ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ನಂತರ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದ ನೀಟ್ ಆಕಾಂಕ್ಷಿ 18 ವರ್ಷದ ಆಕಾಂಕ್ಷಾ ಚತುರ್ವೇದಿ ಮೇ 20ರಂದು ಮಹಾರಾಷ್ಟ್ರದ ನಾಗುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಮಧ್ಯಪ್ರದೇಶದ ಮಾವೊಗಂಜ್ ಜಿಲ್ಲೆಯ ಆಕಾಂಕ್ಷಾ ನೇಣಿಗೆ ಶರಣಾಗುವ ಮುನ್ನ ಬರೆದಿಟ್ಟಿದ್ದ ಡೆತ್ ನೋಟ್ ಸಂಬಂಧಿಕರಿಂದ ಗುರುವಾರ ಬೆಳಕಿಗೆ ಬಂದಿದೆ.
ಆಕಾಂಕ್ಷಾ ಮೇ 3ರಂದು ನಡೆದ ನೀಟ್-ಯುಜಿ ಪರೀಕ್ಷೆಗೆ ಹಾಜರಾಗಿದ್ದರು. ‘ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಬೆಳಕಿಗೆ ಬಂದ ನಂತರ ಆಕಾಂಕ್ಷಾ ತುಂಬಾ ಖಿನ್ನತೆಗೆ ಒಳಗಾಗಿದ್ದಳು. ವರ್ಷಗಟ್ಟಲೆ ನಡೆಸಿದ ಕಠಿಣ ತಯಾರಿ ಮತ್ತು ಕುಟುಂಬದ ಆರ್ಥಿಕ ಸ್ಥಿತಿಗತಿ ಹಾಗೂ ಜೂನ್ 21 ರಂದು ನಡೆಯಲಿರುವ ಮರುಪರೀಕ್ಷೆಯ ಒತ್ತಡವು ಅವಳ ಮಾನಸಿಕ ಯಾತನೆ ಯನ್ನು ಮತ್ತಷ್ಟು ಹೆಚ್ಚಿಸಿತ್ತು,” ಎನ್ನುತ್ತಾರೆ ಕುಟುಂಬಸ್ಥರು.
ಆಕಾಂಕ್ಷಾ ಚತುರ್ವೇದಿ, ‘ಅಪ್ಪ – ಅಮ್ಮ ನಿಮ್ಮ ಮಗಳು ಓದಿ ಡಾಕ್ಟರ್ ಆಗ್ತಾಳೆ ಅಂತ ನೀವು ನಂಬಿದ್ರಿ. ಆದರೆ, ನನಗೆ ಮತ್ತೊಮ್ಮೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ, ನಾನು ನಿಮ್ಮಿಬ್ಬರನ್ನೂ ದುಃಖಕ್ಕೆ ತಳ್ಳುತ್ತಿದ್ದೇನೆ. ಒಂದು ವೇಳೆ ನಾನು ಮತ್ತೊಮ್ಮೆ ಪರೀಕ್ಷೆ ಬರೆದರೂ ಉತ್ತಮ ಅಂಕ ಬರುತ್ತದೆ ಎಂಬ ಗ್ಯಾರಂಟಿ ಇಲ್ಲ,” ಎಂದು ಡೆತ್ ನೋಟ್ ಬರೆದಿಟ್ಟಿದ್ದು ಈಗ ಬೆಳಕಿಗೆ ಬಂದಿದೆ. ಮೇ 20ರಂದು ಆಕಾಂಕ್ಷಾ ನಾಗುರದಲ್ಲಿ ವಾಸವಿದ್ದ ಕಟ್ಟಡದಲ್ಲಿ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.


















