ಕ್ರೈಸ್ಟ್ ಕಿಂಗ್: ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ
ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೀಡಲಾಗುವ ವಿವಿಧ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೂಡಬಿದಿರೆಯ ಪಿಂಗಾರ ಕಲಾವಿದೆರ್ ಕಲಾಸಂಸ್ಥೆಯ ನಿರ್ದೇಶಕ ರಂಗಭೂಷಣ ಮಣಿ ಕೋಟೆಬಾಗಿಲು ಅವರು ದೀಪ ಬೆಳಗಿ ಸಂಸ್ಥೆಯ ವಿವಿಧ ಪಠ್ಯೇತರ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ‘ಸಾಂಸ್ಕೃತಿಕ ಚಟುವಟಿಕೆಗಳು ಮನುಷ್ಯನ ಬೌದ್ಧಿಕ ಮತ್ತು ಮಾನಸಿಕ ವಿಕಸನಕ್ಕೆ ಸಹಕಾರಿ. ಇಂದಿನ ಮಕ್ಕಳು ಈ ಸಮಾಜದಲ್ಲಿ ಭವಿಷ್ಯದ ಸಾಧಕರು. ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರು ಮಕ್ಕಳ ಸಾಂಸ್ಕೃತಿಕ ಆಸಕ್ತಿಗಳಿಗೆ ನೀರೆರೆದು ಪೋಷಿಸಬೇಕು’ ಎಂದರು.
ಸಂಸ್ಥೆಯ ಮುಖ್ಯ ಶಿಕ್ಷಕರಾದ ರುಢಾಲ್ಫ್ ಕಿಶೋರ್ ಲೋಬೊ ಅವರು ಮಾತನಾಡಿ, ‘ಪ್ರತಿಯೊಂದು ಮಗುವೂ ವಿಶಿಷ್ಟವಾದ ಪ್ರತಿಭೆಯನ್ನು ಹೊಂದಿದ್ದು ನುರಿತ ತರಬೇತುದಾರರಿಂದ ಅಂತಹ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು’ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ನ ಸದಸ್ಯರಾದ ಡಾ.ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ಜಗತ್ತಿನ ಯಾವುದೇ ಸೂಪರ್ ಕಂಪ್ಯೂಟರ್ ಕೂಡಾ ಮನುಷ್ಯನ ಮೆದುಳಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲ. ನಾವು ಕಲೆಯಲ್ಲಿ ದೇವರನ್ನು ಕಾಣಬೇಕು. ಬೆಲೆ ಕಟ್ಟಲಾಗದ ಪ್ರತಿಭೆಯೆಂದರೆ ಕಲೆ” ಎಂದರು.
ಸಂಸ್ಥೆಯ ವಿವಿಧ ಚಟುವಟಿಕೆಗಳ ತರಬೇತು ಸಂಪನ್ಮೂಲ ವ್ಯಕ್ತಿಗಳಾದ ಸಂಗೀತ ಶಿಕ್ಷಕ ವಿದ್ವಾನ್ ಯಶವಂತ್ ಎಂ.ಜಿ, ಭರತನಾಟ್ಯ ಗುರುಗಳಾದ ವಿದ್ವಾನ್ ಸುಬ್ರಹ್ಮಣ್ಯ ನಾವಡ, ಯಕ್ಷಗಾನ ತರಬೇತುದಾರ ಚಿನ್ನಯ್ಯ ದೇವಾಡಿಗ, ಬ್ಯಾಂಡ್ ತರಬೇತುದಾರರಾದ ಜಾನ್ ರಫಾಯಲ್ ಪುರ್ತಾದೊ, ಕೀಬೋರ್ಡ್ ತರಬೇತುದಾರರಾದ ಜೇಸನ್ ರೆಬೆಲ್ಲೊ, ಕರಾಟೆ ಶಿಕ್ಷಕ ಸತೀಶ್ ಬೆಳ್ಮಣ್, ಚೆಸ್ ತರಬೇತುದಾರರಾದ ಸೌಂದರ್ಯ, ಚೆಂಡೆ ತರಬೇತುದಾರರಾದ ದುರ್ಗೇಶ್, ನಾಟಕ ತರಬೇತುದಾರರರಾದ ಲತೀಫ್ ಸಾಣೂರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.