
ನಿರಂತರ ತನ್ನದೇ ಆದ ವಿಶೇಷ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಪರಿಸರದಾದ್ಯಂತ ಮನೆ ಮಾತಾಗಿರುವ ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ವತಿಯಿಂದ ಸಂಘದ 26ನೇ ವರ್ಷಾಚರಣೆ ಅಂಗವಾಗಿ ಸ್ವಾತಂತ್ಯ ಹೋರಾಟಗಾರರು, ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲರ 150ನೇ ಜನ್ಮ ದಿನಾಚರಣೆ ಹಾಗೂ 70ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಅಬ್ಬನಡ್ಕ ರಸ್ತೆಯಲ್ಲಿ ಹಲವಾರು ಗುಂಡಿಗಳು ಬಿದ್ದು ವಾಹನ ಸವಾರರಿಗೆ ಸಂಚಾರಿಸಲು ಬಹಳಷ್ಟು ಕಷ್ಟವಾಗುತ್ತಿದ್ದನ್ನು ಮನಗಂಡ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ನ ಸದಸ್ಯರೆಲ್ಲರೂ ಕಾಯಕವೇ ಕೈಲಾಸವೆಂಬಂತೆ ಎಲ್ಲರೂ ಒಟ್ಟು ಸೇರಿ ರಸ್ತೆಯಲ್ಲಿರುವ ಗುಂಡಿಗಳಿಗೆ ಮಣ್ಣು ಹಾಕುವ ಕೆಲಸ ಕಾರ್ಯವನ್ನು ನಡೆಸಿದರು.
ಮೂರು ಗ್ರಾಮಕ್ಕೆ ಸಂಪರ್ಕದ ಕೊಂಡಿಯಾಗಿರುವ ಅಬ್ಬನಡ್ಕ ರಸ್ತೆ
ಕೆದಿಂಜೆಯಿಂದ ಬೋಳ ಹಾಗೂ ಇತಿಹಾಸ ಪ್ರಸಿದ್ಧ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಂಪರ್ಕ ಪಡೆಯುವ ಅಬ್ಬನಡ್ಕ ರಸ್ತೆ ಇತ್ತೀಚೆಗೆ ತೀವ್ರ ಹದ್ದಗೆಟ್ಟಿದ್ದು, ಹೊಂಡಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಮಸ್ಯೆ ಸೃಷ್ಟಿಯಾಗಿದೆ. ಅಬ್ಬನಡ್ಕ ರಸ್ತೆ ನಂದಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ್ದು, ಹೊಂಡಗುಂಡಿಗಳ ಕೂಪದಿಂದಾಗಿ ವಾಹನದಿಂದ ಬಿದ್ದು ಅಪಘಾತಗಳು ನಡೆಯುತ್ತಲೇ ಇದೆ. ಮಳೆಗಾಲ ಸಂದರ್ಭದಲ್ಲಿ ಹೊಂಡಗಳಲ್ಲಿ ನೀರು ತುಂಬಿರುವುದರಿಂದ ರಸ್ತೆಯನ್ನು ಗುರುತಿಸಲು ವಾಹನ ಚಾಲಕರು ಹರಸಾಹಸ ಪಡವಂತಾಗಿದೆ.
ಈ ರಸ್ತೆಯಿಂದ ನಾಲ್ಕು ಗ್ರಾಮಕ್ಕೆ ಅನೂಕೂಲ
ಅಬ್ಬನಡ್ಕ ರಸ್ತೆಗೆ ಮರುಡಾಮರೀಕರಣವಾದರೆ ನಂದಳಿಕೆ, ಕೆದಿಂಜೆ, ಬೆಳ್ಮಣ್ಣು, ಬೋಳ ಹೀಗೆ ನಾಲ್ಕು ಗ್ರಾಮದ ಗಡಿ ಭಾಗದಲ್ಲಿ ಹಾದು ಹೋಗುತ್ತಿದ್ದು, ನಾಲ್ಕು ಗ್ರಾಮದ ಗ್ರಾಮಸ್ಥರಿಗೆ ತುಂಬಾ ಅನುಕೂಲಕರವಾಗಲಿದೆ. ಆದರೆ ಹೊಂಡ ಗುಂಡಿಗಳೇ ಅಧಿಕವಾಗಿರುವ ಈ ರಸ್ತೆಯಲ್ಲಿ ಸಂಚರಿಸಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದು, ಅಪಘಾತ, ವಾಹನ ಸ್ಕೀಡ್ ಆಗುವ ಕುರಿತು ಭೀತಿ ಇದೆ.
