ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಕ್ರಿಯೇಟಿವ್ ಗುರುದೇವೋಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾಗಿ ಅಕ್ಷರ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಹರೇಕಳ ಹಾಜಬ್ಬರವರು ಭಾಗವಹಿಸಿದ್ದರು. ಕಡುಬಡತನದಲ್ಲಿ ಹುಟ್ಟಿ ತಾನು ಅಕ್ಷರವನ್ನು ಕಲಿಯದಿದ್ದರೂ ತನ್ನೂರಿನ ಮಕ್ಕಳು ಅದರಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ತನ್ನೂರಿನಲ್ಲಿ ಒಂದು ಶಾಲೆಯನ್ನು ತೆರೆದು ಇಡೀ ರಾಷ್ಟ್ರಕ್ಕೆ ಮಾದರಿಯಾದ ಹರೇಕಳ ಹಾಜಬ್ಬರವರನ್ನು ಗುರುದೇವೋಭವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಾನು ಆ ಸಂದರ್ಭದಲ್ಲಿ ಎದುರಿಸಿದ ಕಷ್ಟಗಳು ಹಾಗೂ ತನ್ನೂರಿನ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪಡುತ್ತಿದ್ದ ಕಷ್ಟವನ್ನು ನೋಡಲಾರದೆ ನಾನು ವಿದ್ಯಾ ಸಂಸ್ಥೆಯನ್ನು ತೆರೆದಿರುವುದಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ತನಗೆ ಸಹಾಯ ಹಸ್ತವನ್ನು ಚಾಚಿದ ಎಲ್ಲರನ್ನು ಸ್ಮರಿಸಿಕೊಂಡರು. ಹಾಗೂ ಇಂದು ಇಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಿಂದ ಗೌರವಿಸಲ್ಪಡುತ್ತಿರುವುದು ನನ್ನ ಸೌಭಾಗ್ಯವೆಂದು ತಿಳಿಸಿದರು.
ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದ ಕ್ರಿಯೇಟಿವ್ ಸಂಸ್ಥೆಯ ಸಹಸಂಸ್ಥಾಪಕರಾದ ಅಶ್ವತ್ ಎಸ್. ಎಲ್. ರವರು ಶಿಕ್ಷಣಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಹರೇಕಳ ಹಾಜಬ್ಬರವರನ್ನು ಶಿಕ್ಷಕರ ದಿನಾಚರಣೆ ಈ ಸುಸಂದರ್ಭದಲ್ಲಿ ಗೌರವಿಸುತ್ತಿರುವುದು ಅತ್ಯಂತ ಸಂತೋಷದ ವಿಷಯ. ಗುರು ಎಂಬುದು ಕೇವಲ ವಿದ್ಯೆ ಕಲಿಸಿದ ಶಿಕ್ಷಕ ಮಾತ್ರವಲ್ಲ,ಜೀವನಕ್ಕೆ ಸನ್ಮಾರ್ಗವನ್ನು ತೋರಿ ಕೈ ಹಿಡಿದು ನಡೆಸಿದ ಪ್ರತಿಯೊಬ್ಬ ವ್ಯಕ್ತಿಯು ಗುರು ಸ್ಥಾನದಲ್ಲಿ ನಿಲ್ಲಲು ಅರ್ಹ ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಅಕ್ಷರ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರವರಿಗೆ ಕ್ರಿಯೇಟಿವ್ ಗುರುದೇವೋಭವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.ಸಂಸ್ಥೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ ಉಪನ್ಯಾಸಕರುಗಳಾದ ವಿಶ್ವನಾಥ ಮಠ (ರಸಾಯನಶಾಸ್ತ್ರ), ಅಭಿಷೇಕ್ ಕುಮಾರ್ (ಭೌತಶಾಸ್ತ್ರ), ಶರತ್ ರೈ (ಭೌತಶಾಸ್ತ್ರ), ಆಶಾ ಕೆ.ಎಲ್. (ಜೀವಶಾಸ್ತ್ರ) ಇವರುಗಳಿಗೆ ಕ್ರಿಯೇಟಿವ್ ಗುರುದೇವೋಭವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಸಂಸ್ಥೆಯ ಎಲ್ಲ ಉಪನ್ಯಾಸಕ ವರ್ಗದವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಸಹ ಸಂಸ್ಥಾಪಕರು ಹಾಗೂ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ರವರು, ಹಾಜಬ್ಬ ರವರ ಸಾಧನೆ ಅವರ ಶಿಕ್ಷಣ ಕ್ಷೇತ್ರದ ಬಗೆಗಿನ ಒಲವು ಇಡೀ ರಾಷ್ಟ್ರ ಮೆಚ್ಚುವಂಥದ್ದು. ಬದುಕಿನ ಮಾರ್ಗ ತೋರಿಸಿದ ದಾರ್ಶನಿಕನಿಗೆ ಸನ್ಮಾನಿಸಿರುವುದು ಈ ಕಾರ್ಯಕ್ರಮಕ್ಕೆ ಅತ್ಯಂತ ಮೆರುಗನ್ನು ತಂದಿದೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಸಂಸ್ಥೆಯ ಸಹಸಂಸ್ಥಾಪಕರುಗಳಾದ ಡಾ. ಗಣನಾಥ ಬಿ.ಶೆಟ್ಟಿ, ಆದರ್ಶ ಎಂ. ಕೆ., ವಿಮಲ್ ರಾಜ್,ಗಣಪತಿ ಭಟ್ ಕೆ.ಎಸ್. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಮ್ಮ ಚಾರಿಟೇಬಲ್ ಟ್ರಸ್ಟ್ ಗೆ ಕ್ರಿಯೇಟಿವ್ ಸಂಸ್ಥೆಯ ವತಿಯಿಂದ ಒಂದು ಲಕ್ಷ ರೂಪಾಯಿಯ ಸಹಾಯಧನವನ್ನು ನೀಡಲಾಯಿತು.
ಕಾರ್ಯಕ್ರಮವನ್ನು ಜೀವಶಾಸ್ತ್ರ ಉಪನ್ಯಾಸಕರಾದ ಲೋಹಿತ್ ಕೆ. ನಡೆಸಿಕೊಟ್ಟರು.

























