
ಸಮುದಾಯದ ಅನುಭವ ಶಿಕ್ಷಣ ಜೀವನಕ್ಕೆ ದಾರಿ ದೀಪ : ನರಸಿಂಗ ಶೆಟ್ಟಿ
ಸಮುದಾಯದ ಜೀವನದಲ್ಲಿ ಪಡೆಯುವ ಅನುಭವ ಶಿಕ್ಷಣ ನಿಜ ಜೀವನಕ್ಕೆ ದಾರಿ ದೀಪ. ವಿದ್ಯಾರ್ಥಿಗಳು ಪಠ್ಯ ಶಿಕ್ಷಣದ ಜೊತೆಗೆ ಭೌತಿಕ, ನೈತಿಕ, ನೈತಿಕ, ಸಾಮಾಜಿಕ ಆಧ್ಯಾತ್ಮಿಕ ಶಿಕ್ಷಣಗಳನ್ನು ಜೊತೆ ಜೊತೆಗೆ ಪಡೆಯುವಂತಾಗಬೇಕು. ನಿಸ್ವಾರ್ಥ ಸೇವಾ ಮನೋಭಾವನೆ ಬೆಳೆಸಿಕೊಂಡು ದೇಶದ ಏಳಿಗೆಗೆ ಸಹಕರಿಸುವ ಜವಾಬ್ದಾರಿಯುತ ಪ್ರಜೆಗಳಾಗುವತ್ತ ಸಾಗಬೇಕು ಎಂದು ಕುಕ್ಕೆಹಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನರಸಿಂಗ ಶೆಟ್ಟಿ ನುಡಿದರು. ಅವರು ಪಿ.ಎಮ್.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕೆಹಳ್ಳಿಯಲ್ಲಿ ನಡೆದ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರು ಹಾಲಿ ಸದಸ್ಯ ಕಿರಣ್ ಕುಮಾರ್ ಹೆಗ್ಡೆ ಮಾತನಾಡಿ ನಮ್ಮ ಗ್ರಾಮದಲ್ಲಿ ಕಳೆದ ನೆನಪುಗಳನ್ನು ಇಲ್ಲಿ ಕಲಿತ ಜೀವನ ಪಾಠಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಪೆರ್ಡೂರು ಗುಡಿ ಕೈಗಾರಿಕೆಗಳ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುಲಾಲ್ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳಿ, ಆ ಮೂಲಕ ಪರೋಪಕಾರ ನಿಮ್ಮ ಜೀವನದ ಭಾಗವಾಗಲಿ ಎಂದರು.
ಪಿ.ಎ.ಶ್ರೀ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೆಹಳ್ಳಿಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸಾದ್ ಹೆಗ್ಡೆ ಅವರು ಮಾತನಾಡಿ ಶಿಬಿರ ಸಂಪನ್ನವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಶಿಬಿರಕ್ಕೆ ಸಹಕರಿಸಿದ ಎಲ್ಲರನ್ನು ವಂದಿಸಿದರು.
ಮಣಿಪಾಲ ಜ್ಞಾನಸುಧಾ ಪ.ಪೂ.ಕಾಲೇಜು, ವಿದ್ಯಾನಗರದ ಪ್ರಾಂಶುಪಾಲ ಗಣೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಮಾನ್ಯ ಹಳ್ಳಿಗಿಂತ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಕುಕ್ಕೆಹಳ್ಳಿಯ ಜನತೆ ಶಿಬಿರದ ವಿದ್ಯಾರ್ಥಿಗಳಿಗೆ ತೋರಿಸಿದ ಕಾಳಜಿಗೆ ವಂದಿಸಿದರು.
ಉಡುಪಿ ಜ್ಞಾನಸುಧಾ ಪ.ಪೂ.ಕಾಲೇಜು, ನಾಗಬನ ಕ್ಯಾಂಪಸ್ ನ ಪ್ರಾಂಶುಪಾಲ ಸಂತೋಷ್, ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ (ರಿ.)ನ ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ, ಉದ್ಯಮಿಗಳಾದ ಸುನಿಲ್ ಶೆಟ್ಟಿ, ಪಿ. ಎಮ್. ಶ್ರೀ. ಸ. ಹಿ. ಪ್ರಾ. ಶಾಲೆಯ ಮುಖ್ಯೋಪಾಧ್ಯಾಯರಾದ ಸರಸ್ವತಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ರವೀಂದ್ರ ಕುಮಾರ್, ಎಸ್.ಡಿ.ಎಂ.ಸಿ. ಸದಸ್ಯರಾದ ಅಶ್ವಿನಿ ವಾದಿರಾಜ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಆಯೋಜಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಾದ ಸಮೀಕ್ಷಾ ಪೂಜಾರಿ, ರಕ್ಷಿತ್ ಶೆಟ್ಟಿ, ತನ್ವಿ ಎಸ್ ಆಚಾರ್ಯ, ರಂಜನ್ ಶೆಟ್ಟಿ ಉತ್ತಮ ಸ್ವಯಂಸೇವಕ ಪ್ರಶಸ್ತಿ ಪಡೆದರು. ಅಜೆಕಾರ್ ಪದ್ಮ ಗೋಪಾಲ ಎಜುಕೇಶನ್ ಟ್ರಸ್ಟ್ ನ ವತಿಯಿಂದ ಹೊತ್ತು ಸಾವಿರ ಹಾಗು ಜ್ಞಾನಸುಧಾ ಉಪನ್ಯಾಸಕ ಬಳಗದಿಂದ ಹತ್ತು ಸಾವಿರ ಆತಿಥೇಯ ಶಾಲೆಗೆ ಒಟ್ಟು ಇಪ್ಪತ್ತು ಸಾವಿರ ರೂಪಾಯಿಗಳ ದತ್ತಿ ನಿಧಿ ವಿತರಿಸಲಾಯಿತು. ಆಂಗ್ಲ ಭಾಷಾ ಉಪನ್ಯಾಸಕರಾದ ಶಮಿತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಹಾಗೂ ಉಪ ಪ್ರಾಂಶುಪಾಲರಾದ ರವಿ ಜಿ ಶಿಬಿರದ ವರದಿ ವಾಚಿಸಿ ವಂದಿಸಿದರು.
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

        

