ದಾನಶಾಲೆ ಪರಿಸರದಲ್ಲಿ ಮರದಿಂದ ಮರಕ್ಕೆ ಜಿಗಿಯುವ ವೇಳೆ ಬಿದ್ದು ಗಾಯಗೊಂಡಿದ್ದ ಮಂಗ ಅಸಾಹಯಕ ಸ್ಥಿತಿಯಲ್ಲಿತ್ತು. ಹಿಂಬದಿ ಕಾಲಿನಲ್ಲಿ ಬಲವಿಲ್ಲದೆ ನರಳಾಡುವುದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಅರಣ್ಯ ಇಲಾಖೆ ಆರ್ಎಫ್ಒ ಪ್ರಭಾಕರ್ ಕುಲಾಲ್ ಅವರ ಸೂಚನೆ ಮೇರೆಗೆ ಡಿಆರ್ಎಫ್ಒ ಸುಧೀರ್, ಗಸ್ತು ಅರಣ್ಯ ಪಾಲಕ ಯಮನೂರು, ಅರಣ್ಯ ವೀಕ್ಷಕ ರಾಹುಲ್ ಅವರು ಮಂಗನನ್ನು ರಕ್ಷಿಸಿ, ಚಿಕಿತ್ಸೆಗೆ ಕಾರ್ಕಳ ಪಶು ಆಸ್ಪತ್ರೆಗೆ ದಾಖಲಿಸಿದ್ದರು.
ಕಾಲಿನಲ್ಲಿ ಶಕ್ತಿ ಇಲ್ಲದ ಕಾರಣ ಮಂಗ ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ವೈದ್ಯರುಮಂಗನಿಗೆ ಅಗತ್ಯ ಇಂಜೆಕ್ಷನ್ ಹಾಗೂ ಗ್ಲುಕೋಸ್ ನೀಡಿ ಚಿಕಿತ್ಸೆ ನೀಡಿದರು. ಕಳೆದ ಎರಡು ದಿನಗಳಿಂದ ನಿರಂತರ ನಿಗಾ ವಹಿಸಿ ಇಂಜೆಕ್ಷನ್ ನೀಡಿದ ಬಳಿಕ ಮಂಗ ಚೇತರಿಸಿಕೊಂಡಿದೆ. ಮಂಗ ಸಂಪೂರ್ಣವಾಗಿ ಗುಣಮುಖವಾಗಿದ್ದು, ಮರ ಹತ್ತುವಷ್ಟು ಶಕ್ತಿ ಬಂದಿರುವುದನ್ನು ಖಚಿತಪಡಿಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿ, ಅದನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.


















