Home Blog Page 4

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ರಜತ ವರ್ಷದ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಅವರಿಗೆ ಸನ್ಮಾನ

0

 

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ 26ನೇ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಸುರೇಶ್ ಅಬ್ಬನಡ್ಕ ಅವರ ಅಧ್ಯಕ್ಷತೆಯಲ್ಲಿ ರಜತ ವರ್ಷದ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಅವರಿಗೆ ಸಂಘದ ವತಿಯಿಂದ ಸನ್ಮಾನ ನಡೆಸಲಾಯಿತು.

ವೇದಿಕೆಯಲ್ಲಿ ಕಂಬಳ ಕ್ಷೇತ್ರದ ಸಾಧಕ ಬೋಳದಗುತ್ತು ಸಂತೋಷ್ ಶೆಟ್ಟಿ, ಉದ್ಯಮಿ ಮರಿಮಾರಗುತ್ತು ಅವಿನಾಶ್ ಮಲ್ಲಿ, ಉದ್ಯಮಿ ಹರೀಶ್ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸ್ಥಾಪಕಾಧ್ಯಕ್ಷ ವಿಠಲ ಮೂಲ್ಯ, ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ, ಸುರೇಶ್ ಕಾಸರಬೈಲು, ಉಪಾಧ್ಯಕ್ಷರಾಗಿ ರಘುವೀರ್ ಶೆಟ್ಟಿ, ಕಾರ್ಯದರ್ಶಿಯಾಗಿ ಸತೀಶ್ ಅಬ್ಬನಡ್ಕ, ಜೊತೆ ಕಾರ್ಯದರ್ಶಿ ಮಂಜುನಾಥ ಆಚಾರ್ಯ, ಕೋಶಾಧಿಕಾರಿಯಾಗಿ ಪ್ರದೀಪ್ ಸುವರ್ಣ, ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಸುಲೋಚನಾ ಕೋಟ್ಯಾನ್, ಅಬ್ಬನಡ್ಕ ಭಜನಾ ಮಂಡಳಿಯ ಅಧ್ಯಕ್ಷ ಕೀರ್ತನ್ ಪೂಜಾರಿ ಬೋಳ ಉಪಸ್ಥಿತರಿದ್ದರು.

ಸಿ.ಎ.ನಿತ್ಯಾನಂದ ಪ್ರಭುವರವರಿಗೆ ಮಾತೃವಿಯೋಗ

0

ಸಿ.ಎ.ನಿತ್ಯಾನಂದ ಪ್ರಭುವರವರಿಗೆ ಮಾತೃವಿಯೋಗ

ಕಾರ್ಕಳ ಜ್ಞಾನಸುಧಾದಲ್ಲಿ ಶ್ರದ್ಧಾಂಜಲಿ ಸಭೆ

ಕಾರ್ಕಳದ ಪ್ರಸಿದ್ಧ ಲೆಕ್ಕಪರಿಶೋಧಕ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿಯಾಗಿರುವ ಸಿ.ಎ ನಿತ್ಯಾನಂದ ಪ್ರಭುರವರ ತಾಯಿ ಸುಮಿತ್ರಾ ಪ್ರಭು (87) ಅವರು ಆದಿತ್ಯವಾರದಂದು ದೈವಾಧೀನರಾದರು. ಕೆರ್ವಾಶೆಯಲ್ಲಿ ಜನಿಸಿದ ಇವರು ಅಜೆಕಾರ್ ಗುಂಡುರಾಯ ಪ್ರಭುರವನ್ನು ವರಿಸಿ ಅಂಗಡಿ ವ್ಯಾಪಾರದಲ್ಲಿ 40ವರ್ಷಗಳಿಂದ ತೊಡಗಿಸಿಕೊಂಡ ಇವರಿಗೆ ಓರ್ವ ಪುತ್ರನನ್ನು ಹಾಗೂ ಮೂವರು ಪುತ್ರಿಯರನ್ನು, 9 ಮೊಮ್ಮಕ್ಕಳನ್ನು ಹಾಗೂ ಒಂದು ಮರಿಮೊಮ್ಮಗುವನ್ನು ಅಗಲಿದ್ದಾರೆ. ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಕಾರ್ಕಳ ಜ್ಞಾನಸುಧಾದ ಮುಖ್ಯ ಸಭಾಂಗಣದಲ್ಲಿ ಅಗಲಿದ ದಿವ್ಯಚೇತನ ಸುಮಿತ್ರಾ ಪ್ರಭುರವರಿಗೆ ಸೋಮವಾರದಂದು ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಇದೇ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ ಕೊಡವೂರ್, ಉಪಪ್ರಾಂಶುಪಾಲರಾದ ಸಾಹಿತ್ಯ, ಉಷಾ ರಾವ್ ಯು, ಉದ್ಯಮಿ ತ್ರಿವಿಕ್ರಮ ಕಿಣಿ, ಸುಮಿತ್ರಾ ಅವರ ಮೊಮ್ಮಗ, ಸಂಸ್ಥೆಯ ಇಂಟರ್ನಲ್ ಅಡಿಟರ್ ಸಿ.ಎ ವಿಘ್ನೇಶ್ ಕಾಮತ್ ಅವರು ಪುಷ್ಪನಮನವನ್ನು ಸಲ್ಲಿಸಿದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ ಕುಲಾಲ್ ನುಡಿನಮನ ಸಲ್ಲಿಸಿದರು.

