ನಮ್ಮೂರಿಗೆ ವಿಶ್ವದ ಮಟ್ಟದಲ್ಲಿ ಕೀರ್ತಿ ತಂದುಕೊಟ್ಟ ಪ್ರಸಿದ್ಧ ಸಾಹಿತಿ ಕವಿ, ಪ್ರವಚನಕಾರ ಹರಿದಾಸ ಜಿನದಾಸ ಅರ್ಥಧಾರಿ ಚಿಂತಕರಾಗಿದ್ದ ಅಂಬಾತನಯ ಮುದ್ರಾಡಿ ಸಂಸ್ಮರಣೆಯನ್ನು ಕುಟುಂಬವು ಮಾಡುತ್ತಿರುವುದು ಶ್ಲಾಘನೀಯ. ಅಂಬಾತನಯರ ಹೆಸರು ಶಾಶ್ವತವಾಗಬೇಕು. ಮುದ್ರಾಡಿಯಲ್ಲಿ ಲಭ್ಯವಿರುವ ಜಾಗದಲ್ಲಿ ಅಂಬಾತನಯರ ಹೆಸರಿನಲ್ಲಿ ಪಾರ್ಕ್ ನಿರ್ಮಿಸಿ ಶಾಶ್ವತ ನೆನಪಿಡುವ ಕಾರ್ಯ ಗ್ರಾಮ ಪಂಚಾಯಿತಿ ಮಾಡಬೇಕು, ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು. ಅವರು ಶನಿವಾರ ಮುದ್ರಾಡಿ ಶಾಲೆಯ ವಠಾರದಲ್ಲಿ ಶನಿವಾರ ನಡೆದ ಅಂಬಾತನಯ ಮುದ್ರಾಡಿ ತೃತೀಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೃದಯಸ್ಪರ್ಶಿ ಸಂಸ್ಮರಣಾ ಕಾರ್ಯಕ್ರಮ. ಶ್ರೇಷ್ಠ ವ್ಯಕ್ತಿಯಾದ ಅಂಬಾತನಯರು ನಮ್ಮ ಹೆಮ್ಮೆ. ಸಾಧನೆ ಮಾಡಿ ವಿಶ್ವದೆತ್ತರಕ್ಕೆ ಅಂಬಾತನಯರು ಏರಿದ್ದಾರೆ ಮಂಜುನಾಥ ಪೂಜಾರಿ ಸಂಸ್ಮರಣೆ ಮಾಡಿದರು.
ಅಂಬಾತನಯ ಮುದ್ರಾಡಿ ಸಂಸ್ಮರಣಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪತ್ರಕರ್ತರು, ಚಿಂತಕರು, ಯಕ್ಷಗಾನ ಮಾರ್ಗದರ್ಶಕರಾದ ಡಾ.ಕೆ.ಎಂ.ರಾಘವ ನಂಬಿಯಾರ್ ತಂದೆತಾಯಿಯ ಅತ್ಯುತ್ತಮ ಸಂಸ್ಕಾರದಿಂದ ಅಂಬಾತನಯರು ಮೇರು ವ್ಯಕ್ತಿಯಾಗಿ ಬೆಳೆದಿದ್ದಾರೆ. ಅವರ ಹೆಸರಿನ ಪ್ರಶಸ್ತಿ ಒಲಿದು ಬಂದಿರುವುದು ಅತ್ಯಂತ ಖುಷಿಯಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಯಕ್ಷಗಾನ ಮೇಳಗಳ ಯಜಮಾನ ಪಿ.ಕಿಶನ್ ಹೆಗ್ಡೆ ಮಾತನಾಡಿ ತಾನು ಯಕ್ಷರಂಗದಲ್ಲಿ ಎತ್ತರಕ್ಕೆ ಏರಲು ಅಂಬಾತನಯರ ಸಂಪೂರ್ಣ ಮಾರ್ಗದರ್ಶನವೇ ಮುಖ್ಯ. ಏಸುಕ್ರಿಸ್ತ ಪ್ರಸಂಗದ ಸಹಿತ ಯಕ್ಷಗಾನ ಸೇರಿ ನಾಡಿನ ಸಾಹಿತ್ಯ ಲೋಕಕ್ಕೆ ಅಪೂರ್ವ ಕೊಡುಗೆಯನ್ನು ಅಂಬಾತನಯರು ನೀಡಿದ್ದಾರೆ. ಅಂಬಾತನಯರು ನಾಡಿಗೆ ದೊಡ್ಡ ಗೌರವ ಎಂದು ಸ್ಮರಿಸಿದರು. ಅರ್ಹವಾಗಿಯೇ ರಾಘವ ನಂಬಿಯಾರ್ ಅವರಿಗೆ ಅಂಬಾತನಯ ಮುದ್ರಾಡಿ ಪ್ರಶಸ್ತಿ ಲಭಿಸಿದೆ ಎಂದು ಪ್ರಸಂಶಿದರು. ಯಕ್ಷಗಾನದ ಬಗೆಗಿನ ಪ್ರಕಟಣೆಗೆ ಭಾಕಿಯಿರುವ ಅಂಬಾತನಯರ ಪುಸ್ತಕಗಳನ್ನು ಶೀಘ್ರವಾಗಿ ಪ್ರಕಟಿಸುವುದಾಗಿ ಕಿಶನ್ ಹೆಗ್ಡೆ ತಿಳಿಸಿದರು.
