ಕೇರಳ ರಾಜ್ಯದ ನೂತನ ಸ್ಟೇಟ್ ಅಟಾರ್ನಿ ನ್ಯಾಯವಾದಿ ಅನೂಪ್ ನಾಯರ್ ಅವರು ಇಂದು ಕಾರ್ಕಳದ ತನ್ನ ಗುರುಗಳಾದ ಹಿರಿಯ ನ್ಯಾಯವಾದಿ ದಿ. ಎಂ. ಕೆ. ವಿಜಯ್ ಕುಮಾರ್ ಅವರ ಮನೆಗೆ ಭೇಟಿ ನೀಡಿ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಮರ್ಪಿಸಿದರು.
ನ್ಯಾಯಾಂಗ ಕ್ಷೇತ್ರಕ್ಕೆ ದಿ. ಎಂ. ಕೆ. ವಿಜಯ್ ಕುಮಾರ್ ರವರ ಆರು ದಶಕಗಳ ಸುಧೀರ್ಘ ಸೇವೆಯನ್ನು ಸ್ಮರಿಸಿದರು . ತನ್ನನ್ನು ಸೇರಿ ನೂರಾರು ವಕೀಲ ಶಿಷ್ಯರಿಗೆ ಮಾರ್ಗದರ್ಶನ ಮಾಡಿ ಸಮರ್ಥ ನ್ಯಾಯವಾದಿಗಳಾಗಿ ರೂಪಿಸುವಲ್ಲಿ ನ್ಯಾಯಾಂಗ ಕ್ಷೇತ್ರದ ದಿಗ್ಗಜ ದಿ. ಎಂ. ಕೆ. ವಿಜಯ್ ಕುಮಾರ್ ಅನನ್ಯ ಕೊಡುಗೆಯನ್ನು ನೀಡಿರುತ್ತಾರೆ ಎಂದು ನುಡಿದರು. ಎಂ. ಕೆ. ವಿಜಯಕುಮಾರ್ ಅವರ ಅಪಾರ ವಿದ್ವತ್, ಕೌಶಲ್ಯ, ನಿಷ್ಠೆ ಹಾಗೂ ಪ್ರಾಮಾಣಿಕ ಸೇವೆಯಿಂದ ಧೀಮಂತ ವಕೀಲರೆಂಬ ಪ್ರತೀತಿ ಅವರು ನ್ಯಾಯ ಕ್ಷೇತ್ರದ ದಂತಕಥೆ ಎಂದು ನ್ಯಾಯವಾದಿ ಅನೂಪ್ ನಾಯರ್ ತಮ್ಮ ಗುರುಗಳನ್ನು ಸ್ಮರಿಸಿದರು.
ಇತ್ತೀಚಿಗೆ ಕೇರಳ ರಾಜ್ಯದ ಮುಖ್ಯಮಂತ್ರಿ ವಿ.ಡಿ. ಸತೀಸನ್ ರವರು ನ್ಯಾಯವಾದಿ ಅನೂಪ್ ನಾಯರ್ ಅವರನ್ನು ಕೇರಳ ರಾಜ್ಯದ ಸ್ಟೇಟ್ ಅಟಾರ್ನಿಯಾಗಿ ನೇಮಕ ಮಾಡಿದ ಕ್ಯಾಬಿನೆಟ್ ನಿರ್ಧಾರವನ್ನು ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಗುರುಗಳಾದ ಎಂ.ಕೆ. ವಿಜಯಕುಮಾರ್ ರವರಿಗೆ ತಮ್ಮ ಶ್ರದ್ಧಾ ನಮನವನ್ನು ಅರ್ಪಿಸಲು ನ್ಯಾಯವಾದಿ ಅನೂಪ್ ನಾಯರ್ ಅವರು ಕಾರ್ಕಳಕ್ಕೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಎಂ.ಕೆ. ವಿಜಯ್ ಕುಮಾರ್ ರವರ ಪುತ್ರರಾದ ನ್ಯಾಯವಾದಿ ಎಂ. ಕೆ. ಸುವ್ರತ್ ಕುಮಾರ್, ಎಂ. ಕೆ. ವಿಪುಲ್ ತೇಜ್, ಸೊಸೆ ಶ್ವೇತ ವಿಪುಲ್ ತೇಜ್, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಹರೀಶ್ ಅತಿಕಾರಿ, ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್, ಹಿರಿಯ ನ್ಯಾಯವಾದಿಗಳಾದ ಜಿ. ಮುರಳೀಧರ ಭಟ್, ನ್ಯಾಯವಾದಿಗಳಾದ ಪರಿತೋಷ್ ಜೈನ್, ಕೇರಳ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಪಿ. ಬಿ. ಸುಬ್ರಮಣ್ಯಂ, ಆರ್. ಶ್ರೀಹರಿ, ಶ್ರೀಕಾಂತ್ ಜೈನ್, ಚಂದ್ರರಾಜ ಹೆಗ್ಡೆ, ಪ್ರಕಾಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು.



