ಇದೀಗ ಹೋಟೆಲ್ ಅನಘ ಗ್ರಾಂಡ್ ಸಂಪೂರ್ಣ ಹವಾ ನಿಯಂತ್ರಿತ ರೆಸ್ಟೋರೆಂಟ್

0

 

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದ ‘ಹೋಟೆಲ್ ಅನಘ ಗ್ರಾಂಡ್ ರೆಸ್ಟೋರೆಂಟ್’ ಇದೀಗ ಬೇಸಿಗೆಯ ಬೇಗೆಯನ್ನು ತಣಿಸಲು ಹವಾ ನಿಯಂತ್ರಿತವಾಗಿ ಗ್ರಾಹಕರ ಸೇವೆಗೆ ಲಭ್ಯವಾಗಿದೆ.

ಸೇವೆ ಹಾಗೂ ಸ್ವಚ್ಛತೆಯ ಮೂಲಕ ಗ್ರಾಹಕರಿಗೆ ಅಚ್ಚುಮೆಚ್ಚಿನ ಖಾದ್ಯಗಳನ್ನು ನೀಡುವುದರ ಮೂಲಕ ಗ್ರಾಹಕರ ಸಂಪೂರ್ಣ ಸಹಕಾರದಿಂದ ಕಾರ್ಕಳದ ಪುಲ್ಕೇರಿ ಬೈಪಾಸ್ ಜಂಕ್ಷನ್ ನಲ್ಲಿರುವ ಹೋಟೆಲ್ ಅನಘ ಗ್ರಾಂಡ್ ಫ್ಯಾಮಿಲಿ ರೆಸ್ಟೋರೆಂಟ್ ಯಶಸ್ವಿ ಉದ್ಯಮವನ್ನು ನಡೆಸುತ್ತಿದೆ.

ವಿಶಾಲವಾದ ಸ್ಥಳಾವಕಾಶ ಹೊಂದಿರುವ ಕ್ಯಾಬಿನ್, ಹವಾನಿಯಂತ್ರಿತ ಕ್ಯಾಬಿನ್, ಫ್ಯಾಮಿಲಿ ಕ್ಯಾಬಿನ್ ಪ್ರತ್ಯೇಕ ವ್ಯವಸ್ಥೆ ಹೊಂದಿದೆ.

ಸಭೆ ಸಮಾರಂಭ ಹಾಗೂ ಪಾರ್ಟಿಯ ವ್ಯವಸ್ಥೆಗೆ ಪಾರ್ಟಿ ಹಾಲ್ ಹಾಗೂ ಗಾರ್ಡನ್ ಸೌಲಭ್ಯವಿದ್ದು, ಲಿಫ್ಟ್ ಹಾಗೂ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದೆ.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : 26ನೇ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0

 

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ 26ನೇ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಘಟಕ ಮಟ್ಟದ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭವು ಕುಂಟಲಗುಂಡಿಯಲ್ಲಿರುವ ಸಂಘದ ರಜತ ಮಹೋತ್ಸವ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಿತು.

