ಮುನಿಯಾಲು ಸಮೀಪದ ಪಡುಕುಡೂರಿನಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಸುಮಾರು 600 ವರ್ಷಗಳಿಗೂ ಪುರಾತನವಾದ ಶ್ರೀ ಕಾಡ್ಯ, ನಾಗಸ್ಥಾನ ಮತ್ತು ಪರಿವಾರ ದೈವಗಳ ಕ್ಷೇತ್ರವನ್ನು ಜೀರ್ಣೋದ್ಧಾರ ಗೊಳಿಸಲಾಗುತ್ತಿದೆ. ಶ್ರೀಕ್ಷೇತ್ರದ ವ್ಯಾಪ್ತಿಗೊಳಪಟ್ಟ ಸಮಾನಮನಸ್ಕ ಮನೆಮಂದಿಯು ಸೇರಿ ಜೀಣೋದ್ಧಾರ ಸಮಿತಿಯನ್ನು ರಚಿಸಿ ಜೀರ್ಣೋದ್ಧಾರದ ಪುಣ್ಯದ ಕಾರ್ಯವನ್ನು ನಡೆಸುತ್ತಿದ್ದಾರೆ.
ಪುರಾತನ ಕ್ಷೇತ್ರ ಬಗೆಗೆ ವೇದಮೂರ್ತಿ ರವಿರಾಜ್ ಉಪಾಧ್ಯಾಯರು ಪ್ರಶ್ನಾಚಿಂತನೆಯಲ್ಲಿ ತಿಳಿಸಿದಂತೆ ಪಡುಕುಡೂರು ಶಿವಪುರ ರಸ್ತೆಯ ಪಡುಬದಿಯಿಂದ ಮತ್ತು ಕೊಡಂಜೆ ಮನೆಯಿಂದ ಮೂಡುಬದಿಯ ವರೆಗಿನ ಎಲ್ಲಾ ಮನೆಯವರಿಗೆ ಶ್ರೀಕಾಡ್ಯ ಕ್ಷೇತ್ರವು ಸಂಬಂಧಿಸಿರುವುದೆಂದು ಕಂಡು ಬಂದಿದೆ. ಸುಂದರ ಕಾನನದ ನಡುವೆ ಶ್ರೀಕಾಡ್ಯ ಕ್ಷೇತ್ರಕ್ಕೆ ಅಂದಿನ ಕಾಲದಲ್ಲೇ ಸುಸಜ್ಜಿತವಾದ ಜಾಗವನ್ನು ಮೀಸಲಿರಿಸಲಾಗಿದೆ. ಇದೀಗ ಜೀರ್ಣೋದ್ಧಾರ ಕಾರ್ಯ ಭರದಿಂದ ನಡೆಯುತ್ತಿದೆ. ಶ್ರೀ ಕಾಡ್ಯ, ನಾಗಸ್ಥಾನ ಮತ್ತು ಪರಿವಾರ ದೈವಗಳ ಸಾನಿಧ್ಯದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಸುಮಾರು 20 ಲಕ್ಷ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಕಾರ್ಯಗಳು ನಡೆಯುತ್ತಿದೆ. ಮುಂದಿನ ಹಂತದಲ್ಲಿ ಕ್ಷೇತ್ರಕ್ಕೆ ಆವರಣ ಗೋಡೆ, ತೆರೆದ ಬಾವಿ ನಿರ್ಮಾಣ ಸೇರಿ ವಿವಿಧ ಅವಶ್ಯ ಕಾರ್ಯಗಳು ನಡೆಯಬೇಕಿದೆ. ಭಕ್ತ ಸಮೂಹ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ನೆರವು ನೀಡುವಂತೆ ಸಮಿತಿಯು ಮನವಿ ಮಾಡಿದೆ.
ಎಪ್ರಿಲ್ 23ರಂದು ಶ್ರೀ ಕಾಡ್ಯ, ನಾಗಸ್ಥಾನದ ಪ್ರತಿಷ್ಠಾ ಮಹೋತ್ಸವ. : ಪಡುಕುಡೂರಿನಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಕಾಡ್ಯ ನಾಗಸ್ಥಾನ ಮತ್ತು ಪರಿವಾರ ಶಕ್ತಿಗಳ ಪ್ರತಿಷ್ಠಾ ಮಹೋತ್ಸವವು ಇದೇ ಎಪ್ರಿಲ್ ೨೨ ಮತ್ತು ೨೩ ರಂದು ನಡೆಯಲಿದೆ. ವೇದಮೂರ್ತಿ ಸೂರಿಮಣ್ಣು ಸದಾಶಿವ ಉಪಾಧ್ಯಾಯ ಮತ್ತು ವೇದಮೂರ್ತಿ ರವಿರಾಜ್ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ. ಶ್ರೀ ಕಾಡ್ಯ ಕ್ಷೇತ್ರದ ಕುಕ್ಕುದಕಟ್ಟೆಯ ಅರ್ಚಕ ಕುಟುಂಬಸ್ಥರಿಂದ ಪೂಜೆಗಳು ನೆರವೇರಲಿದೆ. ೨೨ ರಂದು ವಾಸ್ತುಹೋಮ, ರಾಕ್ಷೋಘ್ನ ಹೋಮ ಸಹಿತ ಧಾರ್ಮಿಕ ವಿಧಿವಿಧಾನಗಳು ಹಾಗೂ 23 ರಂದು ಶ್ರೀಕಾಡ್ಯ, ನಾಗದೇವರು ಮತ್ತು ಪರಿವಾರ ಶಕ್ತಿಗಳ ಪ್ರತಿಷ್ಠಾ ಮಹೋತ್ಸವ, ಕಲಶಾಭಿಷೇಕ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಮಿತಿಯು ತಿಳಿಸಿದೆ.




















