ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಜೀವ ವಿಮೆಯ ವಿಧಗಳು ಮತ್ತು ಅವುಗಳ ಅಗತ್ಯತೆಯ ಕುರಿತು ಉಪನ್ಯಾಸ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ವಿಭಾಗದ ಅಭಿವೃದ್ಧಿ ಅಧಿಕಾರಿ ಅಶ್ವಿತ್ ನಾಯ್ಕ್ ಅವರು ಸಂಪನ್ಮೂಲ ಅಧಿಕಾರಿಗಳಾಗಿ ಮಾತನಾಡಿ “ಆಧುನಿಕ ಕಾಲಘಟ್ಟದಲ್ಲಿ ನೆಮ್ಮದಿಯ ಜೀವನಕ್ಕೆ ಜೀವವಿಮೆಗಳು ಅಗತ್ಯವಾಗಿದ್ದು, ವಿಮೆ ಮಾಡಿಸುವ ಮೊದಲು ಅದರ ನಿಯಮ ನಿಬಂಧನೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ವಿಮಾಕ್ಷೇತ್ರದಲ್ಲಿ ಪೂರ್ಣಕಾಲಿಕ, ಅರೆಕಾಲಿಕ ಮುಂತಾದ ಅನೇಕ ಉದ್ಯೋಗಾವಕಾಶಗಳಿದ್ದು, ವಿದ್ಯಾರ್ಥಿಗಳು ಉದ್ಯೋಗ ಕ್ಷೇತ್ರ ಪ್ರವೇಶಿಸುವಾಗ ಇವುಗಳನ್ನು ಬಳಸಿಕೊಳ್ಳಬೆಕು” ಎಂದು ಹೇಳಿ ವಿಮಾ ಕ್ಷೇತ್ರದ ಸಂಪೂರ್ಣ ಮಾಹಿತಿ ನೀಡಿದರು.
ಸಂಸ್ಥೆಯ ಉಪಪ್ರಾಚಾರ್ಯ ಡಾ.ಪ್ರಕಾಶ್ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಶ್ರೇಯಾ ಸ್ವಾಗತಿಸಿ ಲೆರಿಕ್ ವಂದಿಸಿದರು. ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಕಿಂಡ್ರೆಲ್ ಮತ್ತು ಮೈಕ್ರೋಸಾಫ್ಟ್ ಸಂಸ್ಥೆಯ ಸಹಯೋಗದಲ್ಲಿ ಸೆ.23 ಹಾಗೂ 24 ರಂದು ಸತತ 24 ಗಂಟೆಗಳ ಹ್ಯಾಕಥಾನ್ ‘ಎಐನ್ನೋವೇಶನ್ II 2025’ ನ್ನು ಹಮ್ಮಿಕೊಳ್ಳಲಾಯಿತು.
ಸಾಮಾಜಿಕ ಅಗತ್ಯಗಳಿಗೆ ಪರಿಣಾಮಕಾರಿ, ತಂತ್ರಜ್ಞಾನ-ಚಾಲಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಈ ಕಾರ್ಯಕ್ರಮವು ವಿವಿಧ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿತು.
ಸಮಾರೋಪ ಸಮಾರಂಭದಲ್ಲಿ ಕಿಂಡ್ರೆಲ್ ಸಂಸ್ಥೆಯ ಗ್ಲೋಬಲ್ ಡೆಲಿವರಿ ಲೀಡರ್ಶಿಪ್ ನ ಹಿರಿಯ ಉಪಾಧ್ಯಕ್ಷ ಶಂಕರ ಶ್ರೀನಿವಾಸನ್ ಅತಿಥಿಗಳಾಗಿ ಭಾಗವಹಿಸಿ ‘ಇಂತಹ ಹ್ಯಾಕಥಾನ್ ಗಳು ಉತ್ತಮ ಐಡಿಯಾಗಳನ್ನು ಹೊರತರುವಲ್ಲಿ ಸಹಕಾರಿಯಾಗುತ್ತವೆ. ಈ ರೀತಿಯ ಸ್ಪರ್ಧೆಗಳಲ್ಲಿ ಹೊರಹೊಮ್ಮಿದ ಯೋಜನೆಗಳು ನಿತ್ಯಜೀವನದಲ್ಲಿ ಕಮರ್ಶಿಯಲೈಸ್ ಆಗುವ ಹಂತವನ್ನು ಕಾಣಬೇಕಾಗಿದೆ. ಈ ಐಡಿಯಾಗಳು ಕೇವಲ ಸ್ಪರ್ಧೆಗಷ್ಟೇ ಸೀಮಿತವಾಗಿರದೆ ಸಮಾಜಕ್ಕೆ ಪ್ರಯೋಜನಕಾರಿಯಾಗಬೇಕು’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಯ ಆಡಳಿತ ವಿಭಾಗದ ಪ್ರೊ-ಚಾನ್ಸಲರ್ ವಿಶಾಲ್ ಹೆಗ್ಡೆ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ‘ವಿದ್ಯಾರ್ಥಿಗಳು ವಿವಿಧ ಬಗೆಯ ಸಾಮಾಜಿಕ ಸಮಸ್ಯೆಗಳಿಗೆ ವಿನೂತನ ಚಿಂತನೆಯೊಂದಿಗೆ ಪರಿಹಾರ ಕಂಡುಕೊಳ್ಳಬೇಕು. ಇಂತಹ ಹ್ಯಾಕಥಾನ್ ಗಳು ವಿದ್ಯಾರ್ಥಿಗಳ ಆಲೋಚನಾಶಕ್ತಿಯನ್ನು ವೃದ್ದಿಸುತ್ತದೆ’ ಎಂದರು.
