೂಜ್ಯ ದುಮಿಂಗ್ ಡಾಯಸ್ ಧರ್ಮಾಧ್ಯಕ್ಷರು, ಜನವರಿ 27ರಂದು ಅಲ್ಲಾಹಾಬಾದ್ನ ಪರಮಪೂಜ್ಯ ಲುವಿಸ್ ಮಸ್ಕರೇನಸ್ ಧರ್ಮಾಧ್ಯಕ್ಷರು, ಜನವರಿ ೨೮ರಂದು ಉಡುಪಿ ಧರ್ಮಾಧ್ಯಕ್ಷರಾದ ಜೆರಾಲ್ಡ್ ಐಸಾಕ್ ಲೋಬೊ ಹಾಗೂ ಅಜ್ಮೀರ್ನ ಜೋನ್ ಕರ್ವಾಲ್ಲೊ ಧರ್ಮಾಧ್ಯಕ್ಷರು, ಜನವರಿ ೨೯ರಂದು ಮಂಗಳೂರು ಧರ್ಮಾಧ್ಯಕ್ಷರಾದ ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಬಲಿಪೂಜೆ ಕಾರ್ಯ ಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮಹೋತ್ಸವದ ಅಂಗವಾಗಿ ಜನವರಿ 29ರಂದು ಚರ್ಚ್ ಅವರಣದಲ್ಲಿ ಸತ್ಯದರ್ಶನ ಎಂಬ ಯಕ್ಷಗಾನ ಬಯಲಾಟವನ್ನು ಆಯೋಜಿಸಲಾಗಿದೆ.
ಭಕ್ತರ ಸುರಕ್ಷತೆ ದೃಷ್ಟಿಯಿಂದ ಈ ಬಾರಿ ಚರ್ಚ್ ಆವರಣದಲ್ಲಿ ನಲವತ್ತಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.ಇದೇ ಸಂದರ್ಭದಲ್ಲಿ ಸಾಮಾಜಿಕ ಸೇವೆಯ ಭಾಗವಾಗಿ ಬಡವರಿಗಾಗಿ ಐದಕ್ಕಿಂತ ಹೆಚ್ಚು ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಪ್ರತಿಯೊಂದು ಮನೆಗೆ ಸುಮಾರು ಅಂದಾಜು 10ಲಕ್ಷ ರೂ.ಗೂ ಹೆಚ್ಚು ಮಾಡಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಹಾಯಕ ಧರ್ಮಗುರು ವಂದನೀಯ ರೊಬಿನ್ ಸಾಂತ್ ಮಾಯೆರ್, ಉಪಾಧ್ಯಕ್ಷ ಸಂತೋಷ್ ಡಿಸಿಲ್ವ, ಕಾರ್ಯದರ್ಶಿ ರೊನಾಲ್ಡ್ ನೊರೊನ್ಹಾ, ಸದಸ್ಯರಾದ ವಂದೀಶ್ ಮತಾಯಸ್, ವಲೇರಿಯನ್ ಪಾಯಸ್, ಮೆಲ್ವಿನ್ ಕ್ಯಾಸ್ತಲಿನೊ, ಜಾನ್ಸನ್ ಡಿಸಿಲ್ವಾ ಉಪಸ್ಥಿತರಿದ್ದರು.

















