ಉಡುಪಿ:ಗಿರಿಜಾ ಸರ್ಜಿಕಲ್ಸ್ ಎದುರು ಮುಂಬೈ ಆಲಾರೇ ಗೋವಿಂದ ತಂಡದಿಂದ ಮಡಕೆ ಒಡೆಯುವ ಪ್ರದರ್ಶನ
ಶ್ರೀ ಸಾಯಿಲಕ್ಷ್ಮಿ ಉಡುಪಿ ಸಂಸ್ಥೆಯ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುಂಬೈ ಬಾಲಮಿತ್ರ ವ್ಯಾಯಾಮ ಶಾಲೆಯ ಮಂದಿ ಸದಸ್ಯರ ಆಲಾರೇ ಗೋವಿಂದ ತಂಡದಿಂದ ಇಂದು (ಸೆ.15ಕ್ಕೆ) ಮಿತ್ರಪ್ರಿಯ ಆಸ್ಪತೆಯ ಬಳಿಯ ಗಿರಿಜಾ ಸರ್ಜಿಕಲ್ ಮುಂಬಾಗ ಅಡಿ ಎತ್ತರದಲ್ಲಿ ಮಡಕೆ ಒಡೆಯುವ ಪ್ರದರ್ಶನ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ
ಪದವಿಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ ಇದರ ವತಿಯಿಂದ ಕಾರ್ಕಳದ ಕೆ.ಎಂ.ಇ.ಎಸ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಬಾಲಕಿಯರ ವಿಭಾಗದ ಕಾರ್ಕಳ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದುಕೊಂಡು ಉಡುಪಿ ಜಿಲ್ಲಾಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದೆ.
ಪ್ರಥಮ ವಾಣಿಜ್ಯ ವಿಭಾಗದ ವರುಣ ಶೆಟ್ಟಿ, ರಕ್ಷಾ, ರುಫಿಯಾ ಬಾನು, ಸಾಚಿ ಶೆಟ್ಟಿ, ಪ್ರಥಮ ವಿಜ್ಞಾನ ವಿಭಾಗದ ಪ್ರೀತಾ, ಅದಿತಿ ಆಚಾರ್ಯ, ಶ್ರಾವ್ಯ ಶೆಟ್ಟಿ, ದ್ವಿತೀಯ ವಾಣಿಜ್ಯ ನೇಹಾ ವಿ, ರವೀನಾ, ದ್ವಿತೀಯ ವಿಜ್ಞಾನ ವಿಭಾಗದ ಶ್ರುತ ತಂಡವನ್ನು ಪ್ರತಿನಿಧಿಸಿದ್ದರು. ವರುಣ ಶೆಟ್ಟಿ ಬೆಸ್ಟ್ ಅ್ಯಟಾಕರ್ ಪ್ರಶಸ್ತಿ ಪಡೆದರೆ ಶ್ರಾವ್ಯ ಶೆಟ್ಟಿ ಬೆಸ್ಟ್ ಪಾಸರ್ ಪ್ರಶಸ್ತಿ ಪಡೆದುಕೊಂಡರು.
ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಪ್ರಸಾದ್, ಪ್ರಕಾಶ್, ಲಾವಣ್ಯ ತಂಡವನ್ನು ತರಬೇತುಗೊಳಿಸಿದ್ದರು.
ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ಸೈಬರ್ ಸೆಕ್ಯೂರಿಟಿ ಬಗೆಗಿನ ಸೆಂಟರ್ ಆಫ್ ಎಕ್ಸಲೆನ್ಸ್
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ಅತ್ಯಾಧುನಿಕ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲು ಜಪಾನ್ ನ ವಿಲ್ ಡಿಸೈನ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ.
ನಿಟ್ಟೆ ತಾಂತ್ರಿಕ ಕಾಲೇಜಿನ ಸೈಬರ್ ಸೆಕ್ಯೂರಿಟಿ ವಿಭಾಗದ ಮುಖ್ಯಸ್ಥ ಡಾ.ರೋಷನ್ ಫರ್ನಾಂಡಿಸ್ ಮತ್ತು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಸಹಯೋಗಗಳ ನಿರ್ದೇಶಕ ಪ್ರೊ.ಹರಿಕೃಷ್ಣ ಭಟ್ ಅವರ ಮಾರ್ಗದರ್ಶನದಲ್ಲಿ ಈ ಕೇಂದ್ರವು ಜಾಗತಿಕ ಜ್ಞಾನ ವಿನಿಮಯ, ವಿಶೇಷ ತರಬೇತಿ ಮತ್ತು ಅಂತರರಾಷ್ಟ್ರೀಯ ವೃತ್ತಿ ಅವಕಾಶಗಳನ್ನು ಉತ್ತೇಜಿಸುತ್ತಿದೆ. ವಿದ್ಯಾರ್ಥಿಗಳು ಈಗಾಗಲೇ ಜಪಾನ್ ನಲ್ಲಿ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ. ಇನ್ನೂ ಹಲವರು ಸ್ಟೈಫಂಡ್ ನೊಂದಿಗೆ ಇಂಟರ್ನ್ ಶಿಪ್ ಗೆ ಆಯ್ಕೆಯಾಗಿದ್ದಾರೆ.
