ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ), ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘ ಉಡುಪಿ ಜಿಲ್ಲೆ ಮತ್ತು ಉಡುಪಿ ಜ್ಞಾನಸುಧಾ ಪ.ಪೂ. ಕಾಲೇಜು ನಾಗಬನ ಕ್ಯಾಂಪಸ್ ಕಡಿಯಾಳಿ ಇವರ ಸಂಯುಕ್ತ ಆಶ್ರಯದಲ್ಲಿ, ಉಡುಪಿ ಜಿಲ್ಲಾ ಅನುದಾನಿತ ಮತ್ತು ಅನುದಾನರಹಿತ ಪ್ರಾಂಶುಪಾಲರ ಸಂಘ ಆಯೋಜಿಸಿದ ಆಂಗ್ಲ ಭಾಷಾ ವಿಷಯದ ಶೈಕ್ಷಣಿಕ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ)ಯ ಉಪನಿರ್ದೇಶಕ ಮಾರುತಿ ವಿದ್ಯಾರ್ಥಿಗಳಲ್ಲಿ ಹೊಂದಾಣಿಕೆ, ಪ್ರಾಮಾಣಿಕತೆ, ನೈತಿಕತೆಗಳನ್ನು ಬೆಳೆಸುವ ಉಪನ್ಯಾಸಕರಾಗಿರಿ. ಈ ಕಾರ್ಯಾಗಾರದ ಸದುಪಯೋಗವನ್ನು ಪಡೆದು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿರಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಅನುದಾನಿತ ಮತ್ತು ಅನುದಾನರಹಿತ ಪ್ರಾಂಶುಪಾಲರ ಸಂಘದ ಅಧ್ಯಕ್ಷ ದಿನೇಶ್ ಎಂ. ಕೊಡವೂರು ಮಾತನಾಡಿ ಶೈಕ್ಷಣಿಕ ಕಾರ್ಯಾಗಾರಗಳು ಕೇವಲ ಶೈಕ್ಷಣಿಕ ವಿಷಯಕ್ಕೆ ಮೀಸಲಾಗದೆ ಅದು ಸಾಮಾಜಿಕ ಸೇವೆ, ಪ್ರತಿಭೆಗಳ ಅನಾವರಣ ಮುಂತಾದ ಕಾರ್ಯಕ್ರಮಗಳಿಗೆ ವಿಸ್ತರಿಸಬೇಕು. ಎಲ್ಲಾ ಜಿಲ್ಲೆಗಳಲ್ಲೂ ಏಕರೂಪದ ಮೌಲ್ಯಮಾಪನ ವ್ಯವಸ್ಥೆ ಜಾರಿಯಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಉಡುಪಿ ಜ್ಞಾನಸುಧಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ಸಂತೋಷ್ ಪ್ರಪಂಚದ ಯಾವ ಭಾಗಗಳಿಂದ ಜ್ಞಾನ ಹರಿದು ಬಂದರೂ ಅದನ್ನು ಸ್ವೀಕರಿಸಬೇಕು. ಆದರೆ ಆ ಜ್ಞಾನವನ್ನು ಸ್ವೀಕರಿಸಲು ಆಂಗ್ಲಭಾಷೆ ಬಹುಮುಖ್ಯ. ಈ ಭಾಷೆಯ ಕಲಿಕೆ ಯಶಸ್ಸಿನ ಮೊದಲ ಹೆಜ್ಜೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು. ನೂತನ ಅಧ್ಯಕ್ಷರಾಗಿ ಶ್ರೀಮತಿ ಶಾರದಾ ಹೊಳ್ಳ, ಉಪಾಧ್ಯಕ್ಷರಾಗಿ ಥೋಮಸ್, ಕಾರ್ಯದರ್ಶಿಗಳಾಗಿ ಜೋತ್ಸ್ನ ಪೈ, ಸಹಕಾರ್ಯದರ್ಶಿಯಾಗಿ ಸತ್ಯನಾರಾಯಣ, ಖಜಾಂಚಿಯಾಗಿ ರಾಜೇಶ್, ಸಹಖಜಾಂಚಿಯಾಗಿ ಶಮಿತಾ, ಸದಸ್ಯರಾಗಿ ಅನುಪಮಾ, ಜಿನ್ಸಿ, ಸೌದಾಮಿನಿ, ಪ್ರಕಾಶ್, ಸೌರಭ್ ಆಯ್ಕೆಯಾದರು.
ಈ ಕಾರ್ಯಾಗಾರದಲ್ಲಿ ಮಧು ಜಿ ಎಮ್, ಆಂಗ್ಲ ಭಾಷಾ ಉಪನ್ಯಾಸಕರು ಸರಕಾರಿ ಪ.ಪೂ. ಕಾಲೇಜು ಚಿಕ್ಕಮಗಳೂರು, ಓಂಕಾರಮೂರ್ತಿ ಜಿ ಟಿ, ಆಂಗ್ಲ ಭಾಷಾ ಉಪನ್ಯಾಸಕರು ಸರಕಾರಿ ಪ.ಪೂ. ಕಾಲೇಜು ತರಿಕೆರೆ ಚಿಕ್ಕಮಗಳೂರು ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಆಂಗ್ಲ ಭಾಷಾ ಉಪನ್ಯಾಸಕರ ಸಂಘದ ಅದ್ಯಕ್ಷರಾದ ಶಿವಪ್ರಸಾದ್ ಶೆಟ್ಟಿಗಾರ್ ಸ್ವಾಗತಿಸಿ, ಕಾರ್ಯದರ್ಶಿಗಳಾದ ಗಂಗಾಧರ್ ವಿ ಎ ವಂದಿಸಿದರು ಉಡುಪಿ ಜ್ಞಾನಸುಧಾ ಪ.ಪೂ. ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ಕೀರ್ತಿ ಹರೀಶ್ ನಿರೂಪಿಸಿದರು.