ಸಮಾನ ಮನಸ್ಕ ಮಹಿಳೆಯರು ಮತ್ತು ಯುವತಿಯರು ಸೇರಿ ನಮ್ಮೂರಿನಲ್ಲಿ ಶ್ರೀ ಮಮ್ಮಾಯಿ ಮಹಿಳಾ ಭಜನಾ ಮಂಡಳಿ ಮತ್ತು ಮಮ್ಮಾಯಿ ಮಹಿಳಾ ಚೆಂಡೆ ಬಳಗವನ್ನು ಸ್ಥಾಪಿಸುವ ಮೂಲಕ ನಮ್ಮೂರಿನ ಕೀರ್ತಿಯನ್ನು ಬೆಳಗಿಸುವ ಮಹಾನ್ ಕಾರ್ಯವು ನಡೆಯಲಿ. ಸಂಸ್ಥೆಯು ನಿರಂತರವಾಗಿ ಅಭಿವೃದ್ಧಿಯಾಗಲಿ. ಸನಾತನ ಧರ್ಮವನ್ನು ರಕ್ಷಿಸಿ ಬೆಳೆಸುವ ಕಾರ್ಯ ನಡೆಯಲಿ ಎಂದು ಸಮಾಜ ಸೇವಕ ಮುಂಬೈ ಉದ್ಯಮಿ ಪಡುಕುಡೂರು ಪಡುಪರ್ಕಳ ಹರೀಶ ಶೆಟ್ಟಿ ಮುಂಬೈ ಹೇಳಿದರು.
ಅವರು ಪಡುಕುಡೂರು ಶ್ರೀ ಮಹಾಗಣಪತಿ ಸೇವಾ ಸಮಿತಿಯ ಗಣಪತಿಕಟ್ಟೆಯಲ್ಲಿ ಭಾನುವಾರ ಶ್ರೀ ಮಮ್ಮಾಯಿ ಮಹಿಳಾ ಭಜನಾ ಮಂಡಳಿ ಮತ್ತು ಮಮ್ಮಾಯಿ ಮಹಿಳಾ ಚೆಂಡೆ ಬಳಗದ ಲೋಕಾರ್ಪಣೆಯ ಸಂಭ್ರಮದಲ್ಲಿ ಮಾತನಾಡಿದರು.
ಭಜನಾ ಸಂಸ್ಥೆ ಸ್ಥಾಪಿಸುವ ಹಲವು ವರ್ಷಗಳ ಕನಸು ನನಸಾಗಿದೆ. ನಿರೀಕ್ಷೆಗೂ ಮೀರಿ ನಮ್ಮೂರಿನ ದಾನಿಗಳ ನೆರವಿನಿಂದ ಸಂಸ್ಥೆಯನ್ನು ಕಟ್ಟಲು ಸಾಧ್ಯವಾಗಿದೆ. ನಮ್ಮೂರಿನ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಭಜನಾ ಮಂಡಳಿ ಪ್ರೇರಣೆಯಾಗಲಿ. ಪಡುಕುಡೂರು ಶ್ರೀ ಭದ್ರಕಾಳಿ ಅಮ್ಮನವರ ಕ್ಷೇತ್ರದ ಮುಖ್ಯಸ್ಥ ದೊಡ್ಡಮನೆ ಪ್ರಶಾಂತ ಶೆಟ್ಟಿ ಮತ್ತು ಪ್ರಧಾನ ಅರ್ಚಕ ಸೂರಿಮಣ್ಣು ಸದಾಶಿವ ಉಪಾಧ್ಯಾಯ ಅವರ ಪ್ರೇರಣೆ ಶುಭಾಶೀರ್ವಾದದಿಂದ ಸಂಸ್ಥೆಯು ಆರಂಭಗೊಂಡಿದೆ. ಎಲ್ಲರೂ ಒಗ್ಗಟ್ಟಾಗಿ ಸಂಸ್ಥೆಯನ್ನು ಬೆಳೆಸಿ ಮುನ್ನಡೆಸಿ ಎಂದು ಹರೀಶ ಶೆಟ್ಟಿ ಹಾರೈಸಿದರು.
ಪಡುಕುಡೂರು ಶ್ರೀ ಭದ್ರಕಾಳಿ ಅಮ್ಮನವರ ಕ್ಷೇತ್ರದ ಪ್ರಧಾನ ಅರ್ಚಕ ಸೂರಿಮಣ್ಣು ಸದಾಶಿವ ಉಪಾಧ್ಯಾಯ ಭಜನಾ ಮಂಡಳಿ ಉದ್ಘಾಟಿಸಿ ಮಾತನಾಡಿ ಪಡುಕುಡೂರಿನ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ಕ್ಷಣ. ಭಜನೆ ಮಂಡಳಿ ಸ್ಥಾಪನೆಯ ಅವಕಾಶ ದೊರೆತಿರುವುದು ನಮ್ಮೇಲ್ಲರ ಪುಣ್ಯ. ಶ್ರೀ ಮಮ್ಮಾಯಿ ಮಹಿಳಾ ಭಜನಾ ಮಂಡಳಿ ಮತ್ತು ಮಮ್ಮಾಯಿ ಮಹಿಳಾ ಚೆಂಡೆ ಬಳಗದಿಂದ ಪಡುಕುಡೂರಿನ ಹೆಸರು ಇನ್ನಷ್ಟು ಬೆಳಗಲಿ, ಶಿಸ್ತು, ಗಟ್ಟಿತನ, ಧಾರ್ಮಿಕ ಪ್ರಜ್ಞೆಯಿಂದ ಸಂಸ್ಥೆಯನ್ನು ಮುನ್ನಡೆಸಿ ಎಂದು ಆಶಿಸಿದರು.