ಈ ಉಪಕ್ರಮವು ಶೀಘ್ರದಲ್ಲೇ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮಗಳಾಗಿ ಮತ್ತು ಡಿಜಿಟಲ್ ವಿಧಿವಿಜ್ಞಾನ ಸುಧಾರಿತ ಸೌಲಭ್ಯಗಳಾಗಿ ವಿಸ್ತರಿಸಲಿದೆ. ಸಂಶೋಧನೆ ಮತ್ತು ಅಂತರರಾಷ್ಟ್ರೀಯ ಸಹಯೋಗದ ಬಲದೊಂದಿಗೆ ಕೇಂದ್ರವು ಡಿಜಿಟಲ್ ಬೆದರಿಕೆಗಳನ್ನು ಪರಿಹರಿಸಲು ಕಾರ್ಯಪ್ರವೃತ್ತವಾಗಲಿದೆ. ಈ ಉತ್ಕೃಷ್ಟತಾ ಕೇಂದ್ರವನ್ನು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಎನ್ ವಿನಯಾ ಹೆಗ್ಡೆ ಅವರು ವಿಲ್ ಡಿಸೈನ್ ಜಪಾನ್ ನ ಅಧಿಕಾರಿಗಳಾದ ನವೋಟಕಾ ತಗುಚಿ,ಹಿರೋಶಿ ನಕಯಾಮಾ ಮತ್ತು ತಕಾಶಿ ತ್ಸುಜಿಯುಚಿ ಅವರ ಸಮ್ಮುಖದಲ್ಲಿ ಸೆ.೧೫ ರಂದು ಉದ್ಘಾಟಿಸಲಿದ್ದಾರೆ.
ಜಿಲ್ಲಾ ಪಂಚಾಯತ್ ಉಡುಪಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಹಾಗೂ ಪೂರ್ಣಪ್ರಜ್ಞಾ ಪ.ಪೂ ಕಾಲೇಜು ಉಡುಪಿ ಇವರ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಕಾರ್ಕಳದ ಕೈಸ್ಟ್ಕಿಂಗ್ ಪದವಿಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ರಿಹಾನ್ ಶೇಖ್ ಬೆಳ್ಳಿಯ ಪದಕ ಪಡೆದುಕೊಂಡಿದ್ದಾನೆ.
ದೇಶದಲ್ಲಿ ಬಲಿಷ್ಠ ಹಾಗೂ ಜನಪರ, ಭ್ರಷ್ಟಾಚಾರ ರಹಿತ ಆಡಳಿತ ನೀಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸಿದ ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಜನ್ಮದಿನಾಚರಣೆಯ ಅಂಗವಾಗಿ ಬಿಜೆಪಿಯಿಂದ “ಸೇವಾ ಪಾಕ್ಷಿಕ” ಸಾಮಾಜಿಕ ಸೇವಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ದೇಶಾದ್ಯಂತ “ಸೇವಾ ಪಾಕ್ಷಿಕ” ಅಭಿಯಾನದಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವಾದ ಸೆ.17 ರಿಂದ ಮಹಾತ್ಮ ಗಾಂಧಿ ಜನ್ಮದಿನ ಅ. 02 ರ ಅನೇಕ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿದೆ. ಇದರ ಅಂಗವಾಗಿ ಕಾರ್ಕಳ ಮಂಡಲದಲ್ಲಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಸೇವಾ ಪಕ್ಷಿಕಾ ಅಭಿಯಾನವು ಸೆ. 17 ರಿಂದ ಅ. 2 ರವರೆಗೆ ದೇಶವ್ಯಾಪಿಯಾಗಿ ನಡೆಯಲಿರುವ ಸೇವಾ ಕಾರ್ಯಕ್ರಮಗಳ ಸರಣಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಜೊತೆಗೆ ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಸ್ಮರಿಸುವ ಉದ್ದೇಶ ಹೊಂದಿದೆ. ಇದರಡಿಯಲ್ಲಿ ರಕ್ತದಾನ ಶಿಬಿರಗಳು, ಸ್ವಚ್ಛತಾ ಅಭಿಯಾನಗಳು, ಆರೋಗ್ಯ ತಪಾಸಣೆ ಶಿಬಿರಗಳು, ವೃಕ್ಷಾರೋಪಣಾ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಜನಸೇವಾ ಕಾರ್ಯಗಳನ್ನು ನಡೆಸಲಾಗುತ್ತದೆ. ಕಾರ್ಕಳ ಮಂಡಲದ ವಿವಿಧ ಭಾಗಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ನವೀನ್ ನಾಯಕ್ ತಿಳಿಸಿದರು.
