
ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಮೇಲೆ ಕೋರ್ಟ್ ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿಯೇ ಶೂ ಎಸೆಯುವ ಪ್ರಯತ್ನ ನಡೆದಿರುವುದು ಖಂಡನೀಯ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ತಿಳಿಸಿದ್ದಾರೆ.
ಈ ಘಟನೆಯು ನ್ಯಾಯಾಂಗದ ಮೇಲಿನ ಕೋಮುವಾದಿ ಶಕ್ತಿಗಳ ದಾಳಿಯಾಗಿದೆ, ಸಾರ್ವಬೌಮ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಈ ಘಟನೆಯು ಕಪ್ಪು ಚುಕ್ಕೆಯಾಗಿದೆ, ಭಾರತದ ಮುಖ್ಯ ನ್ಯಾಯಮೂರ್ತಿಗಳ ಮೇಲೆಯೇ ಶೂ ಎಸೆತದ ಘಟನೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ತಲೆ ತಗ್ಗಿಸುವಂತೆ ಮಾಡಿದೆ ಎಂದಿದ್ದಾರೆ.
ಮಾನ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಪ್ರಯತ್ನಿಸಿದವನು ವೃತ್ತಿಯಲ್ಲಿ ವಕೀಲನಾಗಿದ್ದು, ಆತ ಬಿಜೆಪಿ ಪರವಾಗಿರುವ ಸಂಘಟನೆಗಳ ಸದಸ್ಯನಾಗಿದ್ದಾನೆ ಎಂದು ತಿಳಿದು ಬಂದಿದೆ, ಬಿಜೆಪಿ ಪರವಾಗಿರುವ ವೈಚಾರಿಕತೆಯನ್ನು ಮುಂದಿಟ್ಟುಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ. ಬಿಜೆಪಿ ಕೇಂದ್ರದಲ್ಲಿ ಆಡಳಿತಕ್ಕೆ ಬಂದಾಗಿನಿಂದಲೂ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದೆ, ಬಿಜೆಪಿ ಪರವಾಗಿರುವ ಸಂಘಟನೆಗಳ ಅಸಹಿಷ್ಣುತೆ ಮಿತಿ ಮೀರಿದ್ದು, ಇದಕ್ಕೆ ಕಡಿವಾಣ ಹಾಕಬೇಕಿರುವ ಕೇಂದ್ರ ಸರ್ಕಾರವೇ ಇದನ್ನು ಪೋಷಿಸುತ್ತಿರುವಂತಿದೆ.
ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ಘಟನೆಯನ್ನು ವಿರೋದ ಪಕ್ಷಗಳು ಖಂಡಿಸಿವೆ, ಆದರೆ ಆಡಳಿತ ಪಕ್ಷ ಬಿಜೆಪಿಯಾಗಲಿ, ಅದರ ಸಂಸದರು, ಕೇಂದ್ರ ಮಂತ್ರಿಗಳಾಗಲಿ, ಶಾಸಕರಾಗಲಿ ಖಂಡಿಸದೇ ಮೌನವಾಗಿರುವುದರ ಅರ್ಥ ಮೌನಂ ಸಮ್ಮತಿ ಲಕ್ಷಣಮ್ ಆಗಿದೆಯೇ ಎಂದವರು ಪ್ರಶ್ನೆ ಮಾಡಿದ್ದಾರೆ.
ಮರದಿಂದ ಹಣ್ಣು ಬಿದ್ದರೂ ಮಾದ್ಯಮ ಹೇಳಿಕೆ ಬಿಡುಗಡೆ ಮಾಡುವ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ಮುಖ್ಯ ನ್ಯಾಯಾದೀಶರ ಮೇಲಿನ ಶೂ ದಾಳಿಯ ಘಟನೆಯನ್ನು ಖಂಡಿಸದೇ ಇರುವುದು ಅವರ ಮನಸ್ಥಿತಿಯನ್ನು ಸೂಚಿಸುತ್ತದೆ, ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು ಈ ಘಟನೆಯನ್ನು ಸಂಭ್ರಮಿಸುತ್ತಿರುವುದು ಇದು ಬಿಜೆಪಿಯ ಮನಸ್ಥಿಯ ಪ್ರತಿಫಲನವಾಗಿದೆ ಎಂದು ಪ್ರದೀಪ್ ಬೇಲಾಡಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.