ವೇದಿಕೆಯಲ್ಲಿ ಕಿಂಡ್ರೆಲ್ ಸಂಸ್ಥೆಯ ಡೆಲಿವರಿ ಮ್ಯಾನೇಜ್ಮೆಂಟ್ ಮತ್ತು ಇಂಡಿಯಾ ಯೂನಿವರ್ಸಿಟಿ ಲೀಡರ್ ವಿಭಾಗದ ನಿರ್ದೇಶಕ ಡಾ. ರಾಜ್ ಮೋಹನ್ ಸಿ. ಮೈಕ್ರೋಸಾಫ್ಟ್ ಸಂಸ್ಥೆಯ ಡೇಟಾ ಮತ್ತು ಎಐ ಪ್ರೋಗ್ರಾಂ ಮುಖ್ಯಸ್ಥ ಸುಮಿತ್ ರಂಜನ್,ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಲುಂಕರ್ ಉಪಸ್ಥಿತರಿದ್ದು ವಿಜೇತರಿಗೆ ಅತಿಥಿಗಳೊಡಗೂಡಿ ಬಹುಮಾನಗಳನ್ನು ವಿತರಿಸಿದರು.
ಸೇಂಟ್ ಜೋಸೆಫ್ ಕಾಲೇಜಿನ ರಿಯನ್ ಜೇಡನ್ ವಾಲ್ಡರ್, ಸಲೋಮಿ ಡಿಸೌಜಾ, ಮ್ಯಾಕ್ ರಿಯಾನ್ ಡಿಸೋಜಾ ಮತ್ತು ಮಿಲ್ಟನ್ ಬ್ರಾಗ್ಸ್ ಅವರನ್ನು ಒಳಗೊಂಡ ನಲ್ ಪಾಯಿಂಟರ್ಸ್ ತಂಡವು ಪ್ರಥಮ ಸ್ಥಾನವನ್ನು ಗಳಿಸಿತು.
ಕೆನರಾ ಎಂಜಿನಿಯರಿಂಗ್ ಕಾಲೇಜಿನ ಅನನ್ಯಾ ಭಟ್, ಪ್ರತೀಕ್ ಪ್ರಕಾಶ್ ಕಿಣಿ, ಸುಜನ್ ಕುಮಾರ್ ಶೆಟ್ಟಿ ಮತ್ತು ಲಕ್ಷ್ಮೀಶ್ ಎಂ ಪ್ರಭು ಅವರನ್ನೊಳಗೊಂಡ ಬಯೋ ಇನ್ನೋವೇಟರ್ಸ್ ತಂಡವು ದ್ವಿತೀಯ ಸ್ಥಾನವನ್ನು ಪಡೆದರೆ, ಎಜೆ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಜ್ಞಾನೇಶ್, ಮಿಲನ್ ಸಿಐ, ಹಿಮಾಂಶು ಹೆಗ್ಡೆ ಮತ್ತು ಗೌರೇಶ್ ಜಿ ಪೈ ಅವರನ್ನೊಳಗೊಂಡ ಅನ್ಡಿಫೈನ್ಡ್ ತಂಡವು ಎರಡನೇ ರನ್ನರ್ಸ್ ಅಪ್ ಸ್ಥಾನವನ್ನು ತನ್ನದಾಗಿಸಿಕೊಂಡಿತು.
ಕಾರ್ಯಕ್ರಮವನ್ನು ಕೌನ್ಸೆಲಿಂಗ್, ವೆಲ್ಫೇರ್, ಟ್ರೈನಿಂಗ್ & ಪ್ಲೇಸ್ಮೆಂಟ್ ವಿಭಾಗದ ಮುಖ್ಯಸ್ಥ ಭರತ್ ಜಿ ಕುಮಾರ್, ಕೌನ್ಸಿಲರ್ ಅಂಕಿತ್ ಎಸ್ ಕುಮಾರ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ.ಶಶಾಂಕ್ ಶೆಟ್ಟಿ ಇವರು ಸಂಯೋಜಿಸಿದರು. ವಿದ್ಯಾರ್ಥಿ ನಂದನ್ ಪೈ ಅತಿಥಿಗಳನ್ನು ಸ್ವಾಗತಿಸಿದರು. ಇಲೆಕ್ಟ್ರಾನಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅನುಷಾ ಆರ್ ಶರತ್ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿನಿಯರು ತಮ್ಮ ಸಮಸ್ಯೆಗಳಿಗೆ ‘ಯುವ ಸ್ಪಂದನ’ ಕೇಂದ್ರ ಸಂಪರ್ಕಿಸಿ, ಸಹಾಯ ತೆಗೆದುಕೊಳ್ಳಿ, ಪರಿಹಾರ ಕಂಡುಕೊಳ್ಳಿ ಎಂದು ಉಡುಪಿ ಯುವ ಸ್ಪಂದನ ಕೇಂದ್ರದ ಯುವ ಪರಿವರ್ತಕೆ ಸುನೀತಾ ತಿಳಿಸಿದರು.
ಇವರು ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ಮಹಿಳಾ ಸಬಲೀಕರಣ ಘಟಕ ಉದ್ಘಾಟಿಸಿ ಮಾತನಾಡಿದರು. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಪೋಕ್ಸೋ ಕಾಯಿದೆ ಹೇಗೆ ಸಹಾಯ ಮಾಡುತ್ತದೆ ಎಂದು ಮಾಹಿತಿ ನೀಡಿದರು. ಶಿಕ್ಷಣ,ವ್ಯಕ್ತಿತ್ವ ಬೆಳವಣಿಗೆ, ಸಂಬಧಗಳು, ಸುರಕ್ಷತೆ, ಲಿಂಗ, ಲಿಂಗತ್ವ, ಲೈಂಗಿಕತೆ, ಆರೋಗ್ಯ ಮತ್ತು ಜೀವನ ಶೈಲಿಯ ಬಗ್ಗೆ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೋ| ಗೀತಾ. ಜಿ. ಅಧ್ಯಕ್ಷತೆಯನ್ನು ವಹಿಸಿದ್ದರು. ಘಟಕದ ನಿರ್ದೇಶಕಿ ವಿನುತಾ ಕಾಮತ್ ಅತಿಥಿಗಳನ್ನು ಪರಿಚಯಿಸಿ, ಎಲ್ಲರನ್ನು ಸ್ವಾಗತಿಸಿದರು.
ವಿದ್ಯಾರ್ಥಿ ನಾಯಕಿಯರಾದ ದಿಶಾ, ಸುಶ್ಮಿತಾ ಉಪಸ್ಥಿತರಿದ್ದರು. ಮಂಜುಳಾ ವಂದಿಸಿದರು. ಸಹನಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ “ಶಿಕ್ಷಣವೇ ಎಲ್ಲಾ” ಶೀರ್ಷಿಕೆಯಡಿಯಲ್ಲಿ ಕ್ರಿಯೇಟಿವ್ ಸ್ಫೂರ್ತಿಮಾತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪಶ್ಚಿಮ ಬಂಗಾಳದ ಶಿಕ್ಷಣತಜ್ಞ, ಆನಂದ್ ಶಿಕ್ಷಾನಿಕೇತನ ಸಂಸ್ಥೆಯ ಸ್ಥಾಪಕರಾದ ಬಾಬರ್ ಅಲಿ ಅವರು ಶೈಕ್ಷಣಿಕ ವಿಚಾರಗಳ ಕುರಿತು ಹೇಳುತ್ತಾ, ತಾನು ಬೆಳೆದು ಬಂದ ಹಾದಿಯ ರೋಚಕತೆಯನ್ನು ವಿವರಿಸಿ ಇತರರಿಗೂ ಸ್ಫೂರ್ತಿಯಾದರು. ಕಠಿಣ ಪರಿಶ್ರಮದ ಮೂಲಕ ಯಶಸ್ಸನ್ನು ಗಳಿಸಲು ಸಾಧ್ಯ. ಇಂದು ಶ್ರದ್ದೆಯಿಂದ ಓದಿ ಗುರಿ ಸಾಧಿಸಬೇಕು. ಮುಂದೊಂದು ದಿನ ಹಿಂದೆ ಕಳೆದ ದಿನಗಳನ್ನು ಅವಲೋಕಿಸಿದಾಗ, ಹೋರಾಟದ ದಿನಗಳು ಕೂಡ ನಿಮಗೆ ಅತ್ಯಂತ ಸುಂದರವಾಗಿ ಕಾಣುತ್ತವೆ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಮಾತನಾಡಿದರು.
ಸಹಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ರವರು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಬೋಧಕ – ಬೋಧಕೇತರ ವರ್ಗದವರು, ವಿದ್ಯಾರ್ಥಿ – ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಂಗ್ಲ ಭಾಷಾ ಉಪನ್ಯಾಸಕ ಯೋಗೀಶ್ ರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಯುವತಿಯೋರ್ವಳನ್ನು ಅತ್ಯಾಚಾರಕ್ಕೆ ಯತ್ನಿಸಿ ಆಕೆಯ ನಗ್ನ ಫೊಟೊಗಳನ್ನು ಬಳಸಿ, ನಿರಂತರ ಲೈಂಗಿಕ ದೌರ್ಜನ್ಯ ಎಸಗಿರುವ ಮತ್ತು ಕೊಲೆ ಬೆದರಿಕೆ ಹಾಕಿರುವ ಕುರಿತು ಹಿಂದೂ ಜಾಗರಣ ವೇದಿಕೆ ಮುಖಂಡ ಸಮಿತ್ ರಾಜ್ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇರುವೈಲು ಗ್ರಾಮದ ಯುವತಿಯೋರ್ವಳನ್ನು ಬೆದರಿಸಿ ಅತ್ಯಾಚಾರಕ್ಕೆ ಯತ್ನಿಸಿದಲ್ಲದೇ ಆಕೆಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯವೆಸಗಿ ಫೊಟೊ ಇರುವುದಾಗಿ ಬೆದರಿಸುತ್ತಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ.
ಸಂತ್ರಸ್ತೆಯ ಸಹೋದರನಿಗೆ 2 ವರ್ಷದ ಹಿಂದೆ ಬಜ್ಪೆಯಲ್ಲಿ ಅಪಘಾತವಾಗಿ ಮಂಗಳೂರಿನ ವಿನಯ್ ಆಸ್ಪತ್ರೆಯಲ್ಲಿದ್ದ ಸಂದರ್ಭ ಸಂತ್ರಸ್ತೆಯ ಮನೆಯ ಆರ್ಥಿಕ ಪರಿಸ್ಥಿತಿ ಮತ್ತು ಮನೆಯ ಪರಿಸ್ಥಿತಿಯನ್ನು ಆಸ್ಪತ್ರೆಗೆ ಬಂದಿದ್ದ ಓರ್ವ ವ್ಯಕ್ತಿ ಗಮನಿಸಿ ಮೂಡುಬಿದಿರೆ ಶಾಸಕ ಉಮನಾಥ ಕೋಟ್ಯಾನ್ ರವರ ಜೊತೆ ಒಳ್ಳೆಯ ಬಾಂಧವ್ಯ ಹೊಂದಿರುವ ಧರೆಗುಡ್ಡೆಯ ಸಮಿತ್ ರಾಜ್ ರವರ ಮೊಬೈಲ್ ನಂಬರ್ ಅನ್ನು ಕೊಟ್ಟು ಮಾತನಾಡಲು ಹೇಳಿದ್ದರು. ಅದರಂತೆ ಸಂತ್ರಸ್ತೆ ಆತನಿಗೆ ಫೋನ್ ಮಾಡಿ ಕಷ್ಟವನ್ನು ಹೇಳಿಕೊಂಡಿದ್ದಳು. ಬಳಿಕ ಮೂಡಬಿದ್ರೆ ಶಾಸಕರು ಆಸ್ಪತ್ರೆಗೆ ಬಂದು ಸಹಾಯ ಮಾಡಿದ್ದರು ಎಂದು ತಿಳಿದು ಬಂದಿದೆ.
ಆ ಬಳಿಕ ಆರೋಪಿ ಸಮಿತ್ ರಾಜ್ ಪದೇ ಪದೇ ಸಂತ್ರಸ್ತೆಯ ಮೊಬೈಲ್ ಫೋನ್ ಗೆ ಕರೆ ಮಾಡಿ ಒಳ್ಳೆಯ ರೀತಿಯಲ್ಲಿ ಮಾತನಾಡಿ ನಂತರ ಯುವತಿಯನ್ನು ಪ್ರೀತಿ ಮಾಡುತ್ತಿದ್ದು, ಮದುವೆಯಾಗುವುದಾಗಿ ಹೇಳಿದ್ದ. ಇದರಿಂದ ಹೆದರಿದ ಯುವತಿ ಮನೆಯಲ್ಲಿ ಮಾತನಾಡುವಂತೆ ತಿಳಿಸಿದ್ದಳು ಎಂದು ಹೇಳಲಾಗಿದೆ.
ಈ ಕುರಿತು ಆರೋಪಿ ಸಮಿತ್ ರಾಜ್ ನೊಂದಿಗೆ ಮಾತನಾಡಿದ್ದ ಆಕೆಯ ತಾಯಿ ಸಣ್ಣ ವಯಸ್ಸಿಗೆ ಮದುವೆ ಮಾಡಿಸುವುದಿಲ್ಲ ಎಂದು ಹೇಳಿದ್ದರು ಎನ್ನಲಾಗಿದೆ.