ಚೆಂಡೆ ವಾದನ ಕಲಿಸಿದ ಗುರು ಬನ್ನಂಜೆ ಗೋವಿಂದ ಭಂಡಾರಿ ಮಾತನಾಡಿ ಸಂಪ್ರದಾಯಬದ್ಧವಾಗಿ ಚೆಂಡೆ ವಾದನವನ್ನು ಒಳ್ಳೇಯ ಮನಸ್ಸಿನಿಂದ ಕಲಿತು ಯಶಸ್ವಿಯಾಗಿ ಸಂಸ್ಥೆಯನ್ನು ಬೆಳೆಸಿ ಯುವ ಸಮುದಾಯವನ್ನು ಆಕರ್ಷಿಸಿ ಸಂಸ್ಥೆಗೆ ಸೇರಿಸಿ ಮುನ್ನಡೆಸಿ ಎಂದು ಹಾರೈಸಿದರು.
ಶ್ರೀ ಮಮ್ಮಾಯಿ ಮಹಿಳಾ ಭಜನಾ ಮಂಡಳಿ ಮತ್ತು ಮಮ್ಮಾಯಿ ಮಹಿಳಾ ಚೆಂಡೆ ಬಳಗದ ಸ್ಥಾಪನೆಗೆ ಕೊಡುಗೆ ನೀಡಿದ ದಾನಿಗಳನ್ನು ಮತ್ತು ಚೆಂಡೆ ವಾದನ ಕಲಿಸಿದ ಗುರು ಬನ್ನಂಜೆ ಗೋವಿಂದ ಭಂಡಾರಿ, ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಸೂರಿಮಣ್ಣು ಸದಾಶಿವ ಉಪಾಧ್ಯಾಯ ಮತ್ತು ಭಜನೆಯ ಕಲಿಸಿದ ಗುರು ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿಯ ಅಕ್ಷತಾ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಪಡುಕುಡೂರು ದೊಡ್ಡಮನೆ ಮನೋಹರ ಶೆಟ್ಟಿ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಪಡುಕುಡೂರು ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಯುವ ಮುಖಂಡ ಪ್ರಸನ್ನ ಶೆಟ್ಟಿ, ಪಡುಕುಡೂರು ಡೈರಿಯ ಅಧ್ಯಕ್ಷ ಪಟೇಲರ ಮನೆ ಜಗದೀಶ ಹೆಗ್ಡೆ, ಶ್ರೀ ಮಹಾಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಆಚಾರ್ಯ, ಶ್ರೀ ಮಹಾಗಣಪತಿ ಮಹಿಳಾ ಸೇವಾ ಸಮಿತಿಯ ಅಧ್ಯಕ್ಷೆಯಾದ ಭಜನಾ ಮಂಡಳಿ ಮತ್ತು ಚೆಂಡೆ ಬಳಗದ ಮುಖ್ಯಸ್ಥೆ ಶಶಿಕಲಾ ಶೆಟ್ಟಿ, ಸಮಾಜಸೇವಕ ಅಶೋಕ ಎಂ ಶೆಟ್ಟಿ, ಮುನಿಯಾಲು ಮಹಾಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಸುಧಾಕರ ಶೆಟ್ಟಿ, ಭಜನಾ ಮಂಡಳಿ ಮತ್ತು ಚೆಂಡೆ ಬಳಗದ ಅಮಿತಾ ಜಿ. ಶೆಟ್ಟಿ, ತಾರಾವತಿ ಜ್ಯೋತಿಪ್ರಸಾದ್ ಶೆಟ್ಟಿ, ಸವಿತಾ ಶಂಕರ ಶೆಟ್ಟಿ ಸಹಿತ ಭಜನಾ ಮಂಡಳಿ ಮತ್ತು ಚೆಂಡೆ ಬಳಗದ ಸದಸ್ಯರು, ಊರಿನ ಗಣ್ಯರು, ದಾನಿಗಳು, ಪ್ರಮುಖರು, ಉಪಸ್ಥಿತರಿದ್ದರು. ಶಿಕ್ಷಕಿ ಬಳಗದ ಸದಸ್ಯೆ ರಂಜಿತಾ ಎಚ್ ಪಡುಕುಡೂರು ನಿರೂಪಿಸಿ ಸ್ವಾಗತಿಸಿ ವಂದಿಸಿದರು. ಅಮಿತಾ ಜಿ. ಶೆಟ್ಟಿ ಸನ್ಮಾನಪತ್ರ ವಾಚಿಸಿದರು.




