ಈ ಅಭಿಯಾನವು “ಸೇವೆ, ಸುಶಾಸನ ಮತ್ತು ಗರೀಬ್ ಕಲ್ಯಾಣ” ಎಂಬ ಪಾರ್ಟಿಯ ಪ್ರಮುಖ ತತ್ವದ ಆಧಾರದ ಮೇಲೆ “ಸೇವೆ ಪರಮ ಧರ್ಮ” ಎಂಬ ಮನೋಭಾವದಿಂದ ಸಮಾಜದ ವಿವಿಧ ವರ್ಗಗಳನ್ನು ಸಂಪರ್ಕಿಸಿ, ಜನರ ಹಿತಕ್ಕಾಗಿ ಸೇವೆ ಸಲ್ಲಿಸುವ ಉದ್ದೇಶವನ್ನು ಹೊಂದಿದೆ.
ಮುಂದಿನ ದಿನಗಳಲ್ಲಿ ಕಾರ್ಕಳ ಮಂಡಲದ ವಿವಿಧ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ, ಆರೋಗ್ಯ ತಪಾಸಣೆ ಶಿಬಿರ ಹಾಗೂ ಯುವಜನರನ್ನು ಒಳಗೊಂಡ ಕಾರ್ಯಕ್ರಮಗಳನ್ನು ನಡೆಸಲಾಗುವುದು.
ಈ ಕಾರ್ಯಾಗಾರದಲ್ಲಿ ಮಂಡಲ ಅಧ್ಯಕ್ಷ ನವೀನ್ ನಾಯಕ್, ಜಿಲ್ಲಾ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಮುಖಂಡರಾದ ಮಣಿರಾಜ್ ಶೆಟ್ಟಿ, ಸೇವಾ ಪಕ್ಷಿಕಾದ ಮಂಡಲ ಸಂಚಾಲಕರಾದ ಸತೀಶ್ ಬೋಳ, ರವೀಂದ್ರ ಕುಮಾರ್, ಪ್ರವೀಣ್ ಸಾಲಿಯಾನ್, ವಿವಿಧ ಶಕ್ತಿಕೇಂದ್ರಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು, ಎಲ್ಲಾ ಮೋರ್ಚಾಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಹಾಗೂ ಗ್ರಾಮ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಬೋಳ ಸ್ವಾಗತಿಸಿದರು, ಕಾರ್ಯದರ್ಶಿ ಹರ್ಷವರ್ಧನ್ ನಿಟ್ಟೆ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಜಿಲ್ಲಾ ಪಂಚಾಯತ್ ಉಡುಪಿ, ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳು ಕಾರ್ಕಳ ಇವರ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದ ಫುಟ್ಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ತಂಡವನ್ನು ಪ್ರತಿನಿಧಿಸಿದ್ದ ಐವರು ವಿದ್ಯಾರ್ಥಿಗಳು ಮೈಸೂರು ವಿಭಾಗಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಎಂಟನೇ ತರಗತಿಯ ದಿಯಾ ಪೋಲ್, ಶ್ರುತ ರಾವ್, ಪಾವನಿ, ಕನಿಷ್ಕ ಕುಲ್ದೀಪ್ ಹಾಗೂ ಸಾನ್ವಿ ಎಂ ನಾಯಕ್ ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದು, ಇವರು ವಿಭಾಗಮಟ್ಟದ ಪಂದ್ಯಾಟದಲ್ಲಿ ಉಡುಪಿ ಜಿಲ್ಲಾ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಕಾರ್ಕಳದ ಕೆ.ಎಂ.ಇ.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಸೆ. 11 ರಂದು ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ವಾಲಿಬಾಲ್ ಪಂದ್ಯಾವಳಿಯಲ್ಲಿ ಬೈಲೂರಿನ ಸರಕಾರಿ ಪದವಿ ಪೂರ್ವ ಕಾಲೇಜು ಹುಡುಗಿಯರ ತಂಡ ದ್ವಿತೀಯ ಸ್ಥಾನ ಪಡೆದಿದೆ.