26ನೇ ವರ್ಷದ ನೂತನ ಅಧ್ಯಕ್ಷರಾಗಿ ಸುರೇಶ್ ಅಬ್ಬನಡ್ಕ ಅವರು ಪದಪ್ರದಾನ ಸ್ವೀಕರಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಮಾಜಿ ಸಚಿವರು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಬಾಗವಹಿಸಿ ಮಾತನಾಡಿ, ತಾಲೂಕಿನಲ್ಲಿ ನೂರಾರು ಸಂಘ ಸಂಸ್ಥೆಗಳಿವೆ ಅದರೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ನಿರಂತರ ವರ್ಷಪೂರ್ತಿ ಜನಪರ ಕಾರ್ಯಕ್ರಮಗಳೊಂದಿಗೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಹಾಗೂ ಇತರೆ ಸಂಘ ಸಂಸ್ಥೆಗಳಿಗೆ ಮಾದರಿ ಸಂಸ್ಥೆಯಾಗಿ ಮೂಡಿ ಬಂದಿದೆ ಎಂದರು.

ವೇದಿಕೆಯಲ್ಲಿ ಕಂಬಳ ಕ್ಷೇತ್ರದ ಸಾಧಕರಾದ ಬೋಳದಗುತ್ತು ಸಂತೋಷ್ ಶೆಟ್ಟಿ, ಉದ್ಯಮಿ ಮರಿಮಾರಗುತ್ತು ಅವಿನಾಶ್ ಮಲ್ಲಿ, ಉದ್ಯಮಿ ಹರೀಶ್ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಯುವ ಉದ್ಯಮಿ ಸುರೇಶ್ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.

ಪದಗ್ರಹಣ ಸಮಾರಂಭದಲ್ಲಿ ಉಪಾಧ್ಯಕ್ಷರಾಗಿ ರಘುವೀರ್ ಶೆಟ್ಟಿ, ಕಾರ್ಯದರ್ಶಿಯಾಗಿ ಸತೀಶ್ ಅಬ್ಬನಡ್ಕ, ಜೊತೆ ಕಾರ್ಯದರ್ಶಿಯಾಗಿ ಮಂಜುನಾಥ ಆಚಾರ್ಯ, ಕೋಶಾಧಿಕಾರಿಯಾಗಿ ಪ್ರದೀಪ್ ಸುವರ್ಣ, ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಸುಲೋಚನಾ ಕೋಟ್ಯಾನ್ ಅವರು ಪ್ರಮಾಣ ವಚನ ಸ್ವೀಕರಿಸಿದರು.

ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಂಧ್ಯಾ ಶೆಟ್ಟಿ ಸ್ವಾಗತಿಸಿದರು, ವೀಣಾ ಆಚಾರ್ಯ, ಕಿರಣ್ ಶೆಟ್ಟಿ, ಅನ್ನಪೂರ್ಣ ಕಾಮತ್ ಅವರು ನೂತನ ಸದಸ್ಯರ ಪರಿಚಯ ವಾಚಿಸಿರು, ಪದ್ಮಶ್ರೀ ಪೂಜಾರಿ ಸನ್ಮಾನಿತರ ಪರಿಚಯ ವಾಚಿಸಿದರು, ನೂತನ ಕಾರ್ಯದರ್ಶಿ ಸತೀಶ್ ಅಬ್ಬನಡ್ಕ ವಂದಿಸಿದರು.

ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗದ ಸಮಿತಿಗೆ ಪ್ರದಾನ ಕಾರ್ಯದರ್ಶಿಯಾಗಿ ರವಿಶಂಕರ ಶೇರಿಗಾರ್ ಆಯ್ಕೆ

0

 

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅನುಮೋದನೆಯಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರದಾನ ಕಾರ್ಯದರ್ಶಿಯಾಗಿ ರವಿಶಂಕರ್ ಶೇರಿಗಾರ್ ರವರನ್ನು ಹಿಂದುಳಿದ ವರ್ಗಗಳ ಅಧ್ಯಕ್ಷ ಎಸ್. ಮಧುಬಂಗಾರಪ್ಪ ನೇಮಕ ಮಾಡಿದ್ದಾರೆ.

