ಕಳೆದ ಒಂದು ವರ್ಷದಿಂದ ಹೆರಿಗೆ ತಜ್ಞರಿಲ್ಲದೆ ಸೊರಗಿದ್ದ ಕಾರ್ಕಳ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ವಿಭಾಗಕ್ಕೆ ಕೊನೆಗೂ ಮರುಜೀವ ಬಂದಿದೆ. ಆಸ್ಪತ್ರೆಯ ಅತ್ಯಂತ ಪ್ರಮುಖ ಅಗತ್ಯತೆಯಾಗಿದ್ದ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆಯಾಗಿ ಡಾ। ಸಾಹಿತಿ ಅವರನ್ನು ಪ್ರಸ್ತುತ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ। ಸಂದೀಪ್ ಕುಡ್ವ ತಿಳಿಸಿದ್ದಾರೆ.
ತಾಲೂಕಿನ ಮಾಳ, ಈದು,ಬಜಗೋಳಿ, ಅಜೆಕಾರು ಸೇರಿದಂತೆ 50ಕ್ಕೂ ಹೆಚ್ಚು ಹಳ್ಳಿಗಳ ಗೇರುಬೀಜ ಕಾರ್ಖಾನೆ ಕಾರ್ಮಿಕರು, ದಿನಗೂಲಿ ನೌಕರರು ಹಾಗೂ ಬಡ ಕುಟುಂಬಗಳು ಹೆರಿಗೆಯಂತಹ ತುರ್ತು ಚಿಕಿತ್ಸೆಗಾಗಿ ಇದೇ ಸರಕಾರಿ ಆಸ್ಪತ್ರೆಯನ್ನು ನೆಚ್ಚಿಕೊಂಡಿದ್ದವು.
ಆದರೆ, ವೈದ್ಯರ ಕೊರತೆಯಿಂದಾಗಿ ಗರ್ಭಿಣಿಯರು ಅನಿವಾರ್ಯವಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಅಥವಾ ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚಕ್ಕೆ ಹೆದರಿ ಪರದಾಡುವಂತಾಗಿತ್ತು. ಸದ್ಯ ವೈದ್ಯರ ನೇಮಕಾತಿಯಾಗಿದ್ದು, `ಗ್ರಾಮೀಣ ಭಾಗದ ಮಹಿಳೆಯರಿಗೆ ತಾಲೂಕಿನಲ್ಲೇ ಉಚಿತ ಹಾಗೂ ಗುಣಮಟ್ಟದ ಪ್ರಸೂತಿ ಚಿಕಿತ್ಸೆ ಸಿಗುವಂತಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.


















