ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169 ಎ ಆಗುಂಬೆ ಘಾಟಿಯ ವಿಸ್ತರಣೆಗೆ ಅರಣ್ಯ ಇಲಾಖೆಯ ಯಾವೂದೇ ಕಾನೂನು ತೊಡಕುಗಳು ಇಲ್ಲ ಎಂದು ಪ್ರಗತಿಪರ ಹೋರಾಟಗಾರ ಮುಖಂಡರಾದ ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ಈ ವಿಚಾರವನ್ನು ಗುರುವಾರ ಹೆಬ್ರಿಗೆ ಆಗಮಿಸಿದ್ದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ನೀರೆ ಕೃಷ್ಣ ಶೆಟ್ಟಿಯವರು ಮನವರಿಕೆ ಮಾಡಿದ್ದಾರೆ.
ಅಂದೇ ಬ್ರಿಟೀಷ್ ಸರ್ಕಾರವೇ ಮುಂದಾಲೋಚನೆಯಿಂದ ಆಗುಂಬೆ ಘಾಟಿಯ ವಿಸ್ತರಣೆಗಾಗಿ ೪೦ ಮೀಟರ್ ಜಾಗವನ್ನು ಮೀಸಲಿರಿಸಿದ್ದಾರೆ. ಆ ಎಲ್ಲಾ ದಾಖಲೆಗಳನ್ನು ಕೇಂದ್ರದ ಯುಪಿಎ ಸರ್ಕಾರದಲ್ಲಿ ಭೂಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿದ್ದ ಆಸ್ಕರ್ ಫೆರ್ನಾಂಡಿಸ್ ಮತ್ತು ಅರಣ್ಯ ಮತ್ತು ಪರಿಸರ ಸಚಿವರಾಗಿದ್ದ ಡಾ. ಎಂ.ವೀರಪ್ಪ ಮೊಯಿಲಿ ಯವರು ಪರಿಶೀಲಿಸಿ ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169 ಎ ಗೆ ಸಾಕಷ್ಟು ಅನುದಾನವನ್ನು ಮೀಸಲಿಟ್ಟು ಮಂಜೂರಾತಿ ನೀಡಿದ್ದರು. ಹಾಗಾಗಿ ಆಗುಂಬೆ ಘಾಟಿಯನ್ನು ವಿಸ್ತರಿಸಲು ಯಾವೂದೇ ತೊಡಕುಗಳಿಲ್ಲ. ರಾಷ್ಟ್ರೀಯ ಹೆದ್ದಾರಿ ಮಂಜೂರಾಗಿ 13 ವರ್ಷಗಳು ಕಳೆದರೂ ಹೆದ್ದಾರಿ ಇಲಾಖೆಯು ಆಗುಂಬೆ ಘಾಟಿಯನ್ನು ವಿಸ್ತರಿಸುವ ಕಾರ್ಯಕ್ಕೆ ಮನಸ್ಸು ಮಾಡುತ್ತಿಲ್ಲ ಎಂದು ನೀರೆ ಕೃಷ್ಣ ಶೆಟ್ಟಿ ಹೇಳಿದ್ದಾರೆ.
ಆಗುಂಬೆ ಘಾಟಿಯನ್ನು ೪ ಪಥದ ರಸ್ತೆಯನ್ನು ಮಾಡಲು ಮುಕ್ತ ಅವಕಾಶವಿದೆ. ಸುರಂಗ ಮಾರ್ಗದ ಅವಶ್ಯಕತೆಯೂ ಇಲ್ಲ. ಅಂದು ಸಂಸದರಾಗಿದ್ದ ಜಯಪ್ರಕಾಶ ಹೆಗ್ಡೆ, ಶಾಸಕರಾಗಿದ್ದ ಹೆಬ್ರಿ ಗೋಪಾಲ ಭಂಡಾರಿ ಮತ್ತು ತೀರ್ಥಹಳ್ಳಿಯ ಕಿಮ್ಮನೆ ರತ್ನಾಕರ್ ಅವರೊಂದಿಗೆ ಚರ್ಚಿಸಿ ಆಸ್ಕರ್ ಫೆರ್ನಾಂಡಿಸ್ ಮತ್ತು ಡಾ. ಎಂ.ವೀರಪ್ಪ ಮೊಯಿಲಿ ಯವರು ಅಂತಿಮ ಗೊಳಿಸಿದ್ದರು. ಅತೀ ಶೀಘ್ರವಾಗಿ ಆಗುಂಬೆ ಘಾಟಿಯನ್ನು ವಿಸ್ತರಿಸಿ 4 ಪಥದ ರಸ್ತೆಯನ್ನಾಗಿ ಮಾಡಲಿ ಎಂದು ನೀರೆ ಕೃಷ್ಣ ಶೆಟ್ಟಿಯವರು ಒತ್ತಾಯಿಸಿದ್ದಾರೆ.


