ರವಿಶಂಕರ್ ಶೇರಿಗಾರ್ ರವರು ಕಳೆದ 25 ವರ್ಷಗಳಿಂದ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಕಾರ್ಕಳ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ, ಪ್ರದಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

2013ರಿಂದ 2018ರವರೆಗೆ ಭಾರತೀಯ ನೈರುತ್ಯ ರೈಲ್ವೆಯ ಸಲಹಾ ಸಮಿತಿ ಸದಸ್ಯರಾಗಿ 2017ರ ಗೋವಾ ರಾಜ್ಯದ ಪೋಂಡ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿಯಾಗಿ, ಎಐಸಿಸಿಯಿಂದ ನೇಮಕಗೊಂಡು ಪಕ್ಷದ ಅಭ್ಯರ್ಥಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಕೆಪಿಸಿಸಿ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ್ದರು.

ತನ್ನನ್ನು ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗದ ಸಮಿತಿಗೆ ಪ್ರದಾನ ಕಾರ್ಯದರ್ಶಿ ಸ್ಥಾನಕ್ಕೆ ಶಿಫಾರಸ್ಸು ಮಾಡಿದ ಡಾ.ಎಂ.ವೀರಪ್ಪ ಮೊಯ್ಲಿ ಅವರಿಗೆ, ಸಹಕರಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರ್, ಉದಯ್ ಕುಮಾರ್ ಮುನಿಯಾಲು ,ಮಂಜುನಾಥ್ ಪೂಜಾರಿ ಮುದ್ರಾಡಿ ಅವರಿಗೆ ರವಿಶಂಕರ ಶೇರಿಗಾರ್ ಅವರು ಕೃತಜ್ಞತೆ ತಿಳಿಸಿದ್ದಾರೆ.

ದಿ. ಗೋಪಾಲ ಭಂಡಾರಿ ಪುತ್ರ ಸುದೀಪ್ ಭಂಡಾರಿ ನಿಧನಕ್ಕೆ ಉದಯ ಶೆಟ್ಟಿ ಮುನಿಯಾಲು ಸಂತಾಪ

0

 

ಕಾರ್ಕಳದ ಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ ಪುತ್ರ ಸುದೀಪ್ ಭಂಡಾರಿಯವರ ಅಗಲುವಿಕೆಯಿಂದ ಅಘಾತವಾಗಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ವರ್ಗಕ್ಕೆ ದುಃಖ ಸಹಿಸುವ ಶಕ್ತಿ ದೊರಕಲಿ ಎಂದು ಕಾರ್ಕಳ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಅವರು ಸಂತಾಪ ಸೂಚಿಸಿದ್ದಾರೆ.

ಕುಸ್ತಿ ಪಂದ್ಯಾಟದಲ್ಲಿ ಎಸ್.ವಿ.ಟಿ ಕಾಲೇಜಿನ ವಿದ್ಯಾರ್ಥಿನಿ ರಾಷ್ಟ್ರಮಟ್ಟಕ್ಕೆ

0

 

ಅ.9 ರಂದು ನಡೆದ ಮಂಗಳೂರು ವಿಶ್ವ ವಿದ್ಯಾನಿಲಯದ ಅಂತರ್ ಕಾಲೇಜು ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಸಾಕ್ಷಿ ಇವರು ಪ್ರಥಮ ಸ್ಥಾನವನ್ನು ಪಡಕೊಂಡು ಛತ್ತಿಸ್‌ಘಡದಲ್ಲಿ ನಡೆಯುವ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ಇವರನ್ನು ಕಾಲೇಜಿನ ಆಡಳಿತ ಮಂಡಳಿ. ಎಸ್.ವಿ ಎಜ್ಯುಕೇಶನ್ ಟ್ರಸ್ಟ್, ಆಡಳಿತ ಪರಿಷತ್ತು, ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಪರವಾಗಿ ಅಭಿನಂದಿಸಲಾಯಿತು.

