ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇನಲ್ಲಿ ಇತ್ತೀಚೆಗೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ, ಡಾ. ಟಿ. ಎಂ. ಎ. ಪೈ. ರೋಟರಿ ಆಸ್ಪತ್ರೆ ಕಾರ್ಕಳ ಹಾಗೂ ಮುನಿಯಾಲು ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಶಿಬಿರವನ್ನು ಉಡುಪಿ ಜಿಲ್ಲಾ ರಕ್ತನಿಧಿ ಘಟಕದ ಮುಖ್ಯಸ್ಥೆ ಡಾ. ವೀಣಾ ಉದ್ಘಾಟಿಸಿ ಮಾತನಾಡಿ ರಕ್ತದಾನ ಮಾಡುವುದರಿಂದ ಜೀವ ಉಳಿಸುವುದು ಮತ್ತು ರಕ್ತದಾನದಿಂದ ಮಾನವನ ದೇಹ ಪರಿಶುದ್ಧಗೊಳ್ಳುವುದಲ್ಲದೇ, ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ, ರಕ್ತದಾನ ಮಾಡಲು ಪ್ರೋತ್ಸಾಹಿಸಿದರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಕೆ.ಜಿ. ಸುಧಾಕರ್ ವೈಯಕ್ತಿಕ ಹಾಗೂ ಸಾಮಾಜಿಕ ಆರೋಗ್ಯ ದೃಷ್ಟಿಯಿಂದ ಯುವಸಮುದಾಯ ರಕ್ತದಾನ ಮಾಡುವುದು ಒಳ್ಳೆಯದು ಎಂದರು.
25 ಯುನಿಟ್ ರಕ್ತ ಸಂಗ್ರಹ ನಡೆಯಿತು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಗೋಪಿನಾಥ ಭಟ್ ಸ್ವಾಗತಿಸಿದರು, ಸಮಾಜಶಾಸ್ತ್ರದ ಮುಖ್ಯಸ್ಥ ಮಂಜುನಾಥ ಆಚಾರಿ ನಿರೂಪಿಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
















