ಕಾರ್ಕಳ:ಎಂ.ಪಿ.ಎಂ. ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ
ಕಾರ್ಕಳ:ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಇಲ್ಲಿನ 2024 25 ನೇ ಶೈಕ್ಷಣಿಕ ವರ್ಷದ ಕಾಲೇಜು ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾಲೇಜಿನ
ಆವರಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ, ಕರ್ನಾಟಕ ಸರಕಾರದ ಮಾಜಿ ಸಚಿವ, ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸುನಿಲ್ ಕುಮಾರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಎಂಪಿಎಂ ಕಾಲೇಜಿನಲ್ಲಿಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ ಅತ್ಯಂತ ಯಶಸ್ಸು ಸಿಕ್ಕಿದ್ದು, ಆ ಪರಂಪರೆಯನ್ನು ವಿದ್ಯಾರ್ಥಿಗಳು ಮುಂದುವರಿಸಿಕೊಂಡು ಹೋಗುವ ಜೊತೆಗೆ ಸಂಸ್ಥೆಯಲ್ಲಿ ಒಬ್ಬರನ್ನೊಬ್ಬರು ಅರಿತು ಬಾಳುವಂತಾಗಲಿ.ಯುವಶಕ್ತಿ ಒಗ್ಗಟ್ಟಿನಿಂದ ಜಗತ್ತಿನ ಸವಾಲು ಎದುರಿಸುವಲ್ಲಿ, ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ
ಸಮಾಜಮುಖಿ ಚಟುವಟಿಕೆಗಳಲ್ಲಿ ಭಾಗವಹಿಸಲು ಒಂದು ಪೂರ್ಣ ಸಮಾಜ ನಿರ್ಮಾಣ ಮಾಡುವಲ್ಲಿ ಪಾತ್ರವಹಿಸಲು, ಈ ಕಾಲೇಜಿನ ಜೀವನ ಎಲ್ಲ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ರವಿರಾಜ್ ಶೆಟ್ಟಿ, ಕನ್ನಡ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು,ಕನ್ನಡ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು, ಮಾತನಾಡಿ ಕಾಲೇಜಿನ ಯಶಸ್ಸಿಗೆ ಅದರ ಆಕಾರ ಮತ್ತು ವಿಸ್ತಾರಗಳಿಗಿಂತ ಅಲ್ಲಿನ ಐದು ಸಂಪತ್ತುಗಳು ಅಗತ್ಯವಿದ್ದು ಅವುಗಳೆಂದರೆ ಕರ್ತವ್ಯ ನಿರತ ಸಿಬ್ಬಂದಿ, ದೂರದರ್ಶಿತ್ವದ ಪ್ರಾಂಶುಪಾಲರು, ಶಿಸ್ತಿನ ವಿದ್ಯಾರ್ಥಿಗಳು, ಕಾಳಜಿ ಉಳ್ಳ ಪಾಲಕರು, ಕಾಲೇಜಿನ ಸಾಂಸ್ಕೃತಿಕ ರೂವಾರಿಗಳಾದ ಹಳೆವಿದ್ಯಾರ್ಥಿಗಳು ಇರಬೇಕು, ಈ ಎಲ್ಲಾ ಅಂಶಗಳು ಈ ಕಾಲೇಜಿನಲ್ಲಿ ಮೇಳೈಸಿ ಯಶಸ್ವಿಗೆ ಕಾರಣವಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ರೈ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ, ಅಧ್ಯಕ್ಷೀಯ ನುಡಿಗಳಲ್ಲಿ ಮಾತನಾಡಿ ಕ್ಷೇತ್ರದ ಶಾಸಕರ ಮಾರ್ಗದರ್ಶನ ಹಾಗು ಎಲ್ಲರ ಸಹಕಾರದೊಂದಿಗೆ ಕಾಲೇಜು ಇನ್ನಷ್ಟು ಹೊಸತನ ಕಂಡುಕೊಂಡುಸಾಧನೆಯತ್ತ ಸಾಗಲಿದೆ ಎಂಬ ಮಾತುಗಳನ್ನಾಡಿ, ವಿದ್ಯಾರ್ಥಿಗಳಿಗೆ ವಾರ್ಷಿಕೋತ್ಸವದ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ 2024ರಲ್ಲಿ ಕಾಲೇಜಿನಿಂದ ಬೇರೆಡೆಗೆ ವರ್ಗಾವಣೆಗೊಂಡ ಕಾಲೇಜಿನ ಅಧ್ಯಾಪಕರುಗಳಾದ ಡಾ.ವಿದ್ಯಾಧರ ಹೆಗ್ಡೆ, ಡಾ. ಗಣೇಶ್, ಶ್ರೀ ವೆಂಕಟೇಶ್, ಹಾಗೂ ಕಾಲೇಜಿನ ಯಕ್ಷಗಾನ ಶಿಕ್ಷಕರಾದ ಶ್ರೀ ಮಹಾವೀರ ಪಾಂಡಿಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು,ಪೋಷಕರು, ಪೂರ್ವ ವಿದ್ಯಾರ್ಥಿಗಳು, ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡರು.ಕಾಲೇಜಿನ ಸಾಂಸ್ಕೃತಿಕ ಸಂಘದ ಸಂಚಾಲಕರಾದ ಮೈತ್ರಿ ಬಿ. ವಂದನಾರ್ಪಣೆ ನಿರ್ವಹಿಸಿದರು.