ಹೆಮಾಡಿಯ ಕಬೈಲು ಎಂಬಲ್ಲಿನ ಮನೆಯೊಂದರಲ್ಲಿ ಕನ್ಯಾನ ಗ್ರಾಮದ ನಿವಾಸಿ ಕೊರಗ ಸಮುದಾಯದ ನಾಗ (65) ಅವರನ್ನು 30 ವರ್ಷಗಳಿಂದ ಜೀತದಾಳಾಗಿಸಿ ಸಂಬಳವೂ ಕೊಡದೆ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿ ರಜನಿ ಶೆಟ್ಟಿಯನ್ನು ಬಂಧಿಸಿದ್ದಾರೆ.
ಪ್ರಕರಣದ ಕುರಿತು ತನಿಖೆ ಕೈಗೊಂಡ ಕುಂದಾಪುರ ಡಿವೈಎಸ್ಪಿ ಹೆಚ್. ಡಿ. ಕುಲಕರ್ಣಿ ನೇತೃತ್ವದ ಪೊಲೀಸರ ತಂಡವು, ಆರೋಪಿಯನ್ನು ಬಂಧಿಸಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಯನ್ನು ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
‘ಇನ್ನು ಘಟನೆ ನಡೆದ ಹೆಮ್ಮಾಡಿಯ ಕಬ್ಬೆಲಿನ ಮನೆಗೆ ಬುಧವಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್. ನಾಯಕ್ ಭೇಟಿ ನೀಡಿ, ಮಾಹಿತಿ ಪಡೆದರು. ಅವರೊಂದಿಗೆ ಕುಂದಾಪುರ ಡಿವೈಎಸಿ ಹೆಚ್. ಡಿ. ಕುಲಕರ್ಣಿ, ಪೊಲೀಸರು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು, ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಕುಂದಾಪುರ ಉಪತಹಶಿಲ್ದಾರ್, ಸ್ಥಳೀಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಂತ್ರಸ್ತ ನಾಗ ಅವರಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ ಕ್ರಮಕ್ಕೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ.
ಆ ಮನೆಯಲ್ಲಿ ದನ, ಎಮ್ಮೆ ಸೆಗಣಿ ತೆಗೆದು, ಮನೆಯ ಶೌಚಾಲಯ ಸ್ವಚ್ಛತೆ, ಮಾಡಿಸಿಕೊಳ್ಳುತ್ತಿದ್ದು ಉಳಿದುಕೊಳ್ಳಲು ದನದ ಕೊಟ್ಟಿಗೆಯನ್ನೇ ನೀಡಲಾಗಿತ್ತು. ತಿಂಡಿ, ತಟ್ಟೆ ಬಟ್ಟೆ ಎಲ್ಲ ಅಲ್ಲಿಯೇ ಇಡುವಂತೆ ಒತ್ತಾಯಿಸುತ್ತಿದ್ದರು.ಊಟವನ್ನೂ ಅಲ್ಲಿಯೇ ಮಾಡಬೇಕಿತ್ತು. 30 ವರ್ಷಗಳಿಂದ ಬಲವಂತವಾಗಿ ಜೀತದಾಳಾಗಿಸಿ ದುಡಿಸಿಕೊಳ್ಳಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿತ್ತು.