ಆಸಿನಿ, ಭೈರವಿ ಮತ್ತು ಸುಚಿತ್ರ ಜಿಲ್ಲಾ ಮಟ್ಟದ ಪಂದ್ಯಾಟಕ್ಕಾಗಿ ಕಾರ್ಕಳ ತಂಡದಲ್ಲಿ ಸ್ಥಾನವನ್ನು ಗಳಿಸಿದ್ದಾರೆ. ಇದರೊಂದಿಗೆ ಹುಡುಗರ ತಂಡದ ಅತ್ಯುತ್ತಮ ಆಟಗಾರ ಆದಿತ್ಯ ಕೂಡ ಜಿಲ್ಲಾ ಮಟ್ಟದ ಪಂದ್ಯಾಟಕ್ಕಾಗಿ ಕಾರ್ಕಳ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ತಂಡದ ಸಾಧನೆಗಾಗಿ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ತಂಡದ ತರಬೇತುದಾರರಾದ ದೈಹಿಕ ಶಿಕ್ಷಕ ಫೆಡ್ರಿಕ್ ರೆಬೆಲ್ಲೋ, ಕ್ರೀಡಾ ಸಂಚಾಲಕರಾದ ಉಪನ್ಯಾಸಕ ಗಾಡ್ಫ್ರೆಡ್ ಡಿ ಕರ್ಕಡ, ಹಳೆಯ ವಿದ್ಯಾರ್ಥಿ ಅಭಿಮನ್ಯು ಇವರನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಮುಂಡ್ಕೂರು ತೋಟದ ಮನೆಯಲ್ಲಿ ಆ. 23ರಂದು ನಡೆದ ಅಡಕೆ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ತಾಂತ್ರಿಕ ಆಯಾಮದಲ್ಲಿ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಗೆ ಅಚ್ಚರಿಯೂ ಆಗಿದ್ದಾರೆ. ಎಲ್ಲಾ 12 ಆರೋಪಿಗಳು ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ವಿಚಾರಣೆ ವೇಳೆ ಬಟ್ಟೆ ಖರೀದಿ, ಇನ್ನಿತರೆ ಮೋಜು ಮಾಡಲು ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
12 ಮಂದಿಯನ್ನು ಬಂಧಿಸಿ, 5 ಲಕ್ಷ ರೂ. ಮೌಲ್ಯದ 1100 ಕೆಜಿ ಅಡಿಕೆ ವಶಪಡಿಸಿಕೊಳ್ಳಲಾಗಿದೆ. ಬಾಲ ಅಪರಾಧಿಗಳನ್ನು ಪೊಲೀಸರು ಬಾಲ ನ್ಯಾಯಮಂಡಳಿಗೆ ಹಾಜರುಪಡಿಸಿದ್ದಾರೆ.
ಈ ಕಾರ್ಯಾಚರಣೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿ ರಾಮ್ ಶಂಕರ್ ಮಾರ್ಗದರ್ಶನದಲ್ಲಿ ನಿರೀಕ್ಷಕ ಮಂಜಪ್ಪ ಅವರ ನೇತೃತ್ವದಲ್ಲಿ, ಕಾರ್ಕಳ ಗ್ರಾಮಾಂತರ ಠಾಣೆಯ ಪಿಎಸ್ಐಗಳಾದ ಪ್ರಸನ್ನ ಎಂ.ಎಸ್., ಸುಂದರ, ಎಎಸ್ಐಗಳಾದ ಪ್ರಕಾಶ್, ಸುಂದರ ಗೌಡ, ಸಿಬ್ಬಂದಿ ರುದ್ರೇಶ್, ಚಂದ್ರಶೇಖರ, ಮಹಂತೇಶ್ , ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ಸಿಬ್ಬಂದಿ ದಿನೇಶ್, ನಿತಿನ್ ಅವರ ತಂಡವು ಕಾರ್ಯಾಚರಣೆ ನಡೆಸಿದ್ದಾರೆ.
ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ವಾಣಿಜ್ಯ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನವನ್ನು ಸೆ.10 ರಂದು ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಉದ್ಘಾಟಿಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ವಾಣಿಜ್ಯ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನವು ವಿದ್ಯಾರ್ಥಿಗಳಲ್ಲಿನ ಹೊಸತನದ ಹುಡುಕಾಟದ ಪುಟ್ಟ ಹೆಜ್ಜೆ, ಏಕೆಂದರೆ ಈ ತಲೆಮಾರಿನ ವಿದ್ಯಾರ್ಥಿಗಳಲ್ಲಿ ಮತ್ತು ಯುವಜನರಲ್ಲಿ ದೇಶವನ್ನು ಪುನರ್ ನಿರ್ಮಿಸುವ ಜವಬ್ದಾರಿ ಇದೆ. ಪುನರ್ ನಿರ್ಮಿಸುವುದು ಅಂದರೆ ಸ್ವಾತಂತ್ರ್ಯ ಪೂರ್ವದ ಹೋರಾಟವಲ್ಲ, ಬದಲಿಗೆ ಕರ್ತೃತ್ವ ಶಕ್ತಿಯ ಮೂಲಕ ಮರು ನಿರ್ಮಾಣ. ಹಾಗಾಗಿ ನಮ್ಮ ನೆಲೆಯಲ್ಲಿ ಸಣ್ಣ ಕೆಲಸಗಳ ಮೂಲಕ ಯುವಜನಾಂಗ ಈ ದೇಶಕ್ಕಾಗಿ ಬದುಕಬೇಕು. ಅದಕ್ಕೆ ಪೂರಕ ಶಿಕ್ಷಣ ಸಿಗುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ದಿನೇಶ್ ಎಂ ಕೊಡವೂರು ಮಾತನಾಡಿ ವಿದ್ಯಾರ್ಥಿಗಳು ನಿರ್ಧಿಷ್ಟವಾದ ಗುರಿಯನ್ನು ಇಟ್ಟುಕೊಂಡು ಕಾರ್ಯಪ್ರವತ್ತರಾಗಬೇಕು, ಅಂಕಗಳಿಕೆಗೆ ಸೀಮಿತವಾಗದ ಕಲಿಕೆಗೆ ನಾವು ಗಮನಕೊಡುತ್ತ ಸಮಗ್ರ ಅಭ್ಯೂದಯದ ಕಡೆಗೆ ಗಮನಹರಿಸಬೇಕು. ಪರೀಕ್ಷೆಯ ಅಂಕಗಳು ವಿದ್ಯಾರ್ಥಿಯ ಕಾರ್ಯಕ್ಷಮತೆ, ಶ್ರದ್ಧೆ, ಏಕಾಗ್ರತೆಗಳನ್ನು ಪ್ರತಿನಿಧಿಸುತ್ತದೆ. ಆದರೆ ಅಂಕಗಳೇ ಒಬ್ಬ ವ್ಯಕ್ತಿಯನ್ನು ಅಳೆಯುವ ಅಂತಿಮ ಮಾನದಂಡವಲ್ಲ. ಹೀಗಾಗಿ ಕೌಶಲ್ಯ, ದೇಶಭಕ್ತಿ, ಸಾಮಾಜಿಕ ಜವಾಬ್ದಾರಿಗಳ ಕಡೆಗೂ ಗಮನ ಕೊಡಬೇಕು ಹಾಗೂ ಪ್ರತಿಯೊಬ್ಬರೂ ನಮ್ಮ ದೇಶ, ನಮ್ಮ ಸಮಾಜ ಎನ್ನುವ ಅಭಿಮಾನವನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾ ಕುಮಾರಿ ಬಿ.ಕೆ. ಮಾತನಾಡಿ ವಾಣಿಜ್ಯ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನವು ನಮ್ಮ ವಿದ್ಯಾರ್ಥಿಗಳಲ್ಲಿನ ಪ್ರಾಯೋಗಿಕ ಕೌಶಲ್ಯವನ್ನು ಬಿಂಬಿಸುವುದಾಗಿದೆ, ಈ ಮೂಲಕ ತರಗತಿಗಳಲ್ಲಿ ಪಡೆದ ಜ್ಞಾನವನ್ನು ಹೇಗೆ ಜೀವನದಲ್ಲಿ ಅಳವಡಿಸುತ್ತಾರೆ ಎನ್ನುವುದನ್ನು ತೋರಿಸುವ ಪ್ರಯತ್ನ ಇದಾಗಿದೆ. ಹಾಗೆಯೇ ಈ ರೀತಿಯ ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಹೊಸ ರೀತಿಯ ಆಲೋಚನೆಗಳಿಗೆ ಪ್ರಚೋದಿಸುತ್ತದೆ, ಹಾಗಾಗಿ ನಮ್ಮ ಶಿಕ್ಷಣ ಸಂಸ್ಥೆ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು. ಎರಡು ದಿನಗಳ ಈ ಪ್ರದರ್ಶನದಲ್ಲಿ ಉಡುಪಿ ಜಿಲ್ಲೆಯ ಸುಮಾರು 20 ಪದವಿ ಪೂರ್ವ ಕಾಲೇಜುಗಳ 1750ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪ್ರದರ್ಶನ ವೀಕ್ಷಣೆಗೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಐಕ್ಯೂಎಸಿ ಸಂಯೋಜಕ ಪ್ರಕಾಶ್ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕಿ ನಿಶ್ಮಿತಾ ವಂದಿಸಿದರು. ಉಪನ್ಯಾಸಕಿ ಮೀನಾಕ್ಷಿ ಕಾರ್ಯಕ್ರಮವನ್ನು ನಿರೂಪಿಸಿದರು.