ನಿಟ್ಟೆಯ ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಸಂಬಂಧಿಸಿ ವಿಶ್ವಕರ್ಮ ಒಕ್ಕೂಟದ ನಿಯೋಗ ಉಡುಪಿಯ ಪೊಲೀಸ್ ಅಧೀಕ್ಷಕರ ಭೇಟಿ ಮಾಡಿ ಉನ್ನತ ಮಟ್ಟದ ತನಿಖೆಗೆ ಆಗ್ರಹ

0

 

ತನ್ನ ಆತ್ಮಹತ್ಯೆಯ ಹೊಣೆಗಾರರು ಎಂದು ನಾಲ್ಕು ಜನರ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಿ, ಸೆಕ್ಸ್ ಟ್ರಾಪ್ ಜಾಲದ ಭಯಾನಕ ವಿಷಯಗಳನ್ನು ಒಳಗೊಂಡ ಏಳು ಪುಟಗಳ ಡೆತ್ ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಡಿರುವ ನಿಟ್ಟೆ ಗ್ರಾಮದ ಪರಪ್ಪಾಡಿಯ ನಿವಾಸಿ ಅಭಿಷೇಕ್ ಆಚಾರ್ಯನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿ ಇಂದು ಅವಿಭಜಿತ ದಕ್ಶಿಣ ಕನ್ನಡ ಜಿಲ್ಲೆಯ ವಿಶ್ವಕರ್ಮ ಒಕ್ಕೂಟದ ನಿಯೋಗ ಉಡುಪಿಯ ಪೊಲೀಸ್ ಅಧೀಕ್ಷಕರನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ಚರ್ಚಿಸಿ, ಇನೊಂದು ಸಾಮಾನ್ಯ ಆತ್ಮಹತ್ಯೆ ಪ್ರಕರಣವಲ್ಲ, ಇದೊಂದು ಬೆದರಿಕೆ ಹಾಗೂ ಬ್ಲಾಕ್ ಮೇಲ್ ನಿಂದಾಗಿರುವ ಆತ್ಮಹತ್ಯೆ ಪ್ರಕರಣವಾಗಿದ್ದು ಶೀಘ್ರವೇ ಉನ್ನತ ಮಟ್ಟದ ತನಿಖೆ ನಡೆಸಿ ಆರೋಪಿಗಳನ್ನು ಕೂಡಲೇ ಬಂಧಿಸಿ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಕೊಳ್ಳುವಂತೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ವಿಶ್ವಕರ್ಮ ಒಕ್ಕೂಟ ಅಧ್ಯಕ್ಷರಾದ ಮಧು ಆಚಾರ್ಯ ಮುಲ್ಕಿ, ಅಲೆವೂರು ಯೋಗೀಶ್ ಆಚಾರ್ಯ, ಮುರಳೀಧರ ಕೆ., ಜನಾರ್ಧನ ಎಸ್ ಆಚಾರ್ಯ, ಹರ್ಷವರ್ಧನ್ ನಿಟ್ಟೆ, ಕಾಪು ಯುವ ಸೇವಾ ಬಳಗದ ಅಧ್ಯಕ್ಷರಾದ ಬಿಳಿಯರು ಸುಧಾಕರ ಆಚಾರ್ಯ, ಹರೀಶ್ ಆಚಾರ್ಯ ಕಳತ್ತೂರು, ಪ್ರಕಾಶ್ ಆಚಾರ್ಯ ಕಟಪಾಡಿ ಮತ್ತಿತರರು ಉಪಸ್ಥಿತರಿದ್ದರು.

ನಿಟ್ಟೆಯಲ್ಲಿ 2 ದಿನಗಳ ‘ಸೆಮಾಫೋರ್’ ಉದ್ಘಾಟನೆ

0

 

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗವು ತನ್ನ ವಾರ್ಷಿಕ ಉತ್ಸವ ಸೆಮಾಫೋರ್ 2K25 ನ್ನು ಅ. 9 ಮತ್ತು 10 ರಂದು ಆಯೋಜಿಸಿತು.

