ವಿದ್ಯಾರ್ಥಿಗಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಶಾಲಾ ವ್ಯಾನ್ಗೆ ರೈಲು ಡಿಕ್ಕಿಯಾದ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ನಡೆದಿದೆ. ದುರಂತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಮುರ್ಷಿದಾಬಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುರ್ಷಿದಾಬಾದ್ನ ಬೆರ್ಹಾಂಪೋರ್ ಪ್ರದೇಶದ ಕರ್ಣಸುಬರ್ಣ ರೈಲ್ವೆ ಕ್ರಾಸಿಂಗ್ನಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ಪ್ಯಾಸೆಂಜರ್ ರೈಲು ಶಾಲಾ ವ್ಯಾನ್ಗೆ ಡಿಕ್ಕಿಯಾಗಿದ್ದರಿಂದ ಈ ದುರಂತ ಸಂಭವಿಸಿದೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ಬೆರ್ಹಾಂಪೋರ್ ಪ್ರದೇಶದ ಕರ್ಣಸುಬರ್ಣ ರೈಲ್ವೆ ಕ್ರಾಸಿಂಗ್ನಲ್ಲಿ ಜು.17 ರಂದು ಬೆಳಗ್ಗೆ ಪ್ಯಾಸೆಂಜರ್ ರೈಲು ಶಾಲಾ ವ್ಯಾನ್ಗೆ ಡಿಕ್ಕಿ ಹೊಡೆದಿದೆ. ರೈಲ್ವೆ ಕ್ರಾಸಿಂಗ್ ತೆರೆದಿದ್ದು, ಶಾಲಾ ವ್ಯಾನ್ ಅದನ್ನು ದಾಟುತ್ತಿದ್ದಾಗ ನಿಮ್ಟಿಟಾ- ಕಟ್ವಾ ಪ್ಯಾಸೆಂಜರ್ ರೈಲು ಅದಕ್ಕೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕ್ರಾಸಿಂಗ್ ಗೇಟ್ ಅಪ್ ಲೈನ್ ಒಂದು ರೈಲು ಹಾದುಹೋಗುವವರೆಗೆ ಮುಚ್ಚಲ್ಪಟ್ಟಿತ್ತು. ಬಳಿಕ ಅದನ್ನು ತೆರೆಯಲಾಯಿತು. ಪಕ್ಕದ ಹಳಿಯಲ್ಲಿ ಮತ್ತೊಂದು ರೈಲು ಸಮೀಪಿಸಿದ್ದರಿಂದ ಅದನ್ನು ಮತ್ತೆ ಮುಚ್ಚಲಾಗಿಲ್ಲ. ಇದರಿಂದಾಗಿ ಅಪಘಾತ ಸಂಭವಿಸಿದೆ ಎನ್ನುತ್ತಾರೆ ಸ್ಥಳೀಯರು.
ಈ ಕುರಿತು ಮಾಹಿತಿ ನೀಡಿದ ರೈಲ್ವೇ ಅಧಿಕಾರಿ, ಶಾಲೆಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವ್ಯಾನ್ ಕಟ್ವಾದಿಂದ ಸುಮಾರು 48 ಕಿ.ಮೀ ದೂರದಲ್ಲಿರುವ ಕರ್ಣ ಸುಬರ್ಣ ನಿಲ್ದಾಣದ ಬಳಿಯ ಲೆವೆಲ್ ಕ್ರಾಸಿಂಗ್ ಗೇಟ್ನಲ್ಲಿ ರೈಲು ಹಳಿಗಳನ್ನು ದಾಟುತ್ತಿದ್ದಾಗ ದುರಂತ ಸಂಭವಿಸಿದೆ. ಮಾಹಿತಿ ತಿಳಿದ ತಕ್ಷಣವೇ ಹಿರಿಯ ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ರೈಲ್ವೆ ಗೇಟ್ಮ್ಯಾನ್ನ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ. ಈ ಕುರಿತು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಗಾಯಾಳುಗಳನ್ನು ಮುರ್ಷಿದಾಬಾದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಮಾಹಿತಿ ತಿಳಿದ ತಕ್ಷಣ ರೈಲ್ವೆಯ 10 ಸದಸ್ಯರ ತಂಡ ಸ್ಥಳಕ್ಕೆ ತೆರಳಿದೆ. ಅಪಘಾತದ ಬಳಿಕ ಪೂರ್ವ ರೈಲ್ವೆಯ ಹೌರಾ ವಿಭಾಗದ ಅಜೀಮ್ಗಂಜ್-ಕಟ್ವಾ ವಿಭಾಗದಲ್ಲಿ ರೈಲು ಸೇವೆಯಲ್ಲಿ ವ್ಯತ್ಯಯವಾಗಿದೆ ಎಂದು ಅವರು ಹೇಳಿದರು.


