ಇದಾದ ಬಳಿಕವೂ ಆರೋಪಿಯು ಯುವತಿಗೆ ನಿರಂತರ ಫೊನ್ಕರೆಗಳನ್ನು ಮಾಡುತ್ತಿದ್ದು, ಕರೆ ಸ್ವೀಕರಿಸದಿದ್ದಾಗ ಕಾಲೇಜಿನ ಬಳಿ ಮತ್ತು ಮನೆ ಬಳಿ ಬರುವುದಾಗಿ ಬೆದರಿಸುತ್ತಿದ್ದ. ಹೀಗಾಗಿ ಆತನ ಒತ್ತಡಕ್ಕೆ ಮಣಿದು ಆತನೊಂದಿಗೆ ಇಷ್ಟ ಇಲ್ಲದಿದ್ದರೂ ಮಾತನಾಡುತ್ತಿದೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ ಎಂದು ತಿಳಿದು ಬಂದಿದೆ.
2023ರ ಮಾರ್ಚ್ 23ರಂದು ಕಾಲೇಜು ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಆರೋಪಿಯು ಕಾರಿನಲ್ಲಿ ಬಂದು ಆಕೆಯನ್ನು ಕರೆದೊಯ್ದು, ಬಜ್ಪೆ ವಿಮಾನ ನಿಲ್ದಾಣ ರಸ್ತೆಯ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಬಲಾತ್ಕಾರವಾಗಿ ಬಟ್ಟೆ ಬಿಚ್ಚಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಸಂದರ್ಭ ಜೋರಾಗಿ ಬೊಬ್ಬೆ ಹೊಡೆದಾಗ ಬಾಯಿಗೆ ಕೈ ಅಡ್ಡ ಇಟ್ಟು, ಈ ವಿಚಾರ ಯಾರಲ್ಲಾದರೂ ಹೇಳಿದರೆ ಮನೆಗೆ ಬಂದು ನನ್ನನ್ನು ಮತ್ತು ನನ್ನ ಮನೆಯವರನ್ನು ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಆ ಬಳಿಕ ಯುವತಿಯನ್ನು ಹಲವು ಬಾರಿ ಆತ ಹೊರಗೆ ಹೋಗಲು ಕರೆದೊಯ್ದು, ಹೋಗಲು ಒಪ್ಪದೇ ಇದ್ದಾಗ ನನ್ನ ಆಶ್ಲೀಲ ಫೊಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದ. ಅಲ್ಲದೆ, ನನ್ನ ನಗ್ನ ಫೊಟೊಗಳನ್ನೂ ಕಳುಹಿಸುವಂತೆ ಒತ್ತಾಯಿಸಿದ ಕಾರಣ ನಾನು ನಗ್ನ ಫೊಟೊಗಳನ್ನೂ ಕಳುಹಿಸಿದ್ದೆ ಎಂದು ಸಂತ್ರಸ್ತೆ ಯುವತಿ ದೂರಿನಲ್ಲಿ ಮಾಹಿತಿ ನೀಡಿದ್ದಾಳೆ ಎಂದು ತಿಳಿದು ಬಂದಿದೆ.
ಈ ಕುರಿತು ಯುವತಿ ನೀಡಿದ ದೂರಿನಂತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮಂಜುನಾಥ ಪೂಜಾರಿ ಮುದ್ರಾಡಿ
ಸಮಸ್ತ ಬಿಲ್ಲವ ಸಮಾಜದ ಪರವಾಗಿ ಕಾರ್ಕಳ ಬಿಲ್ಲವ ಸಂಘದಿಂದ ಅಭಿನಂದನೆ
ಹೆಬ್ರಿ :ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಬ್ರಹ್ಮಶ್ರೀ ನಾರಾಯಣ ಗುರು ನಿಗಮ ರಚನೆಯ ಬಹುದಿನಗಳ ಬೇಡಿಕೆಯನ್ನು ತಡವಾಗಿಯಾದರೂ ಸರಕಾರ ಈಡೇರಿಸಿರುವುದು ಸಂತಸದಾಯಕ. ನಿಗಮದ ಪ್ರಥಮ ಅಧ್ಯಕ್ಷ ಸ್ಥಾನವನ್ನು ಸಮುದಾಯ ಮತ್ತು ಸಮಾಜದ ಅಭಿವೃದ್ಧಿಗಾಗಿ ಸದಾ ಹಾತೊರೆಯುವ ಪ್ರಬುದ್ಧ ನಾಯಕ ಮಂಜುನಾಥ ಪೂಜಾರಿ ಅವರಿಗೆ ನೀಡಿರುವುದು ಅಭಿನಂದನಾರ್ಹ ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ಎಸ್ಎನ್ಜಿವಿ) ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಅಭಿಪ್ರಾಯಪಟ್ಟರು.
