ಕೊಡಗಿನಲಿ ಬೆಳಗ್ಗೆ ಕಾಫಿ ತೋಟಕ್ಕೆ ವಿಹಾರಕ್ಕೆ ಹೋಗಿದ್ದಾಗ ಸಂಭವಿಸಿದ ಘಟನೆ
ದಕ್ಷಿಣ ಕೊಡಗಿನ ಗೋಣಿಕೊಪ್ಪಲು ಸಮೀಪದ ತಿತಿಮತಿ ಬಳಿಯ ಕೋಣನಕಟ್ಟೆಯಲ್ಲಿ ಕಾಫಿ ತೋಟಕ್ಕೆ ತೆರಳಿದ್ದ ತಂಡದ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಮಹಿಳೆಯೋರ್ವರು ಸಾವಿಗೀಡಾದ ಘಟನೆ ಶುಕ್ರವಾರ ಸಂಭವಿಸಿದೆ. ದೆಹಲಿಯಲ್ಲಿ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದ ಪ್ರಸ್ತುತ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (ರಾ) ನಲ್ಲಿ ಐಜಿ ಆಗಿ ಕಾರ್ಯನಿರ್ವಹಿಸುತ್ತಿರುವ ಅಣ್ಣಳಮಾಡ ಅಚ್ಚಯ್ಯ ಅವರ ಪತ್ನಿ ಸಂಧ್ಯಾ ಅಚ್ಚಯ್ಯ (55) ಸಾವಿಗೀಡಾದವರು.
ದಿಲ್ಲಿಯಲ್ಲಿ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ನೆಲೆಸಿರುವ ಸಂಧ್ಯಾ ಅವರು ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಎರಡು ದಿನಗಳ ಹಿಂದೆಯಷ್ಟೇ ಕೊಡಗಿಗೆ ಬಂದಿದ್ದರು ಎಂದು ತಿಳಿದುಬಂದಿದೆ.
ಶುಕ್ರವಾರ ಬೆಳಗ್ಗೆ ಕಾಫಿ ಎಸ್ಟೇಟ್ನ ಮ್ಯಾನೇಜರ್, ಚಾಲಕ ಮತ್ತು ಇತರ ಇಬ್ಬರು ಕಾರ್ಮಿಕರ ಜತೆ 9 ಗಂಟೆ ಸುಮಾರಿಗೆ ತೋಟ ನೋಡಿಕೊಂಡು ಬರಲು ತೆರಳಿದ್ದರು. ಸುಮಾರು ದೂರ ಹೋಗಿದ್ದ ವೇಳೆ ತೋಟದಲಿದ್ದ ಕಾಡಾನೆ ಏಕಾಏಕಿ -ಎದುರಾಗಿ ಅಟ್ಟಾಡಿಸಿಕೊಂಡು ಬಂದಾಗ ಎಲ್ಲರೂ ಓಡಿದರು. ಆದರೆ ಸಂಧ್ಯಾ ಅವರಿಗೆ ವೇಗವಾಗಿ ಓಡಲು ಸಾಧ್ಯವಾಗದೆ ಆನೆಗೆ ಸುಲಭದಲ್ಲಿ ಸಿಗುವಂತಾಯಿತು. ಅವರನ್ನು ನೆಲಕ್ಕೆ ಉರುಳಿಸಿ ಕಾಲಿನಲ್ಲಿ ತುಳಿದಿದೆ. ಅಷ್ಟರಲ್ಲಿ ಇತರ ಕಾರ್ಮಿಕರು ಆಗಮಿಸಿ ಬೊಬ್ಬೆ ಹಾಕಿದಾಗ ಆನೆ ಅಲ್ಲಿಂದ ತೆರಳಿತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂಧ್ಯಾ ಅವರನ್ನು ಕೂಡಲೇ ಹತ್ತಿರದ ಗೋಣಿಕೊಪ್ಪಲಿನ ಲೋಪಾಮುದ್ರಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತರಾಗಿದ್ದಾಗಿ ವೈದ್ಯರು ತಿಳಿಸಿದರು.
ಓಡುವಾಗ ಬಿದ್ದು ಗಾಯಗೊಂಡಿರುವ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಿರಾಜಪೇಟೆ ಶಾಸಕ ಪೊನ್ನಣ್ಣ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ ದರು. ಸಂಧ್ಯಾ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಸಂಧ್ಯಾ ಅವರ ಮೃತ ಶರೀರವನ್ನು ಇರಿಸಲಾಗಿದ್ದ ಶವಾಗಾರಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳನ್ನು ಸ್ಥಳೀಯರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಆನೆಗಳು ಕಾಡಿನಿಂದ ತೋಟಕ್ಕೆ ಬಂದರೆ ಅದನ್ನು ವಾಪಸ್ ಕಾಡಿಗಟ್ಟುವ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಕೇವಲ ಪರಿಹಾರ ಕೊಡುತ್ತೇವೆ ಎಂದು ಮಾತ್ರ ಹೇಳುತ್ತೀರಿ ಎಂದು ಹೇಳಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಸಂಧ್ಯಾ ಅವರ ಸಾವಿಗೆ ಸಿಎಂ ಡಿಕೆಶಿ ಸಂತಾಪ ಸೂಚಿಸಿದ್ದಾರೆ.


















