ಕಾರ್ಕಳ:ದೀಪಾವಳಿ ಹಬ್ಬದೊಳಗೆ ಪಡಿತರ ಚೀಟಿ ನೀಡದಿದ್ದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುವುದು-ಸಂತೋಷ್ ಅಮೀನ್ ಎಚ್ಚರಿಕೆ
ಕಾರ್ಕಳ:ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ಬಂದದ್ದಿನಿಂದ ಸರ್ಕಾರದ ಅವೈಜ್ಞಾನಿಕ ಆರ್ಥಿಕ ನೀತಿಯಿಂದಾಗಿ ರಾಜ್ಯ ದಿವಾಳಿಯತ್ತ ಸಾಗುತ್ತಿದೆ. ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಿಂದೀಚೆಗೆ ಯಾವುದೇ ಅಭಿವೃದ್ಧಿ ಚಟುವಟಿಕೆ ಮರೀಚಿಕೆಯಾಗಿದೆ.ಪಡಿತರ ವಿತರಣೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿದ್ದರೂ, ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಸರಿಯಾಗಿ ಪಡಿತರ ಅಕ್ಕಿ ನೀಡದೆ ವಿಳಂಭ ಮಾಡುತ್ತಿದೆ. ಯಾವುದೇ ಸುಳ್ಳು ಕಾರಣ ನೀಡಿ ಬಡ ಜನರಿಗೆ ಕಾಂಗ್ರೆಸ್ ಸರ್ಕಾರ ವಂಚನೆ ಮಾಡುತಿದ್ದೆ. ಈ ತಿಂಗಳ ಪಡಿತರ ಅಕ್ಕಿಯನ್ನು ಈವರೆಗೂ ನೀಡಿಲ್ಲ. ಈ ತಿಂಗಳ ಕೊನೆಯಲ್ಲಿ ದೀಪಾವಳಿ ಹಬ್ಬ ಬರಲಿದೆ. ಕನಿಷ್ಠ ಹಬ್ಬದ ಮೊದಲಾದರೂ ಪಡಿತರ ಅಕ್ಕಿಯನ್ನು ನೀಡಬೇಕು. ಒಂದು ವೇಳೆ ಹಬ್ಬದ ಒಳಗೆ ಅಕ್ಕಿ ನೀಡದಿದ್ದರೆ, ಗ್ರಾಮ ಪಂಚಾಯತ್ ಸದಸ್ಯರೆಲ್ಲರೂ ಒಟ್ಟಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಅಮೀನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಪಡಿತರ ಮಾತ್ರವಲ್ಲದೆ, ಸರ್ಕಾರದ ಇನ್ನಿತರ ಸವಲತ್ತಿಗಳೂ ಕೂಡ ಬಡ ಜನರಿಗೆ ನೀಡುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯ ನವರ, ಮಾತೆತ್ತಿದರೆ ನಾವು ಬಡವರ ಪರ, ಬಡವರ ಸರ್ಕಾರ ಎಂದು ಹೇಳುತ್ತಿದ್ದಾರೆ. ಬಡವರ ಹೆಸರು ಹೇಳಿಕೊಂಡು, ಅಧಿಕಾರ ಪಡೆದ ಸಿದ್ದರಾಮಯ್ಯ ಈಗ ಬಡವರನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಪ್ರಸ್ತುತ ತನ್ನ ಕುರ್ಚಿ ಗಟ್ಟಿ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಸ್ಥಳೀಯವಾಗಿ ಸರ್ಕಾರದ ಸವಲತ್ತುಗಳನ್ನು ನಂಬಿಕೊಂಡು ಬರುತ್ತಿರುವ ಬಡ ಜನರ ಪಾಡು ಕಷ್ಟದಾಯಕವಾಗಿದೆ. ಸರ್ಕಾರ ಈ ಕೂಡಲೇ ಎಚ್ಛೆತ್ತುಕೊಳ್ಳದಿದ್ದರೆ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.