ಜಿಲ್ಲಾ ಪಂಚಾಯತ್ ಉಡುಪಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಇವರ ಸಹಯೋಗದಲ್ಲಿ ಸರಕಾರಿ ಪ್ರೌಢಶಾಲೆ ಕಾವಡಿ ಇಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ ಉಡುಪಿ ಜಿಲ್ಲಾಮಟ್ಟದ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪೌಢಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದೆ.
ಒಂಬತ್ತನೇ ತರಗತಿಯ ಶಗುನ್ ವರ್ಮಾ, ಶೈನಿ ಡಿಸೋಜಾ, ಕಾರ್ತಿಕಾ ಶೆಟ್ಟಿ, ಆಶಿಕಾ, ಹತ್ತನೇ ತರಗತಿಯ ವಿದ್ಯಾಶ್ರೀ, ಕೀರ್ತನಾ ಡಿಸೋಜ, ಎಂಟನೇ ತರಗತಿಯ ಸಾನ್ವಿ ಶೆಟ್ಟಿ ತಂಡವನ್ನು ಪ್ರತಿನಿಧಿಸಿದ್ದು, ಇದರಲ್ಲಿ ಒಂಬತ್ತನೇ ತರಗತಿಯ ಶೈನಿ ಡಿಸೋಜಾ, ಶಗುನ್ ವರ್ಮಾ ಮತ್ತು ಕಾರ್ತಿಕಾ ಶೆಟ್ಟಿ ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಪಂದ್ಯಾಟದಲ್ಲಿ ಶಗುನ್ ವರ್ಮಾ ಬೆಸ್ಟ್ ಅಟ್ಯಾಕರ್ ಮತ್ತು ಶೈನಿ ಡಿಸೋಜ ಬೆಸ್ಟ್ ಪಾಸರ್ ಪ್ರಶಸ್ತಿ ಪಡೆದುಕೊಂಡರು.
ಇದರ ಜೊತೆಗೆ ಪ್ರಾಥಮಿಕ ವಿಭಾಗದ ಬಾಲಕಿಯರ ಕಾರ್ಕಳ ತಾಲೂಕು ತಂಡವು ಜಿಲ್ಲಾಮಟ್ಟದಲ್ಲಿ ಫ್ರಥಮ ಸ್ಥಾನ ಪಡೆದುಕೊಂಡಿದ್ದು ತಂಡ ಪ್ರತಿನಿಧಿಸಿದ್ದ ಸಂಸ್ಥೆಯ ವಿದ್ಯಾರ್ಥಿನಿಯರಾದ ಆರನೇ ತರಗತಿಯ ತ್ರಿಷ್ಮಾ ಎಸ್, ಕೆಟ್ಲಿನ್ ಏಂಜೆಲ್ ಪಿಂಟೊ, ಎಲ್ಸಾ ರುಬೆಲ್ ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತ್ರಿಷ್ಮಾ.ಎಸ್ ಪಂದ್ಯಾಟದ ಬೆಸ್ಟ್ ಅಟ್ಯಾಕರ್ ಪ್ರಶಸ್ತಿ ಪಡೆದುಕೊಂಡರು.