ಫರ್ನಿಚರ್ ಅಂಗಡಿಗೆ ಬೆಂಕಿ ತಗುಲಿ ಅಂದಾಜು ಸುಮಾರು 30 ಲಕ್ಷ ರೂ. ನ ಸ್ವತ್ತು ನಷ್ಟವಾಗಿರುವ ಘಟನೆ ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಮುಂಡೆಚಾರು ಎಂಬಲ್ಲಿ ನಡೆದಿದೆ.
ಸುಧಾಕರ ಆಚಾರ್ಯ ಎಂಬವರಿಗೆ ಸೇರಿದ ಅಂಗಡಿ ಇದಾಗಿದ್ದು, ಬುಧವಾರ ಬೆಳಗಿನ ಜಾವ ಬೆಂಕಿ ಬಿದ್ದಿರುವ ಘಟನೆ ಗಮನಕ್ಕೆ ಬಂದಿದೆ. ಮೂಡಬಿದ್ರೆ ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.
ಸಿದ್ದವಾಗಿ ಮಾರಾಟಕ್ಕೆ ತಯಾರಾಗಿದ್ದ ಹಲವಾರು ಫರ್ನಿಚರ್ ವಸ್ತುಗಳು, ಯಂತ್ರೋಪಕರಣಗಳು ಮಾತ್ರವಲ್ಲದೆ ಅಂಗಡಿ ಕಟ್ಟಡವೂ ಬೆಂಕಿಯ ಕೆನ್ನಾಲಿಗೆಗೆ ಹಾನಿಗೊಳಗಾಗಿದ್ದು, ಅಂಗಡಿ ಮಾಲೀಕರ ಕಣ್ಣೀರಿಗೆ ಕಾರಣವಾಗಿದೆ.
ಸ್ಥಳೀಯರ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಘಟನೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





