ಅವರು ಸೆ. 26ರಂದು ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ ಪೂಜಾರಿ ಮುದ್ರಾಡಿ ಅವರನ್ನು ಸಮಸ್ತ ಬಿಲ್ಲವ ಸಮಾಜದ ಪರವಾಗಿ ಕಾರ್ಕಳ ಬಿಲ್ಲವ ಸಂಘದಿಂದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
500 ಕೋ. ರೂ. ಅನುದಾನ ಒದಗಿಸಲಿ
ಇಂದಿಗೂ ಅಭಿವೃದ್ಧಿ ನಿಗಮದ ಸಂಪೂರ್ಣ ರಚನೆಯಾಗಿಲ್ಲ. ಕೇವಲ ಆದೇಶ ಆಗಿದ್ದು, ಇದೀಗ ಅಧ್ಯಕ್ಷರ ನಿಯುಕ್ತಿಯಾಗಿದೆ. ಇನ್ನು ಕಂಪೆನಿ ಆಕ್ಟ್ನಡಿಯಲ್ಲಿ ರಿಜಿಸ್ಟ್ರೇಶನ್ ಆಗಿ ನಂತರ ಸರಕಾರದಿಂದ ಅನುದಾನ ಬಂದಾಗಲೇ ಅಭಿವೃದ್ಧಿ ನಿಗಮದ ರಚನೆ ಅರ್ಥಪೂರ್ಣವಾಗುತ್ತದೆ ಎಂದ ಸತ್ಯಜಿತ್ ಸುರತ್ಕಲ್ ಸಮುದಾಯದ ಸ್ವಾಮೀಜಿಗಳು, ಬ್ರಹ್ಮಾವರದ ಸಮಾವೇಶ, ಶಿವಮೊಗ್ಗದ ಸಮಾವೇಶ ಸೇರಿದಂತೆ ನಿಗಮಕ್ಕಾಗಿ ನಡೆದ ವಿವಿಧ ಹೋರಾಟಗಳ ಬೇಡಿಕೆಯಂತೆ ವರ್ಷಕ್ಕೆ ಕನಿಷ್ಠ 500 ಕೋ. ರೂ. ಅನುದಾನವನ್ನು ನಿಗಮಕ್ಕೆ ಒದಗಿಸಬೇಕು. ಹಾಗಾದಲ್ಲಿ ಮಾತ್ರ ಬಿಲ್ಲವ, ಈಡಿಗ, ದಿವಾರು, ನಾಮಧಾರಿ, ದೇವರ ಮಕ್ಕಳು ಸೇರಿದಂತೆ 26 ಪಂಗಡ ಶೈಕ್ಷಣಿಕವಾಗಿ ಆರ್ಥಿಕವಾಗಿ ಪ್ರಗತಿಯಾಗಲು ಸಾಧ್ಯ ಎಂದರು.
ಜಾತಿ ಗಣತಿಯಿಂದ ಹೊರಗುಳಿಯದೆ, ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ 26 ಪಂಗಡಗಳೂ ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಂಡು, ಆರ್ಥಿಕ, ಸಾಮಾಜಿಕ ಸ್ಥಿತಿಗತಿಯನ್ನು ಮುಕ್ತವಾಗಿ ಹಂಚಿಕೊಂಡು ಮುಂದಿನ ದಿನಗಳಲ್ಲಿ ಅಭಿವೃದ್ಧಿ ನಿಗಮಕ್ಕೆ ಅನುದಾನ ಒದಗಿಸುವಲ್ಲಿ ಸಹಕರಿಸಿ ಎಂದು ಹೇಳಿದರು.
ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವೆ
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜುನಾಥ್ ಪೂಜಾರಿ ಮುದ್ರಾಡಿ, ಅನೇಕ ಹೋರಾಟಗಳ ಫಲವಾಗಿ ಇಂದು ನಿಗಮ ರಚನೆಗೊಂಡಿದೆ. ನಿಗಮದ ಬಗ್ಗೆ ನಮ್ಮ ಸಮಾಜದ 26 ಪಂಗಡದವರು ಅನೇಕ ನಿರೀಕ್ಷೆಯನ್ನು ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಅವರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರ ನನಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ಹೇಳಿದರು.
