ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯ ಬೇಸಿಗೆ ಶಿಬಿರ ಸಮಾರೋಪ
ಕಾರ್ಕಳ:ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ಸತತ 6 ದಿನ ನಡೆದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಸ್ಥೆಯ ಆಪ್ತ ಸಮಾಲೋಚಕರಾದ ಸಿಸ್ಟರ್ ಶ್ಯಾಲೆಟ್ ಸಿಕ್ವೇರಾರವರು ಅತ್ಯಂತ ಕ್ರಿಯಾಶೀಲರಾಗಿ ಭಾಗವಹಿಸಿದ ವಿದ್ಯಾರ್ಥಿಗಳಿಗೂ, ಸಹಕರಿಸಿದ ಶಿಕ್ಷಕ- ಶಿಕ್ಷಕೇತರ ವೃಂದದವರಿಗೂ ಶುಭಾಶಯ ಸಲ್ಲಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶ್ರೀಯುತ ಡೊಮಿನಿಕ್ ಅಂದ್ರಾದೆಯವರು ಶಿಬಿರದಲ್ಲಿ ಕಲಿತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕರಾದ ರುಡಾಲ್ಫ್ ಕಿಶೋರ್ ಲೋಬೋರವರು ಶಿಬಿರದ ಯಶಸ್ಸಿನ ಹಿಂದೆ ಹಲವಾರು ವ್ಯಕ್ತಿಗಳ ಪರಿಶ್ರಮವಿದ್ದು ಉತ್ತಮ ಅನುಭವ ನೀಡಿದೆ ಎಂದರು.
ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಸರಳ ವ್ಯಾಯಮ, ಅಭಿನಯಗೀತೆ, ಜಾದೂ, ಮಣ್ಣಿನ ಹಣತೆ ತಯಾರಿ, ಕೀಬೋರ್ಡ್, ನೃತ್ಯ, ನಾಟಕ, ಏರೋಬಿಕ್, ಚಾರ್ಕೋಲ್ ಪೇಂಟಿಂಗ್, ಅಗ್ನಿಶಾಮಕದಳ ಪ್ರಾತ್ಯಕ್ಷಿಕತೆ, ಕರಕುಶಲ ವಸ್ತು ತಯಾರಿ, ಹೊರಸಂಚಾರ, ಸಂಪನ್ಮೂಲ ವ್ಯಕ್ತಿಗಳಿಂದ ಮೌಲ್ಯಶಿಕ್ಷಣದ ಅರಿವು, ಆರೋಗ್ಯ ಮತ್ತು ದಂತ ತಪಾಸಣೆ ಅಲ್ಲದೇ ಶಾಲಾ ಶಿಕ್ಷಕ-ಶಿಕ್ಷಕಿಯರು ವಿವಿಧ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದರು.
ಪ್ರಾಥಮಿಕ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಲಿನೆಟ್ ಮರೀನಾ ಡಿಸೋಜಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕಿ ಶ್ರೀಮತಿ ದೀಪ್ತಿಯವರು ಶಿಬಿರದ ಅನುಭವ ಹಂಚಿಕೊAಡರು. ಶಿಕ್ಷಕಿಯರಾದ ಶ್ರೀಮತಿ ಜಯಲಕ್ಷ್ಮಿ ಸ್ವಾಗತಿಸಿ, ಸಿಸ್ಟರ್ ಲವೀನಾ ಕ್ರಾಸ್ತ ವಂದಿಸಿ, ಶ್ರೀಮತಿ ನಾಗಲಕ್ಷ್ಮಿ ಮತ್ತು ಶ್ರೀಮತಿ ವಿಜೇತಾ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸಮಾರೋಪ ಸಮಾರಂಭವು ಮುಕ್ತಾಯಗೊಂಡಿತು.