ಹಲವು ಪ್ರಸಿದ್ಧ ದೇವಳಕ್ಕೆ ಹೋಗುವ ಪ್ರಮುಖ ರಸ್ತೆ
ಕೆದಿಂಜೆ ಮಂಜರಪಲ್ಕೆ ಮೂಲಕ ಇತಿಹಾಸ ಪ್ರಸಿದ್ಧ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮುಂಡ್ಕೂರು ದೇವಸ್ಥಾನ, ಕಟೀಲು ದೇವಸ್ಥಾನ, ಕಜೆ ಮಾರಿಗುಡಿ, ಬೋಳ ಶ್ರೀ ರುದ್ರ ಸೋಮನಾಥೇಶ್ವರ ದೇವಾಲಯ, ಬೋಳ ವೀರ ಮಾರುತಿ ದೇವಸ್ಥಾನ, ಕೊಡ್ಯಡ್ಕ, ಕಡಂದಲೆ, ಸಚ್ಚೇರಿಪೇಟೆ, ಬೋಳ ಜೈನ ಬಸದಿ, ಬೋಳ ಡೋನ್ ಬೋಸ್ಕೋ ಚರ್ಚ್, ಬಜಪೆ ವಿಮಾನ ನಿಲ್ದಾಣಕ್ಕೂ ಪ್ರಮುಖ ಸಂಪರ್ಕ ರಸೆ ಇದಾಗಿದೆ. ಸಣ್ಣಪುಟ್ಟ ವಾಹನಗಳಲ್ಲಿ ಸಂಚರಿಸುವವರಿಗೆ ಈ ರಸ್ತೆ ನರಕಯಾತನೆ ನೀಡುತ್ತಿದೆ. ಹೊಂಡಗಳನ್ನು ಮುಚ್ಚಿ ರಸ್ತೆ ದುರಸ್ಥಿ ಮಾಡಿಕೊಡುವಂತೆ ಜನಪ್ರತಿನಿಧಿಗಳಲ್ಲಿ ಹಲವು ಬಾರಿ ಗ್ರಾಮಸ್ಥರು ಮನವಿ ಮಾಡಿಕೊಂಡರೂ ಈವರೆಗೆ ಪ್ರತಿಕ್ರಿಯೆ ಶೂನ್ಯ.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ
ಈ ಮಾರ್ಗದಲ್ಲಿ ಸರಕಾರಿ ಹಾಗೂ ಖಾಸಗಿ ಬಸ್ ಸೌಲಭ್ಯ ಇಲ್ಲದಿರುವುದರಿಂದ ಸ್ಥಳೀಯ ಗ್ರಾಮಗಳ ವಿದ್ಯಾರ್ಥಿಗಳು ಅನಿವಾರ್ಯವಾಗಿ ನಡೆದುಕೊಂಡೇ ಶಾಲಾ, ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಈ ಸಂದರ್ಭದಲ್ಲಿ ವಾಹನ ಸಂಚಾರದಿಂದ ಹೊಂಡಗಳಲ್ಲಿರುವ ಕೆಸರು ವಿದ್ಯಾರ್ಥಿಗಳ ಮೇಲೆ ಸಿಡಿಯುತ್ತಿದೆ. ವಿದ್ಯಾರ್ಥಿಗಳೂ ಈ ಕುರಿತು ತೀವ್ರ ಅಸಮಾಧಾನ ವ್ಯಕ್ರಪಡಿಸುತ್ತಿದ್ದಾರೆ.
ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸದಸ್ಯರಿಂದಲೇ ಶ್ರಮದಾನ ಗ್ರಾಮಸ್ಥರಿಂದ ಮೆಚ್ಚುಗೆ
ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ (ರಿ.)ನ ಅಧ್ಯಕ್ಷ ಸುರೇಶ್ ಅಬ್ಬನಡ್ಕ ನೇತೃತ್ವದಲ್ಲಿ ನಡೆದ ಶ್ರಮದಾನ ಕಾರ್ಯಕ್ರಮದಲ್ಲಿ ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ನಿಕಟ ಪೂರ್ವಾಧ್ಯಕ್ಷರಾದ ದಿನೇಶ್ ಪೂಜಾರಿ ಬೀರೊಟ್ಟು, ಕಾರ್ಯದರ್ಶಿ ಸತೀಶ್ ಅಬ್ಬನಡ್ಕ, ಸದಸ್ಯರಾದ ಪದ್ಮಶ್ರೀ ಪೂಜಾರಿ, ಹರೀಶ್ ಪೂಜಾರಿ, ಪ್ರದೀಪ್ ಸುವರ್ಣ, ಯೋಗೀಶ್ ಆಚಾರ್ಯ, ಕಿರಣ್ ಬೋಳ, ಸುಭಾಸ್ ಕೆಮ್ಮಣ್ಣು, ಶ್ರೀಕಾಂತ್ ಆಚಾರ್ಯ, ಅಭೀಷೇಕ್ ಕುಲಾಲ್, ಅನ್ನಪೂರ್ಣ ಕಾಮತ್, ಅವಿನಾಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಅಬ್ಬನಡ್ಕ ಮಾರ್ಗದಲ್ಲಿ ಹೊಂಡಗಳದ್ದೇ ಸಂಖ್ಯೆ ಹೆಚ್ಚಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಅಬ್ಬನಡ್ಕ ರಸ್ತೆ ದುರಸ್ಥಿ ಬಗ್ಗೆ ಮನವಿ ನೀಡುತಿದ್ದರೂ ಅಧಿಕಾರಿಗಳು ಪೊಳ್ಳು ಭರವಸೆ ನೀಡುತಿದ್ದಾರೆಯೇ ಹೊರತು ದುರಸ್ಥಿಗೊಳಿಸುವತ್ತ ಆಸಕ್ತಿ ವಹಿಸುತಿಲ್ಲ. ದುರಸ್ಥಿ ಕಾರ್ಯ ಶೀಘ್ರವೇ ಆರಂಭಿಸದಿದ್ದರೆ ಗ್ರಾಮಸ್ಥರ ಜೊತೆಗೆ ಹೋರಾಟ ಮಾಡುತ್ತೇವೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಲೇ ಇರುತ್ತವೆ. ರಸ್ತೆಗಳ ಹೊಂಡ ಮುಚ್ಚಿ ಮರುಡಾಮರೀಕರಣವನ್ನು ಅಧಿಕಾರಿಗಳು ಕೂಡಲೇ ಮಾಡುವಲ್ಲಿ ಮುತುವರ್ಜಿ ವಹಿಸಬೇಕಿದೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಸುರೇಶ ಅಬ್ಬನಡ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