ನಿಗಮದ ಮೂಲಕ ಸಮಾಜ ಸದೃಢವಾಗಲಿ – ಪ್ರಮಲ್ ಕುಮಾರ್
ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್ ಮಾತನಾಡಿ, ಬಿಲ್ಲವ ಸೇರಿದಂತೆ 26 ಪಂಗಡಗಳ ಕನಸು ಇಂದು ಜೀವ ಪಡೆದುಕೊಂಡಿದೆ. ಸಮುದಾಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿದಾಗ ಮಾತ್ರ ಸದೃಢವಾಗಲು ಸಾಧ್ಯ. ಇದಕ್ಕೆ ಸರಕಾರದ ಶಕ್ತಿ ಅವಶ್ಯ. ಈ ನಿಟ್ಟಿನಲ್ಲಿ ಸಮುದಾಯ ಮತ್ತು ಸಮಾಜದ ಅಭಿವೃದ್ಧಿಯಾಗಿ ಮಿಡಿಯುವ ಹಿರಿಯ ಮುಖಂಡ ಮಂಜುನಾಥ ಮುದ್ರಾಡಿಯವರಿಗೆ ನಿಗಮದ ಅಧ್ಯಕ್ಷ ಸ್ಥಾನ ಒದಗಿ ಬಂದಿರುವುದು ಶ್ಲಾಘನೀಯ. ನಿಗಮದ ಮೂಲಕ ಮಂಜುನಾಥ ಪೂಜಾರಿಯವರ ನೇತೃತ್ವದಲ್ಲಿ ಸಮುದಾಯ ಏಕೀಕರಣಗೊಂಡು ಬಲಿಷ್ಠಗೊಳ್ಳಲಿ ಎಂದು ಹೇಳಿದರು.
ಈ ಸಂದರ್ಭ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಉಪಾಧ್ಯಕ್ಷ ಅಚ್ಯುತ್ ಕಲ್ಮಾಡಿ, ಉಡುಪಿ ಜಿಲ್ಲಾ ಗೌರವಾಧ್ಯಕ್ಷ ರಾಜು ಪೂಜಾರಿ ಉಪ್ಪೂರು, ಜಿಲ್ಲಾಧ್ಯಕ್ಷ ಜಗನ್ನಾಥ ಕೋಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸನಿಲ್, ಉಡುಪಿ ತಾಲೂಕು ಅಧ್ಯಕ್ಷ ಶಶಿಧರ್ ಅಮೀನ್, ಬ್ರಹ್ಮಾವರ ತಾಲೂಕು ಅಧ್ಯಕ್ಷ ಕರುಣಾಕರ ಪೂಜಾರಿ ಹಂದಾಡಿ, ಬ್ರಹ್ಮಾವರ ತಾಲೂಕು ಗೌರವ ಅಧ್ಯಕ್ಷ ಮಧುಸೂದನ್ ಹೇರೂರು, ಎಸ್ಎನ್ಜಿವಿ ರಾಜ್ಯ ಮಾಧ್ಯಮ ಸಾಮಾಜಿಕ ಜಾಲತಾಣ ಪ್ರಮುಖರಾದ ಸಂದೀಪ್ ಪಂಪುವೆಲ್, ಬಿಲ್ಲವ ಮಹಾಮಂಡಲದ ಕೋಶಾಧಿಕಾರಿ ಪ್ರಭಾಕರ ಬಂಗೇರ, ಸತೀಶ್ ಎಸ್. ಬಂಗೇರ, ಜಯಕರ್ ಕೊಡವೂರು, ಅಶೋಕ್ ಸುವರ್ಣ, ಸುಭಾಶ್ ಸುವರ್ಣ, ರಘುನಾಥ್ ಕೆ. ಎಸ್., ಅಕ್ಷಯ್ ಬಂಗೇರ, ರತ್ನಾಕರ್ ಅಮೀನ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಸೈಂಟ್ ಮೇರಿಸ್ ಪದವಿಪೂರ್ವ ಕಾಲೇಜು ಶಿರ್ವ ಇವರ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಫುಟ್ಬಾಲ್ ಪಂದ್ಯಾಟದಲ್ಲಿ ಡಾ.ಎನ್.ಎಸ್.ಎ.ಎಂ ಪದವಿಪೂರ್ವ ಕಾಲೇಜು, ನಿಟ್ಟೆಯ ವಿದ್ಯಾರ್ಥಿನಿ ಸ್ಮೃತಿ ಕೆ ಶೆಟ್ಟಿ ಕಾರ್ಕಳ ತಾಲೂಕು ತಂಡವನ್ನು ಪ್ರತಿನಿಧಿಸಿ, ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿನಿಯ ಸಾಧನೆಗೆ ಆಡಳಿತ ಮಂಡಳಿ, ಬೋಧಕ-ಬೋಧಕೇತರ ವರ್ಗ ಅಭಿನಂದಿಸಿದ್ದಾರೆ.
ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮುದ್ರಾಡಿ ಮಂಜುನಾಥ ಪೂಜಾರಿ ನೇಮಕ.
ಬೆಂಗಳೂರು : ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾಂಗ್ರೆಸ್ ನಾಯಕ ಮುದ್ರಾಡಿ ಮಂಜುನಾಥ ಪೂಜಾರಿ ಅವರನ್ನು ಕಾಂಗ್ರೇಸ್ ಪಕ್ಷ ನೇಮಕ ಮಾಡಿದೆ.