ಅ. 9 ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಎಚ್ಪಿ ಎಂಟರ್ಪ್ರೈಸ್ ನ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಪ್ರಧಾನ ಸಾಫ್ಟ್ವೇರ್ ಎಂಜಿನಿಯರ್ ಅಭಿಲಾಷ್ ಯು.ಕೆ. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ತಾಂತ್ರಿಕ ಕಾಲೇಜಿನ ಪ್ರೊಫೆಸರ್ ಮತ್ತು ಡೀನ್ (ಸಂಶೋಧನೆ ಮತ್ತು ಅಭಿವೃದ್ಧಿ) ಡಾ.ಸುದೇಶ್ ಬೇಕಲ್ ವಹಿಸಿದ್ದರು.

ಮುಖ್ಯ ಅತಿಥಿ ಅಭಿಲಾಷ್ ಯು.ಕೆ. ಅವರು ತಮ್ಮ ಭಾಷಣದಲ್ಲಿ, ವಿದ್ಯಾರ್ಥಿಗಳು ನಾವೀನ್ಯತೆಯನ್ನು ಅಳವಡಿಸಿಕೊಳ್ಳಲು, ಉದಯೋನ್ಮುಖ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳಲು ಮತ್ತು ಐಟಿ ಉದ್ಯಮದಲ್ಲಿ ಉತ್ಕೃಷ್ಟತೆಯನ್ನು ಮುಂದುವರಿಸಲು ಪ್ರೋತ್ಸಾಹಿಸಿದರು.

ಸಭಾಧ್ಯಕ್ಷ ಡಾ. ಸುದೇಶ್ ಬೇಕಲ್ ಅವರು ವೃತ್ತಿಪರ ಬೆಳವಣಿಗೆಯಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ನಿರಂತರ ಕಲಿಕೆಯ ಮಹತ್ವವನ್ನು ತಿಳಿಸಿದರು.

ವಿದ್ಯಾರ್ಥಿ ಸಂಘದ ಸಾಧನೆಗಳು ಮತ್ತು ಚಟುವಟಿಕೆಗಳನ್ನು ಪ್ರದರ್ಶಿಸಿದ SAMCA ಸುದ್ದಿಪತ್ರದ ಮೊದಲ ಸಂಪುಟದ ಬಿಡುಗಡೆಯು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು. ಉತ್ಸವದಲ್ಲಿ 11 ಕಾಲೇಜುಗಳ ಉತ್ಸಾಹಭರಿತ ಭಾಗವಹಿಸುವಿಕೆ ಕಂಡುಬಂದಿತು. ಸೃಜನಶೀಲತೆ, ತಂಡದ ಕೆಲಸ ಮತ್ತು ಕಲಿಕೆಗೆ ರೋಮಾಂಚಕ ವೇದಿಕೆಯನ್ನು ಒದಗಿಸಿದ 10 ತಾಂತ್ರಿಕ ಮತ್ತು ತಾಂತ್ರಿಕೇತರ ಸ್ಪರ್ಧೆಗಳನ್ನು ಈ ಕಾರ್ಯಕ್ರಮ ಒಳಗೊಂಡಿತ್ತು.

ವೇದಿಕೆಯಲ್ಲಿ ಸೆಮಾಫೋರ್ ಸಂಯೋಜಕ ಡಾ.ಅನಂತಮೂರ್ತಿ, ಅಧ್ಯಕ್ಷ ಕಿರಣ್, ಕಾರ್ಯದರ್ಶಿ ರಕ್ಷಿತಾ, ತಾಂತ್ರಿಕ ಸಂಯೋಜಕ ಅನೂಪ್ ನಾಯಕ್ ಉಪಸ್ಥಿತರಿದ್ದರು.

