
ಅ. 05 ರಂದು ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರು ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಕಾರ್ಕಳದ ಆಸುಪಾಸಿನಲ್ಲಿರುವ ಅನೇಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿದರು. ಪ್ಲಾಸ್ಟಿಕ್ ಕಸದ ಸಂಗ್ರಹ, ಕಸ ವಿಂಗಡಣೆ ಹಾಗೂ ಪರಿಸರ ಶುದ್ಧೀಕರಣದ ಜೊತೆಗೆ ಸ್ಥಳೀಯ ಜನರಿಗೆ ಸ್ವಚ್ಛತೆಯ ಮಹತ್ವವನ್ನು ಬೋಧಿಸುವ ಜಾಗೃತಿ ಅಭಿಯಾನವೂ ನಡೆಯಿತು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಸ್ವಚ್ಛ ಕಾರ್ಕಳ ನಗರದ ಸ್ವಚ್ಛತಾ ರಾಯಭಾರಿಯಾಗಿರುವ ಫೆಲಿಕ್ಸ್ ಜೋಸೆಫ್ ವಾಜ್ ರವರು ಶುಭ ಹಾರೈಸಿದರು. ಕಾರ್ಕಳ ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ‘ ಸ್ವಚ್ಛತೆ ಎನ್ನುವುದು ಕೇವಲ ದೈಹಿಕ ಶುದ್ಧತೆಗೆ ಸೀಮಿತವಲ್ಲ. ನಮ್ಮ ಮನಸ್ಸಿನ, ಸಮಾಜದ ಮತ್ತು ಸಂಸ್ಕೃತಿಯ ಶುದ್ಧತೆಯ ಪ್ರತೀಕವೂ ಹೌದು. ಯುವಕರು ಇಂತಹ ಚಟುವಟಿಕೆಗಳ ಮೂಲಕ ಸಾಮಾಜಿಕ ಬದಲಾವಣೆಗೆ ಪ್ರೇರಣೆಯಾಗುತ್ತಾರೆ ‘ ಎಂದು ಹೇಳಿದರು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಡಾ. ಬಿ. ಗಣನಾಥ ಶೆಟ್ಟಿ ಮಾತನಾಡಿ ‘ಸ್ವಚ್ಛತೆಯು ಕೇವಲ ಕಾರ್ಯವಲ್ಲ. ಅದು ಜೀವನಶೈಲಿ ಆಗಬೇಕು. ಯುವಕರು ಇಂತಹ ಸಾಮಾಜಿಕ ಜವಾಬ್ದಾರಿಗಳಲ್ಲಿ ತೊಡಗಿದಾಗ ಸಮಾಜದ ಬೆಳವಣಿಗೆ ಖಚಿತ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಲ್ಲಿ ಓರ್ವರಾದ ಅಶ್ವತ್ ಎಸ್.ಎಲ್, ಎನ್.ಎಸ್.ಎಸ್ ಶಿಬಿರಾಧಿಕಾರಿ ಉಮೇಶ್, ಉಪನ್ಯಾಸಕ – ಉಪನ್ಯಾಸಕೇತರ ವರ್ಗದವರು, ಸುಮಾರು 150ಕ್ಕಿಂತಲೂ ಹೆಚ್ಚು ವಿದ್ಯಾರ್ಥಿ – ವಿದ್ಯಾರ್ಥಿನಿಯರು ಪಾಲ್ಗೊಂಡು, ಸಾರ್ವಜನಿಕರಲ್ಲಿ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಮೂಡಿಸಿದರು. ಈ ಸ್ವಚ್ಛತಾ ಆಂದೋಲನಕ್ಕೆ ಕಾರ್ಕಳ ಪುರಸಭೆಯ ಸಂಪೂರ್ಣ ಸಹಕಾರ ದೊರಕಿತು.
ಸಭಾ ಕಾರ್ಯಕ್ರಮವನ್ನು ಜೀವಶಾಸ್ತ್ರ ಉಪನ್ಯಾಸಕರಾದ ಲೋಹಿತ್ ಎಸ್.ಕೆ ರವರು ನಿರೂಪಿಸಿ ವಂದಿಸಿದರು. ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಭಾಗವಹಿಸಿದ ಎಲ್ಲರನ್ನು ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿದೆ.














