ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ನಡುವೆ ಜೈಲಿನಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಭೇಟಿ ಮಾಡಲು ಅವಕಾಶ ಕೋರಿ ದರ್ಶನ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ದರ್ಶನ್ ಕೋರಿಕೆಗೆ ನ್ಯಾಯಾಲಯ ಅಸ್ತು ಎಂದಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ಗೆ ಕೋರ್ಟ್ ಇಂದು ಗುಡ್ ನ್ಯೂಸ್ ಕೊಟ್ಟಿದೆ. ಕುಟುಂಬ ಸದಸ್ಯರ ಭೇಟಿ ಕೋರಿ ಕನ್ನಡ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನ ಕೋರ್ಟ್ ಪುರಸ್ಕರಿಸಿದೆ. ದರ್ಶನ್ ಪರವಾಗಿ ಕೋರ್ಟ್ ಆದೇಶ ನೀಡಿದೆ. ಜೈಲಿನ ಒಳಗೆ ಕುಟುಂಬ ಸದಸ್ಯರ ಸಂದರ್ಶನಕ್ಕೆ ಕೋರ್ಟ್ ಅಸ್ತು ಎಂದಿದೆ.
ಜೈಲಿನ ಒಳಗೆ ಕುಟುಂಬಸ್ಥರನ್ನ ಭೇಟಿ ಮಾಡಲು ಅವಕಾಶ ಕೋರಿ ದರ್ಶನ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಕಾರಾಗೃಹ ಇಲಾಖೆ ಅಧಿನಿಯಮ 570 ಮತ್ತು 574 ಅಡಿಯಲ್ಲಿ ಒಳ ಸಂದರ್ಶನಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ 57ನೇ ಸೆಷನ್ಸ್ ಕೋರ್ಟ್ ಇಂದು ದರ್ಶನ್ ಪರವಾಗಿ ಆದೇಶ ನೀಡಿದೆ.
ಜೈಲಿನ ಕೈಪಿಡಿಗೆ ಅನುಗುಣವಾಗಿ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಒಳ ಸಂದರ್ಶನಕ್ಕೆ ಅವಕಾಶ ನೀಡಿ ಜೈಲಿನ ಸೂಪರಿಂಟೆಂಡೆಂಟ್ಗೆ ಅಧಿಕಾರ ನೀಡಿ ಕೋರ್ಟ್ ಆದೇಶಿಸಿದೆ. ಜೈಲಿನ ಸೂಪರಿಂಟೆಂಡೆಂಟ್ ಒಪ್ಪಿಗೆ ನೀಡಿದರೆ, ಒಳಸಂದರ್ಶನಕ್ಕೆ ಅವಕಾಶ ಇದೆ, ಒಂದ್ವೇಳೆ ಒಪ್ಪದಿದ್ದರೆ ಅವಕಾಶ ಇಲ್ಲ ಎಂದು ಆದೇಶದಲ್ಲಿ ಕೋರ್ಟ್ ಉಲ್ಲೇಖಿಸಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಆರೋಪಿಗಳ ಮೊಬೈಲ್ ವಶಕ್ಕೆ ಪಡೆಯುವಾಗ ಪೊಲೀಸರಿಂದ ಕರ್ತವ್ಯ ಲೋಪ ಆರೋಪ ಕೇಳಿಬಂದಿತ್ತು. ಆರೋಪಿಗಳ ಮೊಬೈಲ್ಗಳನ್ನು ವಶಕ್ಕೆ ಪಡೆಯುವಾಗ ಪೊಲೀಸರು ಫೋಟೋ ತೆಗೆದಿದ್ದರು. ಫೋಟೋದಲ್ಲಿರುವ ಟೈಲ್ಸ್ ಬಣ್ಣವನ್ನ ಉಲ್ಲೇಖಿಸಿ, ತನಿಖಾಧಿಕಾರಿಗಳ ವಿರುದ್ಧ ಸುಳ್ಳು ಸಾಕ್ಷ್ಯ ಸೃಷ್ಟಿ, ಸಾಕ್ಷ್ಯ ತಿದ್ದಿದ ಆರೋಪಗಳನ್ನ ಪವನ್ ಪರ ವಕೀಲರು ಮಾಡಿದ್ದರು. ತನಿಖಾಧಿಕಾರಿಗಳಲ್ಲಿ ಒಬ್ಬರಾದ ಎಸಿಪಿ ಚಂದನ್ ಅವರನ್ನ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯನ್ನಾಗಿ ಪರಿಗಣಿಸಬೇಕು ಎಂದು ಆರೋಪಿ ಪವನ್ ಪರ ವಕೀಲರು ವಾದಿಸಿದ್ದರು. ಇದೀಗ ಪವನ್ ಪರ ವಕೀಲರ ಅರ್ಜಿ ಕುರಿತು ನ್ಯಾಯಾಲಯ ಆದೇಶ ನೀಡಿದೆ. ಅರ್ಜಿಯನ್ನ ನ್ಯಾಯಾಲಯ ವಜಾ ಮಾಡಿದೆ. ಜೊತೆಗೆ, ನ್ಯಾಯಾಲಯದ ಸಮಯ ಹಾಳು ಮಾಡಿದ್ದಕ್ಕೆ ಪವನ್ ಪರ ವಕೀಲರಿಗೆ ಕೋರ್ಟ್ 5 ಸಾವಿರ ರೂಪಾಯಿ ದಂಡ ಸಹ ವಿಧಿಸಿದೆ. ಈ ಹಣವನ್ನು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೀಡಲು ಸೂಚನೆ ನೀಡಿದೆ.



