ಶ್ರೀ ಲಕ್ಷ್ಮೀ ಜನಾರ್ದನ ಇಂಟರ್ ನ್ಯಾಶನಲ್ ಸ್ಕೂಲ್ ಬೆಳ್ಮಣ್‌ : ವಿಜ್ಞಾನ ಮಾದರಿಗಳ ತಯಾರಿಕೆ ಹಾಗೂ ಪ್ರದರ್ಶನ – “ಎಸ್ ಎಲ್ ಜೆ ಸೈಕ್ವೆಸ್ಟ್ 2025”

0

 

ಶ್ರೀ ಲಕ್ಷ್ಮೀ ಜನಾರ್ದನ ಇಂಟರ್ ನ್ಯಾಶನಲ್ ಸ್ಕೂಲ್ ಬೆಳ್ಮಣ್‌ ನಲ್ಲಿ ಅ.11 ರಂದು ” ವಿಜ್ಞಾನ ಮಾದರಿಗಳ ತಯಾರಿಕೆ ಹಾಗೂ ಪ್ರದರ್ಶನ – ಎಸ್ ಎಲ್ ಜೆ ಸೈಕ್ವೆಸ್ಟ್ 2025″ ಕಾರ್ಯಕ್ರಮ ಆಯೋಜಿಸಲಾಯಿತು.

ಶಾಲೆಯ ಸುಮಾರು ಇನ್ನೂರು ವಿದ್ಯಾರ್ಥಿಗಳು ವಿಜ್ಞಾನದ ನಿಪುಣತೆ, ಅನ್ವೇಷಣೆ, ಹೊಸ ಹೊಸ ಕಲ್ಪನೆಗಳನ್ನು ಒಳಗೊಂಡ 60ಕ್ಕಿಂತಲೂ ಮೇಲ್ಪಟ್ಟು ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಾಗೂ ತೀರ್ಪುಗಾರರಾಗಿ ಭಾಗವಹಿಸಿದ ನಿಟ್ಟೆ ಏನ್. ಎಂ. ಏ. ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಪ್ರೊಫೆಸರ್ ಡಾ.ರಾಮ್ ಮರಾಠೆ ಹಾಗೂ ವ್ರೋಕ್ಲಾ ವಿಶ್ವವಿದ್ಯಾಲಯ ಪೋಲಾಂಡ್ ನ ಸಂಶೋಧನಾ ವಿಜ್ಞಾನಿ ಡಾ. ಸುನೈನಾ ಎಸ್. ಪಾಟೀಲ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಕ್ಕಳು ತಯಾರಿಸಿದ ಮಾದರಿಯನ್ನು ವಿಶ್ಲೇಷಿಸಿ ಮಕ್ಕಳ ಸೃಜನಶೀಲತೆ, ಸೃಜನಾತ್ಮಕ ಆಲೋಚನೆ, ಅನ್ವೇಷಣೆ, ಮಾತಿನಿ ಚಾಕಚಕ್ಯತೆ, ನಿಖರತೆಯನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ಉಪಯುಕ್ತವಾದ ಇಂತಹ ಅತ್ಯಮೂಲ್ಯ ಕಾರ್ಯಕ್ರಮವನ್ನು ಆಯೋಜಿಸಿದ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕವೃಂದದವರಿಗೆ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಚೇರ್ ಪರ್ಸನ್ ಮೋಹಿನಿ ಪಿ. ಶೆಟ್ಟಿ, ಸಿ. ಇ. ಒ. ಮಯೂರ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲರು ಭುಜಂಗ ಪಿ. ಶೆಟ್ಟಿ ಅತಿಥಿಗಳ ಪರಿಚಯದೊಂದಿಗೆ ಭಾಗವಹಿಸಿದ ಎಲ್ಲರನ್ನೂ ಸ್ವಾಗತಿಸಿದರು.

ಶಾಲಾ ಹೆತ್ತವರು, ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ವಿವಿದ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಮಾದರಿ ಪ್ರದರ್ಶನದ ವೀಕ್ಷಣೆಯಲ್ಲಿ ಭಾಗವಹಿಸಿದರು. ವಿಶೇಷವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆತ್ತವರಿಗೆ ಹಾಗೂ ಪೋಷಕರಿಗೆ ರಸಪ್ರಶ್ನೆಯನ್ನು ಆಯೋಜಿಸಲಾಗಿತ್ತು.