
ಗ್ರಾಮೀಣ ಪ್ರದೇಶದ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿ ಚಾಣಕ್ಯ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಕಲಾ ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯ. ಪ್ರತಿಯೊಬ್ಬರು ತಮಗೆ ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು. ಸತತ ಪ್ರಯತ್ನದಿಂದ ಯಾವುದೇ ಕ್ಷೇತ್ರದಲ್ಲಿ ಮುಂದೆ ಬರಬಹುದು ಎಂದು ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಹೇಳಿದರು.
ಅವರು ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ). ಇವರ ಸಹಯೋಗದೊಂದಿಗೆ ಚಾಣಕ್ಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹೆಬ್ರಿ ಇವರ ನೇತೃತ್ವದಲ್ಲಿ ನಡೆಯುವ ವಾಯ್ಸ್ ಆಪ್ ಚಾಣಕ್ಯ ರಾಜ್ಯಮಟ್ಟದ ಸಂಗೀತ ಸ್ಪರ್ಧೆಯ ಬಗ್ಗೆ ಕಾರ್ಕಳ ರೋಟರಿ ಬಾಲ ಭವನದಲ್ಲಿ ರೋಟರಿ ಕ್ಲಬ್ ಕಾರ್ಕಳ, ರೋಟರಿ ಆನ್ಸ್ ಕ್ಲಬ್ ಮತ್ತು ವಿಹಾನ ಮೆಲೋಡೀಸ್ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯನ್ನು ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ ಇಲ್ಲಿನ ಪ್ರಾಂಶುಪಾಲ ಡಾ. ವಿದ್ಯಾದರ ಹೆಗ್ಡೆ, ಆನ್ಸ್ ಕ್ಲಬ್ಬಿನ ಅಧ್ಯಕ್ಷೆ ಜಯಂತಿ ಆನಂದ ನಾಯಕ್, ವಿಹಾನ ಮೆಲೋಡಿಸ್ ನ ತರಬೇತುದಾರರಾದ ರಮ್ಯ ಸುಧೀಂದ್ರ, ಕಬ್ಬಿನ ಕಾರ್ಯದರ್ಶಿ ಚೇತನ್ ನಾಯಕ್, ಚಾಣಕ್ಯ ಮೆಲೋಡಿಸ್ ನ ಪ್ರಸನ್ನ ಮುನಿಯಾಲ್, ಸುನಿತಾ ಅಂಡಾರು ಮೊದಲಾದವರು ಉಪಸ್ಥಿತರಿದ್ದರು.
ಚಾಣಕ್ಯ ಮೆಲೋಡೀಸ್ ನ ಹಿರಿಯ ಗಾಯಕ ನಿತ್ಯಾನಂದ ಭಟ್ ಪ್ರಾರ್ಥಿಸಿದರು. ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಸಮುದಾಯ ಸೇವಾ ಚೇರ್ಮನ್ ವಸಂತ್ ಎಂ ನಿರೂಪಿಸಿ,ವಿಹಾನಾ ಮೆಲೋಡೀಸ್ ನ ನಿರ್ದೇಶಕ ಶಿವಕುಮಾರ್ ವಂದಿಸಿದರು. ಉಡುಪಿ,ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯ ಗಾಯಕರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.












