ಗ್ರಾಮೀಣ ಪ್ರದೇಶವಾದ ಮುನಿಯಾಲು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕಲಿತು ಸಂದರ್ಶನ ಎದುರಿಸಿ ಪದವಿ ಮುಗಿಯುವಾಗಲೇ ಕೆಲಸ ಪಡೆದು ಹೋಗುತ್ತಿರುವುದು ನಮಗೆ ಅತ್ಯಂತ ಹೆಮ್ಮೆ ಎನಿಸುತ್ತಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಕಲಿಕೆಯ ವಾತಾವರಣದ ಜೊತೆಗೆ ಹಲವಾರು ಅತ್ಯುತ್ತಮ ಅವಕಾಶಗಳನ್ನು ನೀಡುತ್ತಿದ್ದೇವೆ ಎಂದು ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸುಧಾಕರ್ ಕೆ.ಜಿ ಕೆಲಸಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಣಿಜ್ಯಶಾಸ್ತ್ರ ವಿಭಾಗ ಮತ್ತು ಉದ್ಯೋಗ ಕೋಶ ಸಮಿತಿಯಿಂದ ‘ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿ’ ಬೆಂಗಳೂರು. ಇವರ ಸಹಯೋಗದೊಂದಿಗೆ ಕ್ಯಾಂಪಸ್ ಸಂದರ್ಶನ ನಡೆಸಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಕ್ರವಾರ ನೇಮಕಾತಿ ಪತ್ರ ವಿತರಿಸಲಾಯಿತು. ವಾಣಿಜ್ಯಶಾಸ್ತ್ರ ವಿಭಾಗ ಮತ್ತು ಮಾನವಿಕ ವಿಭಾಗದಿಂದ ಒಟ್ಟು 29 ವಿದ್ಯಾರ್ಥಿಗಳು ಸಂದರ್ಶನ ಎದುರಿಸಿ ಕೆಲಸಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳು ಪದವಿ ಪೂರ್ಣಗೊಂಡ ನಂತರ ಕೆಲಸಕ್ಕೆ ಹಾಜರಾಗಬಹುದೆಂದು ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ವಿಕಾಸ್ ತಿಳಿಸಿದ್ದಾರೆ. ಉದ್ಯೋಗದ ಸಂದರ್ಶನ ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಿದ ಪ್ಲೇಸ್ಮೆಂಟ್ ಅಧಿಕಾರಿಯಾದ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಆನಂದ್ ಕುಮಾರ್.ಜಿ ಅವರನ್ನು ಅಭಿನಂದಿಸಲಾಯಿತು.





