ಮುದ್ರಾಡಿಯ ವೈಧ್ಯ ಡಾ.ಎಂ.ಎಸ್.ರಾವ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ರಾಜ್ಯದ ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅವರನ್ನು ಗೌರವಿಸಲಾಯಿತು. ವಿದ್ಯೆ ಅಂಬಾತನಯರಿಗೆ ವಿನಯ ತಂದುಕೊಟ್ಟಿದೆ, ಅದು ಅವರನ್ನು ಎತ್ತರಕ್ಕೆ ಏರಿಸಿ ಗೌರವ ತಂದುಕೊಟ್ಟಿದೆ ಎಂದು ಅಂಬಾತನಯರ ಸಹೋದರ ವಿಜಯ ಕುಮಾರ್ ಮುದ್ರಾಡಿ ಪ್ರಾಸ್ತಾವಿಕವಾಗಿ ಹೇಳಿದರು.
ಕಾರ್ಕಳದ ವೈ ಅನಂತಪದ್ಮನಾಭ ಭಟ್ ಅವರಿಂದ ತುಳು ಹರಿಕಥಾ ಸತ್ಸಂಗ ಶ್ರೀ ಪುರಂದರ ದಾಸರು ನಡೆಯಿತು. ಮುದ್ರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶ್ರೀನಿವಾಸ ಭಂಡಾರಿ ಮುದ್ದೂರು, ಅಂಬಾತನಯ ಮುದ್ರಾಡಿ ಅವರ ಪತ್ನಿ ಅಕ್ಕಮಕ್ಕನವರು, ಅಂಬಾತನಯರ ಸಹೋದರ ಪತ್ನಿ ಸುಮ ವಿಜಯ ಕುಮಾರ್, ಪುತ್ರ ಸಂಘಟಕ ಸಮಾಜಸೇವಕ ಸನತ್ ಕುಮಾರ್ ಮುದ್ರಾಡಿ, ಪುತ್ರಿಯರಾದ ಲಲಿತಾ ಮುದ್ರಾಡಿ, ಪ್ರಸನ್ನ ಮುದ್ರಾಡಿ, ಶ್ರೀ ಮುದ್ರಾಡಿ, ಶೋಭಾ ಮುದ್ರಾಡಿ, ಸೊಸೆಯಂದಿರಾದ ಪ್ರಮೋದಾ ಶರತ್ ಕುಮಾರ್, ಉಷಾ ಸನತ್ ಕುಮಾರ್, ಪ್ರಮೀಳಾ ಸುಬ್ರಹ್ಮಣ್ಯ ಪ್ರಸಾದ್, ಅಳಿಯ ದತ್ತಾತ್ರೇಯ ಹೆಗಡೆ, ಮತ್ತು ಅಂಬಾತನಯ ಮುದ್ರಾಡಿ ಕುಟುಂಬಸ್ಥರು, ಸಾಹಿತಿಗಳು, ಗಣ್ಯರು, ಪ್ರಮುಖರು, ಅಂಬಾತನಯರ ಅಭಿಮಾನಿಗಳು ಉಪಸ್ಥಿತರಿದ್ದರು. ಅಧಿತಿ ಮುದ್ರಾಡಿ ಪ್ರಾರ್ಥಿಸಿ ವಿಜಯ ಕುಮಾರ್ ಮುದ್ರಾಡಿ ಸ್ವಾಗತಿಸಿ, ಶ್ರೀ ಮುದ್ರಾಡಿ ಪ್ರಶಸ್ತಿ ಪತ್ರ ವಾಚಿಸಿ ಲಲಿತಾ ಮುದ್ರಾಡಿ ನಿರೂಪಿಸಿ ವಂದಿಸಿದರು.
