ಯುವ ಕಾಂಗ್ರೆಸ್ ಮೂಲಕ ಸಮಾಜಸೇವೆ, ರಾಜಕೀಯ ಪ್ರವೇಶ ಮಾಡಿದ ಮಂಜುನಾಥ ಪೂಜಾರಿ ಅವರು ಮುದ್ರಾಡಿ ಗ್ರಾಮ ಪಂಚಾಯತಿ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಬಳಿಕ ಕಾರ್ಕಳ ತಾಲ್ಲೂಕು ಪಂಚಾಯತಿ ಸದಸ್ಯರಾಗಿದ್ದರು.
ಉಡುಪಿ ಜಿಲ್ಲಾ ಪಂಚಾಯತಿಯ ಹೆಬ್ರಿ ಕ್ಷೇತ್ರದ ಸದಸ್ಯರಾಗಿ ಸೇವೆ ಸಲ್ಲಿಸಿದರು. ಜನಪರ ಹೋರಾಟಗಾರರಾದ ಮುದ್ರಾಡಿ ಮಂಜುನಾಥ ಪೂಜಾರಿ ನಿರಂತರವಾಗಿ ಜನಸೇವೆಯಲ್ಲಿ ಸಕ್ರೀಯರಾಗಿದ್ದಾರೆ.ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಹಾಗೂ ಸಂಘಸಂಸ್ಥೆಗಳಲ್ಲಿ ಮುಖ್ಯಸ್ಥರಾಗಿ ಸೇವೆಸಲ್ಲಿಸುತ್ತ ಸಕ್ರೀಯರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಾರ್ಕಳ ಕ್ಷೇತ್ರದ ಟಿಕೇಟ್ ಗಾಗಿ ಪ್ರಬಲ ಆಕಾಂಕ್ಷಿಯಾಗಿದ್ದರು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಲು ಶ್ರಮಿಸಿದ್ದಾರೆ. ಮುದ್ರಾಡಿಯಲ್ಲಿ ಶ್ರೀ ಗುರುರಕ್ಷಾ ಚಾರಿಟೇಬಲ್ ಟ್ರಸ್ಟ್ ಮತ್ತು ಶ್ರೀ ಗುರುರಕ್ಷಾ ಸೌಹಾರ್ದ ಸಹಕಾರಿ ಸಂಘವನ್ನು ಸ್ಥಾಪಿಸಿ ಜನಸೇವೆಯಲ್ಲಿ ಸಕ್ರೀಯರಾಗಿದ್ದಾರೆ. ಸಂಸ್ಥೆಯನ್ನು ಸ್ಥಾಪಿಸಿ ಮುದ್ರಾಡಿ ದಸರಾ ಹೆಸರಿನಲ್ಲಿ ನವರಾತ್ರಿ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸುತ್ತ ಬಂದಿದ್ದಾರೆ.
ನಾಡಹಬ್ಬ ದಸರಾ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಊರ-ಪರವೂರ ದಾನಿಗಳ ಸಹಕಾರದಿಂದ ಈ ಬಾರಿಯೂ 3ನೇ ವರ್ಷದ ಬಜೆಗೋಳಿ ದಸರಾ ಸಾರ್ವಜನಿಕ ಶಾರದಾ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ.
ಬಜೆಗೋಳಿ ಪಂಚಾಯತ್ ಮೈದಾನದಲ್ಲಿ, ರಾಜೇಶ್ ಪೂಜಾರಿ ಕರಿಯಾಲು ಇವರ ಅಧ್ಯಕ್ಷತೆಯಲ್ಲಿ ವೇದಮೂರ್ತಿ ಎಂ. ರಾಮ್ ಭಟ್ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಅ.1 ರಿಂದ 2 ರವರೆಗೆ ನಡೆಯಲಿದೆ.
ಕನ್ನಡದ ಖ್ಯಾತ ಕಾದಂಬರಿಕಾರ, ಚಿಂತಕ, ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್ ಎಲ್ ಭೈರಪ್ಪ ಅವರು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಹಾಸನ ಜಿಲ್ಲೆಯ ಸಂತೇಶಿವರದಲ್ಲಿ ಜನಿಸಿದ್ದ ಅವರು ತಮ್ಮ ಕೃತಿಗಳ ಮೂಲಕ ಕನ್ನಡದ ಹೆಮ್ಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದಿದ್ದರು. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರು ಮತ್ತು ಲೇಖಕರು. ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ಹೆಸರಾಗಿದ್ದಾರೆ. ಇವರ ಕಾದಂಬರಿಗಳು ಹಲವಾರು ಮರುಮುದ್ರಣಗಳನ್ನು ಕಂಡು ಕನ್ನಡದ ಜನಪ್ರಿಯ ಬರಹಗಾರರಾಗಿದ್ದಾರೆ.ಇವರಿಗೆ ಭಾರತ ಸರ್ಕಾರವು 2023ನೇ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.