
ಕಾರ್ಕಳ:ಮಗಳನ್ನೇ ಹತ್ಯೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ್ದ ತಾಯಿ ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಬಯಲು
ಕಾರ್ಕಳ: ಹೆತ್ತ ತಾಯಿಯೇ ಮಗಳ ಪ್ರಾಣ ಕಿತ್ತ ಭೀಕರ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದಲ್ಲಿ ನಡೆದಿದೆ. ಶಿಫನಾಜ್ (17) ಕೊಲೆಯಾದ ಯುವತಿ.
ಸೆ. 20ರಂದು ಸ್ನೇಹಿತನನ್ನು ಭೇಟಿಯಾಗಲು ಉಡುಪಿ ಹೋಗುವುದಾಗಿ ಶಿಫನಾಜ್ ತಾಯಿಗೆ ತಿಳಿಸಿದ್ದಳು. ಇದಕ್ಕೆ ತಾಯಿ ಗುಲ್ಜಾರ್ ಬಾನು (45) ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಾಯಿ–ಮಗಳ ನಡುವೆ ಜಗಳ ಉಂಟಾಯಿತು. ಜಗಳ ತೀವ್ರಗೊಂಡ ಪರಿಣಾಮ ಕೋಪಭರಿತ ತಾಯಿ ಮಗಳ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಹತ್ಯೆಗೈದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಆರಂಭದಲ್ಲಿ ಈ ಪ್ರಕರಣವನ್ನು ಆತ್ಮಹತ್ಯೆ ಎಂದು ದಾಖಲಿಸಲಾಗಿತ್ತು. ಶಿಫನಾಜ್ ತಂದೆ ಶೇಖ್ ಮುಸ್ತಾಫ್ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಾವಿನ ನಿಜಾಂಶ ಬಹಿರಂಗವಾಗಿದೆ. ಶಿಫನಾಜ್ ಆತ್ಮಹತ್ಯೆ ಮಾಡಿಕೊಳ್ಳದೆ, ಉಸಿರುಗಟ್ಟಿಸಿ ಕೊಲೆಗೀಡಾಗಿರುವುದು ದೃಢಪಟ್ಟಿದೆ.
ಪೊಲೀಸರು ಗುಲ್ಜಾರ್ ಬಾನು ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಒಪ್ಪಿಕೊಂಡಿದ್ದಾರೆ. ಅ. 2ರಂದು ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಳಿಕ ಮಂಗಳೂರು ಜೈಲಿನಲ್ಲಿರಿಸಲಾಗಿದೆ. ಕಾರ್ಕಳ ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.












