ಮೂಡಬಿದ್ರೆ:-ಮರಾಟಿ ಸಮುದಾಯದ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರ
ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟ (ರಿ ) ಮಂಗಳೂರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಕೆನರಾ ಬ್ಯಾಂಕ್ ಬೆಂಗಳೂರು ಹಾಗೂ ಮರಾಟಿ ಸಮಾಜ ಸೇವಾ ಸಂಘ ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಮರಾಟಿ ಸಮುದಾಯದ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿದ ಚಂಢೀಗಡ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಒಕ್ಕೂಟದ ಗೌರವಾಧ್ಯಕ್ಷರಾದ ಹೆಚ್. ರಾಜೇಶ್ ಪ್ರಸಾದ್ I A S ಅವರು ಯುವ ಜನತೆ ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡು ನಿರ್ಧಿಷ್ಟ ಗುರಿಯೊಂದಿಗೆ ನಿಷ್ಠೆಯ ನಿರಂತರ ಪ್ರಯತ್ನದಿಂದ ಜೀವನದಲ್ಲಿ ಅದ್ಭುತ ಯಶಸ್ಸನ್ನು ಗಳಿಸಲು ಸಾಧ್ಯವೆಂದರು.
ತಮ್ಮ ಸ್ವಾನುಭವದ ಉದಾಹಾರಣೆಗಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಯಾವ ರೀತಿಯಲ್ಲಿ ತಯಾರಿ ನಡೆಸಬೇಕು ಎನ್ನುವುದನ್ನು ತಮ್ಮ ಸಂವಾದ ಕಾರ್ಯಕ್ರಮದಲ್ಲಿ ತಿಳಿಸುತ್ತಾ, ಸಮುದಾಯದ ಯುವ ಜನಾಂಗ ಇದಕ್ಕೆ ಬೇಕಾದ ಸೂಕ್ತ ತರಬೇತಿಯನ್ನು ಪಡೆದುಕೊಂಡು ಉನ್ನತ ಶೈಕ್ಷಣಿಕ ಸಾಧನೆಯೊಂದಿಗೆ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟ (ರಿ ) ಮಂಗಳೂರು ಇದರ ಅಧ್ಯಕ್ಷರಾದ ಡಾ. ಕೆ.ಸುಂದರ ನಾಯ್ಕ್ ಮಾತನಾಡಿ ಉದಾತ್ತ ಆಶಯದೊಂದಿಗೆ ಬದುಕಿನ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿದಾಗ ವೃತ್ತಿಜೀವನ ಹಾಗೂ ಸಾಮಾಜಿಕ ಜೀವನ ಎರಡರಲ್ಲಿಯೂ ಸಾರ್ಥಕತೆಯನ್ನು ಪಡೆಯಬಹುದು ಎಂದರು. ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ರಾಮ ನಾಯ್ಕ್ ಕೆ. ಅವರನ್ನು ಸಮುದಾಯದ ವತಿಯಿಂದ ಸನ್ಮಾನಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿದ್ದ ವ್ಯಕ್ತಿತ್ವವಿಕಸನ ತರಬೇತುದಾರರಾದ ಕೊಂಡಳ್ಳಿ ಪ್ರಭಾಕರ್ ಶೆಟ್ಟಿಯವರು ವ್ಯಕ್ತಿತ್ವ ವಿಕಸನ ಹಾಗೂ ಜೀವನ ಮೌಲ್ಯಗಳು ಬಗ್ಗೆ ತಿಳಿಸುತ್ತಾ ಪರಿಪೂರ್ಣ ಸಿದ್ದತೆಯೊಂದಿಗೆ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಆಯೋಜಿಸುವ ಬಗೆಯನ್ನು ತಿಳಿಸಿದರು.
ವೇದಿಕೆಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸು ನಾಯ್ಕ್, ಮೂಡಬಿದ್ರೆ ಮರಾಟಿ ಸಂಘದ ಅಧ್ಯಕ್ಷರಾದ ಶಂಕರ್ ನಾಯ್ಕ ಉಪಸ್ಥಿತರಿದ್ದರು.ಶೈಕ್ಷಣಿಕ ಕಾರ್ಯಾಗಾರದಲ್ಲಿ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿದ್ದರು.
ಶೋಭಾ ಮತ್ತು ತಂಡದವರು ಪ್ರಾರ್ಥಿಸಿ ಒಕ್ಕೂಟದ ಕಾರ್ಯಧ್ಯಕ್ಷರಾದ ರಾಮಚಂದ್ರ ಕೆಂಬಾರೆ ಸ್ವಾಗತಿಸಿ ವಾಸು ನಾಯ್ಕ್ ವಂದಿಸಿದರು. ಒಕ್ಕೂಟದ ರಾಜ್ಯ ಸಂಘಟಕ ಪ್ರವೀಣ್ ಕುಮಾರ್ ಮುಗುಳಿ ಅತಿಥಿಗಳನ್ನು ಪರಿಚಯಿಸಿದರು. ಒಕ್ಕೂಟದ ಜೊತೆ ಕಾರ್ಯದರ್ಶಿ ಶ್ರೀ ಪ್ರಕಾಶ್ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು.















