ಕಾಲ್ತುಳಿತದ ಸಾವಿನ ಮೇಲೆ ವಿಪಕ್ಷಗಳು ರಾಜಕೀಯ ಮಾಡುತ್ತಿವೆ – ಉಡುಪಿ ಜಿಲ್ಲಾ ಕಾಂಗ್ರೆಸ್
ಇತ್ತೀಚಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ವಿಜಯದ ಸಂಭ್ರಮಾಚರಣೆಯಲ್ಲಿ ಅನಿರೀಕ್ಷಿತ ಕಾಲ್ತುಳಿತದಿಂದ ಉಂಟಾದ ಸಾವುಗಳು ಬೇಜಾರಿನ ಘಟನೆ. ಆದಾಗ್ಯೂ ವಿಪಕ್ಷ ಬಿಜೆಪಿ ಇದನ್ನೇ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರ ರಾಜೀನಾಮೆ ಕೇಳುವ ಮೂಲಕ ಸಾವಿನ ಶೋಕಾಂಗಣದಲ್ಲಿ ಮತ ಹೆಕ್ಕುವ ರಾಜಕೀಯ ಮಾಡುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
2024 ಜುಲೈಯಲ್ಲಿ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಬೋಲೇಬಾಬಾ ಕಾರ್ಯಕ್ರಮದಲ್ಲಿ ನಡೆದ ಕಾಲ್ತುಳಿದಲ್ಲಿ ೧೨೧ ಜನರು ಹಾಗೂ ಈ ಭಾರಿಯ ಕುಂಭಮೇಳ ಪ್ರಯಾಗ್ ರಾಜ್ ನಲ್ಲಿ ಒಂದು ಲೆಕ್ಕಾಚಾರದ ಪ್ರಕಾರ 180 ಕ್ಕೂ ಹೆಚ್ಚು ಯಾತ್ರಿಕರು ಮಡಿದಾಗ ಅಲ್ಲಿನ ಮುಖ್ಯಮಂತ್ರಿ ಯೋಗೀ ಆದಿತ್ಯನಾಥ್, 2025 ಮೇ ತಿಂಗಳಲ್ಲಿ ಗೋವಾದ ಶಿರಬಾಗ್ ದೇಗುಲದಲ್ಲಾದ ಕಾಲ್ತುಳಿತದಲ್ಲಿ 8ಕ್ಕೂ ಹೆಚ್ಚು ಭಕ್ತರ ಸಾವು ಸಂಭವಿಸಿ ರಾಯ ಅಲ್ಲಿನ ಮುಖ್ಯಮಂತ್ರಿ ಪ್ರಮೋದ್ ಸಾವಂತ್, 2025 ಜನವರಿಯಲ್ಲಿ ತಿರುಪತಿಯಲ್ಲಿ ನಡೆದ ಕಾಲ್ತುಳಿತದಲ್ಲಿ 6ಕ್ಕೂ ಹೆಚ್ಚು ಭಕ್ತರು ಅಸುನೀಗಿದಾಗ ಅಲ್ಲಿನ ಮುಖ್ಯಮಂತ್ರಿ ಕೇಂದ್ರದಲ್ಲಿ ಇವರ ಪಾಲುದಾರ ಚಂದ್ರಬಾಬು ನಾಯ್ಡು, 2022 ನವಂಬರದಲ್ಲಿ ಗುಜರಾತಿನ ಮೋರ್ಭಿಯಲ್ಲಿ ತೂಗು ಸೇತುವೆ ಮುರಿದು 130ಕ್ಕೂ ಹೆಚ್ಚು ಜನರು ಮೃತಪಟ್ಟಾಗ ಅಲ್ಲಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಆದಿಯಾಗಿ ಅವರದ್ದೇ ಪಕ್ಷದ ಆಡಳಿತದ ರಾಜ್ಯಗಳಲ್ಲಿ ನಡೆದ ಈ ಮಹಾ ದುರಂತಗಳಿಗೆ ಸರಕಾರಗಳನ್ನು ಹೊಣೆಯಾಗಿಸಿ ಅಲ್ಲಿನ ಮುಖ್ಯಮಂತ್ರಿಗಳ ರಾಜೀನಾಮೆ ಕೇಳದ ಬಿಜೆಪಿ ನಾಯಕರಿಗೆ ರಾಜ್ಯ ಸರಕಾರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರ ರಾಜೀನಾಮೆ ಕೇಳುವ ನೈತಿಕ ಹಕ್ಕಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಪುಲ್ವಾಮಾದಲ್ಲಿ ಆಳುವ ಕೇಂದ್ರ ಸರಕಾರದ ಗುಪ್ತಚರ ಮಾಹಿತಿ ವೈಪಲ್ಯದಿಂದಾದ ಉಗ್ರಗಾಮಿಗಳ ಆಕ್ರಮಣದಿಂದ ದೇಶ ಕಾಯುವ 40 ಸೈನಿಕರ ಹತ್ಯೆ ಹಾಗೂ ಅದೇ ಸರಕಾರದ ಭದ್ರತಾ ವೈಪಲ್ಯದಿಂದ ಫಹಲ್ಗಾಮ್ ನಲ್ಲಿ 26ಹೆಣ್ಣು ಮಕ್ಕಳ ಗಂಡಂದಿರ ದಾರುಣ ಹತ್ಯೆಯಾಗಿ ಅವರ ಹಣೆಯ ಸಿಂಧೂರ ಅಳಿಸಿ ಹೋದಾಗ ಹೊಣೆ ಹೊತ್ತ ದೇಶದ ಪ್ರಧಾನಿಯ ರಾಜೀನಾಮೆ ಕೇಳ ಬೇಕಿತ್ತು. ಅಂದು ಬೇಡವಾದ ರಾಜೀನಾಮೆಯ ನಾಟಕ ಇಂದು ಕರ್ನಾಟಕದ ಪರಿಸ್ಥಿತಿಗೆ ಬೇಕಾದದ್ದು ಬಿಜೆಪಿಯ ಸ್ವಹಿತಾಸಕ್ತಿಯ ರಾಜಕೀಯ ಷಡ್ಯಂತ್ರಕ್ಕೆ ಸಾಕ್ಷಿ ಆಗಿದೆ. ಇದರ ಹಿಂದೆ ಆಂತರೀಕ ಕಚ್ಚಾಟದಿಂದ ಬೆಂದು ಹೋಗಿರುವ ರಾಜ್ಯ ಬಿಜೆಪಿಯ ಅಸ್ತಿತ್ವದ ಪ್ರಶ್ನೆಯೂ ಅಡಗಿದೆ ಎಂದು ಕಾಂಗ್ರೆಸ್ ವ್ಯಾಖ್ಯಾನಿಸಿದೆ.
ದೇಶದಲ್ಲಿ ಇಂತಹ ದುರಂತಗಳು ಹೊಸತೇನಲ್ಲ. ಇದನ್ನು ಅಳುವ ಸರಕಾರಗಳ ಆಡಳಿತಾತ್ಮಕ ವೈಫಲ್ಯ ಎಂದು ವ್ಯಾಖ್ಯನಿಸಲಾಗದು. ಸರಕಾರಗಳ ಮುಖ್ಯಸ್ಥರ ರಾಜೀನಾಮೆ ಇದಕ್ಕೆ ಪರಿಹಾರವೂ ಅಲ್ಲ. ಆದರೆ ದುರಂತಗಳಿಗೆ ಕಾರಣವಾದ ಅಂಶವನ್ನು ಅನ್ವೇಶಿಸಿ ತಪ್ಪತಸ್ಥರನ್ನು ಶಿಕ್ಷಿಸಿ ಮುಂದೆ ಇಂತಹ ಇಂತಹ ಘಟನೆಗಳು ನಡೆಯದಂತೆ ನೋಡುವುದು ಸರಕಾರಗಳ ಕರ್ತವ್ಯ. ಮುಖ್ಯವಾಗಿ ಜನರ ಅಂಧ ಅಭಿಮಾನದ ಭಾವನಾತ್ಮಕ ಉನ್ಮಾದಕತೆ ಮತ್ತು ಕಾರ್ಯಕ್ರಮ ಆಯೋಜಕರ ನಿರ್ವಹಣಾ ವೈಪಲ್ಯ ಇಂತಹ ಅನಿರೀಕ್ಷಿತ ಘಟನೆಗಳಿಗೆ ಕಾರಣವಾಗುತ್ತದೆ. ಇಂತಹ ಘಟನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಖಂಡನೀಯ. ಅದೇನಿದ್ದರೂ ಇಂತಹ ದುರ್ಘಟನೆ ರಾಜ್ಯದಲ್ಲಿ ಮರುಕಳಿಸದಿರಲಿ ಎನ್ನುವುದೇ ಕಾಂಗ್ರೆಸ್ ಆಶಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.