ಉಡುಪಿ ಮತ್ತು ಮಣಿಪಾಲ ಜ್ಞಾನಸುಧಾ ಪ.ಪೂ.ಕಾಲೇಜುಗಳ ಪ್ರಾರಂಭೋತ್ಸವ
ಅರ್ಹ ವಿದ್ಯಾರ್ಥಿಗಳಿಗೆ 47.87 ಲಕ್ಷ ರೂ. ವಿದ್ಯಾರ್ಥಿ ವೇತನ
ಉಡುಪಿ ಮತ್ತು ಮಣಿಪಾಲ ಜ್ಞಾನಸುಧಾ ಪ.ಪೂ. ಕಾಲೇಜುಗಳ ವತಿಯಿಂದ ಜಂಟಿಯಾಗಿ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ ಮಣಿಪಾಲ ಮತ್ತು ಉಡುಪಿ ಜ್ಞಾನಸುಧಾ ಕಾಲೇಜಿಗೆ ದಾಖಲಾತಿ ಹೊಂದಿದ 119 ಅರ್ಹ ವಿದ್ಯಾರ್ಥಿಗಳಿಗೆ 47.87 ಲಕ್ಷ ವಿದ್ಯಾರ್ಥಿವೇತನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ ಯವರು ಮಾತನಾಡಿ, ಭಗವಂತನ ಸೃಷ್ಟಿಯಲ್ಲಿ ನಾವೆಲ್ಲರೂ ವಿಭಿನ್ನರು. ನಮ್ಮಲ್ಲಿರುವ ವಿಶೇಷತೆಯನ್ನು ಅರಿತು, ಕಾಯಕವೇ ಕೈಲಾಸ ಎಂಬುದನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು. ಶಿಕ್ಷಣ ಒಂದು ತಪಸ್ಸು ಇದ್ದಂತೆ ಅದನ್ನು ಸಾಧಿಸುವ ಮನೋಧೈರ್ಯ ನಮ್ಮಲ್ಲಿರಬೇಕು. ತಮ್ಮ ಸಾಧನೆಯನ್ನು ಹೆತ್ತವರ ಪಾದಗಳಿಗೆ ಅರ್ಪಿಸಿ ಅದರಿಂದ ಸಿಗುವ ಪರಮಸುಖವನ್ನು ಅನುಭವಿಸುವ ಶ್ರೇಷ್ಠ ಮಕ್ಕಳೆನಿಸಿಕೊಳ್ಳಿ ಎಂದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್ ಅಕಾಡೆಮಿಕ್ಸ್ ಆಗಿರುವ ಡಾ. ಮಿಥುನ್ ಯು ಅವರು ಎರಡು ವರ್ಷಗಳ ಶೈಕ್ಷಣಿಕ ಚಟುವಟಿಕೆಗಳು ಸಾಗುವ ಬಗೆಯನ್ನು ವಿವರಿಸಿದರು. ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಕೋ-ಆರ್ಡಿನೇಟರ್ ಆಗಿರುವ ಸಂದೀಪ್ ವಿವಿಧ ಪ್ರವೇಶ ಪರೀಕ್ಷೆಗಳ ತರಬೇತಿಯ ಬಗ್ಗೆ ಮಾಹಿತಿ ನೀಡಿದರು.
ಮಣಿಪಾಲ ಜ್ಞಾನಸುಧಾ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿಯವರು ಸರ್ವರನ್ನು ಸ್ವಾಗತಿಸಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಓ. ದಿನೇಶ್ ಎಂ ಕೊಡವೂರು, ಉಡುಪಿ ಜ್ಞಾನಸುಧಾದ ಪ್ರಾಂಶುಪಾಲರಾದ ಸಂತೋಷ್, ಎರಡು ಸಂಸ್ಥೆಗಳ ಉಪಪ್ರಾಂಶುಪಾಲರುಗಳು ಮತ್ತಿತರರು ಉಪಸ್ಥಿತರಿದ್ದರು. ಆಂಗ್ಲಭಾಷಾ ಉಪನ್ಯಾಸಕಿ ಶಮಿತಾ ಕಾರ್ಯಕ್ರಮ ನಿರೂಪಿಸಿದರು.