ಅಯೋಧ್ಯೆಯ ರಾಮಮಂದಿರದಲ್ಲಿ ನಗದು ಕಾಣಿಕೆಯನ್ನು ಎಣಿಕೆ ಕೆಲಸ ಮಾಡುತ್ತಿದ್ದ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ 23 ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ.
ಕೆಲಸದ ವೇಳಾಪಟ್ಟಿಯಲ್ಲಿನ ಬದಲಾವಣೆಗಳು ಹಾಗೂ ಸಂಬಳದಲ್ಲಿನ ಕಡಿತದ ಕಾರಣ ನೀಡಿ ರಾಜೀನಾಮೆ ನೀಡಿದ್ದಾಗಿ ತಿಳಿಸಿದ್ದಾರೆ. ಈ ಉದ್ಯೋಗಿಗಳು ಮೊದಲು ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಹೊಸ ವೇಳಾಪಟ್ಟಿ ಪ್ರಕಾರ ಎಲ್ಲರೂ ಒಂದೇ ಪಾಳಿಯಲ್ಲಿ ಕೆಲಸ ಮಾಡಬೇಕಾಯಿತು. ಕೆಲಸದ ಅವಧಿಯನ್ನೂ 6ರಿಂದ 9 ಗಂಟೆಗೆ ವಿಸ್ತರಿಸಲಾಯಿತು ಹಾಗೂ ರಜೆಗಳನ್ನೂ ಕಡಿಮೆ ಮಾಡಿ, ವೇತನವನ್ನೂ ಕಡಿತಗೊಳಿಸ
ಲಾಯಿತು ಎಂದು ಮೂಲಗಳು ತಿಳಿಸಿವೆ.
ಈ ಬದಲಾವಣೆಗಳನ್ನು ವಿರೋಧಿಸಿ, ಹಿಂದಿನ ವೇಳಾಪಟ್ಟಿಯನ್ನೇ ಅನುಸರಿಸುವಂತೆ ಟ್ರಸ್ಟ್ ಆಡಳಿತ ಮಂಡಳಿಯನ್ನು ಅವರು ಕೋರಿದ್ದರು. ಆದರೆ ಈ ಬೇಡಿಕೆಯನ್ನು ತಿರಸ್ಕರಿಸಲಾಯಿತು ಎನ್ನಲಾಗಿದೆ.
36 ಮಂದಿ ನಗದು ಕಾಣಿಕೆಯನ್ನು ಎಣಿಸುವ ಕೆಲಸ ಮಾಡುತ್ತಾರೆ. ಈ ಮೊದಲು ಎಲ್ಲರಿಗೂ ತಿಂಗಳಿಗೆ ₹14,755 ವೇತನ ನೀಡಲಾಗುತ್ತಿತ್ತು. ಕೆಲವರಿಗಷ್ಟೇ ವೇತನ ಹೆಚ್ಚಿಸಲಾಗಿದೆ. ಈ ಪೈಕಿ 13 ಮಂದಿ ಮಾತ್ರವೇ ಗುರುವಾರ ಕೆಲಸಕ್ಕೆ ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ. ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಇಲ್ಲಿ ನಗದು ಕಾಣಿಕೆ ಎಣಿಕೆಗೆ ನೇಮಿಸಿಕೊಳ್ಳಲಾಗಿತ್ತು. ಇದೀಗ ರಾಮಮಂದಿರದ ಕಾಣಿಕೆ ಕಳವು ಪ್ರಕರಣದ ಸಂದರ್ಭದಲ್ಲಿ ಈ ಎಲ್ಲ ಉದ್ಯೋಗಿಗಳನ್ನೂ ಮತ್ತೆ ಗೃಹ ರಕ್ಷಕ ದಳಕ್ಕೆ ಮರಳಿಸಲು ಯೋಜಿಸಲಾಗಿತ್ತು. ಇದು ಇಷ್ಟವಿಲ್ಲದೇ ಅವರು ರಾಜೀನಾಮೆ ನೀಡಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ.



















